ಕನ್ನಡಪ್ರಭ ವಾರ್ತೆ ಸವದತ್ತಿ
ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆಗಳು ವ್ಯವಸ್ಥೆಯನ್ನು ಎಚ್ಚರಿಸುವುದರ ಜೊತೆಗೆ ಅರಾಜಕತೆ ತೊಡೆದು ಹಾಕುವ ಕೆಲಸ ಮಾಡುತ್ತಿವೆ. ಪ್ರಸ್ತುತ ಸನ್ನಿವೇಶಗಳಲ್ಲಿ ಲಾಬಿ, ವಸೂಲಿಗಳಿಂದ ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಹೃದಯ ಕಾವ್ಯ ಪ್ರಶಸ್ತಿ ತನ್ನ ಪಾರದರ್ಶಕತೆಯಿಂದ ವಿಭಿನ್ನವಾಗಿ ಗುರುತಿಸಿಕೊಂಡು ನಾಡಿನಾದ್ಯಂತ ಹೆಸರು ಮಾಡಿದೆ ಎಂದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಾ ಕದಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಸತಿ ನಿಲಯದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮ್ಮ ಸೌಭಾಗ್ಯವಾಗಿದೆ. ನಿಲಯದ ಮಕ್ಕಳು ಕನ್ನಡ ಭುವನೇಶ್ವರಿಯ ವರದಾನ ಪಡೆದ ಕವಿಗಳು, ಸಾಹಿತಿಗಳನ್ನು ಕಣ್ಣಾರೆ ಕಂಡು ಅವರ ಮಾತು ಕೇಳಿ ಸ್ಫೂರ್ತಿ ಪಡೆಯುವ ಸದವಕಾಶವನ್ನು ಒದಗಿಸಿಕೊಟ್ಟ ಪ್ರತಿಷ್ಠಾನಕ್ಕೆ ಇಲಾಖೆಯಿಂದ ಕೃತಜ್ಞತೆ ಸಲ್ಲಿಸುವೆ ಎಂದರು.ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಪುಗಾರರಾದ ಡಾ. ಸಿ. ಕೆ. ನಾವಲಗಿ ಸ್ಥೂಲವಾಗಿ ಪ್ರಶಸ್ತಿ ಕೃತಿಗಳ ಒಳನೋಟ ಪರಿಚಯಿಸಿದರು. ಸವಿರಾಜ್ ಆನಂದೂರು, ಡಾ.ದಸ್ತಗೀರ್ಸಾಬ್ ದಿನ್ನಿ ಅವರಿಗೆ ತಲಾ ₹೫ ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕದೊಂದಿಗೆ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ನಾಡು-ನುಡಿ ಸೇವೆಗೈದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕವಿಗೋಷ್ಠಿಯಲ್ಲಿ ಎಂ.ಡಿ.ಬಾವಾಖಾನ್, ಗಂಗಾ ಚಕ್ರಸಾಲಿ, ಶಿವರಾಜ್ ಅರಳಿ, ಸೌಮ್ಯ ಕೋಟಗಿ, ಮಂಜುನಾಥ ಸಿಂಗನ್ನವರ, ಎಫ್.ಎಲ್. ಮದಹಳ್ಳಿ, ವೈ.ಬಿ.ಕಡಕೋಳ, ಆನಂದ ಏಣಗಿ, ಬಿ.ಎಂ.ಬಾವಾಖಾನ್, ಚನಬಸಯ್ಯ ಪೂಜೇರ, ಬಸವರಾಜ ಪತ್ತಾರ ಕವಿತೆ ವಾಚಿಸಿದರು. ಮುಖ್ಯ ಅತಿಥಿ, ನಿಲಯ ಪಾಲಕ ಹಾಶೀಮ್ ತಹಸೀಲ್ದಾರ್ ಹಾಗೂ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ಪ್ರವೀಣ ಶೆಟ್ಟೆಪ್ಪನವರ ಸ್ವಾಗತಿಸಿ, ಎಂ.ಪಿ.ಪಾಟೀಲ ನಿರೂಪಿಸಿ, ಎಸ್.ಬಿ.ಗರಗದ ಗ್ರಂಥ ಸಮರ್ಪಣೆ ಮಾಡಿದರು. ರಮೇಶ್ ತಳವಾರ ವಂದಿಸಿದರು.