ಕನ್ನಡಪ್ರಭ ವಾರ್ತೆ ಕೋಟ
ಗ್ರಾಮೀಣ ಕರಾವಳಿ ಭಾಗದಲ್ಲಿ ಪಚ್ಚಿಲೆ (ಚಿಪ್ಪು ಮೀನು) ಕೃಷಿಯ ಮೂಲಕ ಸ್ವಾವಲಂಬಿ ಬದುಕು ಸಾಧ್ಯವಿದೆ ಎಂದು ಕೋಟದ ಮತ್ಸ್ಯೋದ್ಯಮಿ ಆನಂದ್ ಸಿ. ಕುಂದರ್ ಹೇಳಿದರು.ಅವರು ಇಲ್ಲಿನ ಕೋಡಿಕನ್ಯಾಣದ ಪರಿಸರದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಮೀನುಗಾರಿಕಾ ಕಾಲೇಜು ಮಂಗಳೂರು, ಸ್ಕೊಡ್ವೆಸ್ ಸಂಸ್ಥೆ, ಆಯುಷ್ಮಾನ್ಭವ ಸಂಸ್ಥೆ, ಉಡುಪಿ ಕಿನಾರ ಮೀನುಗಾರ ಉತ್ಪಾದಕ ಕಂಪನಿ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿಗಳ ಜಂಟಿ ಸಹಭಾಗಿತ್ವದಲ್ಲಿ ಪಚ್ಚಿಲೇ ಮೇಳ -2024 ನ್ನು ಉದ್ಘಾಟಿಸಿ ಮಾತನಾಡಿದರು.
ಪಚ್ಚಿಲೆ ಕೃಷಿ ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಸಿದ್ಧಗೊಳ್ಳುತ್ತಿದೆ. ಪುರುಷ ಮಹಿಳೆಯರು ಸರಿಸಮಾನವಾಗಿ ಈ ಸ್ವಉದ್ಯೋಗದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆಧುನಿಕತೆಗೆ ತಕ್ಕಂತೆ ಮೀನುಗಾರಿಕಾ ಕ್ಷೇತ್ರ ಬದಲಾವಣೆ ಅಗತ್ಯವಾಗಿದೆ. ಮತ್ಸಮೇಳಗಳ ಮೂಲಕ ಯುವ ಆಸಕ್ತ ಮನಸ್ಸುಗಳನ್ನು ಈ ಉದ್ಯಮದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.ಈ ಮತ್ಸ ಮೇಳದ ಮಳಿಗೆಗಳನ್ನು ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಉದ್ಘಾಟಿಸಿ, ಮತ್ಸ್ಯ ಮೇಳಗಳಿಂದ ಮೀನುಗಾರಿಕಾ ಕ್ಷೇತ್ರಕ್ಕಾಗುವ ಲಾಭ ಸೇರಿದಂತೆ ಸರ್ಕಾರದ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎಚ್.ಎನ್.ಆಂಜನೇಯಪ್ಪ, ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ರಾಜ್, ಉಪನಿರ್ದೇಶಕ ಡಾ.ರಾಜೇಶ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್., ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಂಕಿತ ಅಧಿಕಾರಿ ಡಾ. ಪ್ರವೀಣ್ ಸಿ.ಎಚ್., ಉಡುಪಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಮತ್ಸ್ಯೋದ್ಯಮಿ ಶಂಕರ್ ಕುಂದರ್, ಜಿಲ್ಲಾ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎ.ಅಶೋಕ್ ಕುಮಾರ್ ಕೊಡ್ಗಿ, ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಅಧ್ಯಕ್ಷ ಲೋಹಿತ್ ಖಾರ್ವಿ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷೆ ಬೇಬಿ ಮೆಂಡನ್ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಮಂಜು ನಾಯ್ಕ್ ಭಾಗವಹಿಸಿದರು. ಕಾರ್ಯಕ್ರಮವನ್ನು ಸ್ಕೊಡ್ವೆಸ್ ಸಂಸ್ಥೆಯ ಸಂಯೋಜಕ ಗಂಗಾಧರ್ ಪ್ರಸ್ತಾವನೆ ಸಲ್ಲಿಸಿ ನಿರೂಪಿಸಿದರು. ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದೀನ ಕೋಡಿ ವಂದಿಸಿದರು.