ಶ್ರೀರಂಗಪಟ್ಟಣ: ತಾಲೂಕಿನ ಕೆ.ಆರ್.ಎಸ್ ಅಣೆಕಟ್ಟೆಯ ದಕ್ಷಿಣ ದ್ವಾರದ ಒಳಗೆ ಅಪರಿಚಿತ ಯುವಕ ಹಾಗೂ ಆತನ ಸ್ನೇಹಿತರು ಇಳಿದು ತೆಗೆದುಕೊಂಡಿದ್ದ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವುದರಿಂದ ಅಣೆಕಟ್ಟೆ ಭದ್ರತೆ ಬಗ್ಗೆ ಪ್ರಶ್ನೆ ಮೂಡಿದೆ.
ಅಣೆಕಟ್ಟೆ ಭದ್ರತೆಗಾಗಿಯೇ ಪ್ರತ್ಯೇಕವಾಗಿ ಕರ್ನಾಟಕ ಕೈಗಾರಿಕಾ ಪಡೆ ನಿಯೋಜನೆಗೊಂಡಿದ್ದರೂ ಸಹ ಯುವಕನೊಬ್ಬ ಆತನ ಸ್ನೇಹಿತರು ಅಣೆಕಟ್ಟೆಯ ಒಳಭಾಗದಲ್ಲಿ ಇಳಿದು ಸೆಲ್ಫಿ ವಿಡಿಯೋ ಮಾಡಿದ್ದು, ಅಣೆಕಟ್ಟೆ ಭದ್ರತೆ ಕುರಿತು ಆತಂಕ ಎದುರಾಗಿದೆ.ಅಣೆಕಟ್ಟೆ ಮೇಲ್ಭಾಗದಲ್ಲಿ ಮತ್ತು ಅಣೆಕಟ್ಟೆಯ ಕೆಳಭಾಗದಲ್ಲಿ ಯಾರು ಕೂಡ ತೆರಳದಂತೆ ನಿಷೇಧಿಸಲಾಗಿದೆ. ಆದರೂ ಅಣೆಕಟ್ಟೆ ಒಳಗೆ ಪ್ರವೇಶ ಮಾಡಿ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಯುವಕ ತನ್ನ ಮೊಬೈಲ್ ಮೂಲಕ ಸೆಲ್ಫಿ ವಿಡಿಯೋ ಮಾಡಿ ನಮ್ಮನ್ನು ಒಳಗಡೆ ಬಿಟ್ಟಿಲ್ಲ. ಆದರೆ, ನಾವು ಬೇರೆಡೆಯಿಂದ ಬಂದು ವಿಡಿಯೋ ತೆಗೆದು ಲೈವ್ನಲ್ಲಿ ಹಾಕುತ್ತಿದ್ದು, ಅಣೆಕಟ್ಟೆ ಬರಿದಾಗಿದೆ ನೋಡಿ ಎಂಬ ಮಾತುಗಳು ವೈರಲ್ ಆಗಿದೆ.
ಅಣೆಕಟ್ಟೆ ಭದ್ರತೆಗೆ ಪ್ರತ್ಯೇಕವಾಗಿ ಕರ್ನಾಟಕ ಕೈಗಾರಿಕಾ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. ಇಲ್ಲಿಗೆ ಸುಮಾರು 200 ಸಿಬ್ಬಂದಿ ಅವಶ್ಯಕತೆ ಇದೆ. ಆದರೆ, ಕೇವಲ 60 ಸಿಬ್ಬಂದಿ ಮಾತ್ರ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಅಣೆಕಟ್ಟೆಯ ಕೆಲ ಪಾಯಿಂಟ್ಗಳಲ್ಲಿ ಮಾತ್ರ ಭದ್ರತೆ ಒದಗಿಸಲಾಗುತ್ತಿದ್ದು, ಗಸ್ತು ಕೂಡ ಮಾಡುವುದು ಕಷ್ಟವಾಗಿದೆ. ಅಣೆಕಟ್ಟೆಯ ಮುಖ್ಯದ್ವಾರದ ಸಮೀಪ ಈ ಘಟನೆ ನಡೆದಿದ್ದು, ಪೊಲೀಸರ ಕರ್ತವ್ಯ ಲೋಪದಿಂದ ಈ ಘಟನೆ ನಡೆದಿದೆಯೇ ಎಂಬುದು ಸಾರ್ವಜನಿಕರು, ರೈತರ ಪ್ರಶ್ನೆಯಾಗಿದೆ.‘ಸಾರ್ವಜನಿಕರ ಮೂಲಕ ನಮಗೆ ವಿಡಿಯೋ ಮಾಹಿತಿ ಸಿಕ್ಕಿದ್ದು, ಈ ಯುವಕರು ಎಲ್ಲಿಂದ ಬಂದಿರಬಹುದು ಎಂಬುದು ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ, ಅಕ್ರಮ ಪ್ರವೇಶ ಮಾಡಿದ ಈ ಮೂವರು ಯುವಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.’
ಪ್ರಮೋದ್, ಸಹಾಯಕ ಕಮಾಡೆಂಟ್, ಕೆ.ಎಸ್.ಐ.ಎಸ್.ಎಫ್, ಕೆ.ಆರ್.ಸಾಗರ ವಿಭಾಗ.