ಕನ್ನಡಪ್ರಭ ವಾರ್ತೆ ಮೈಸೂರು
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಜಾಗೃತ ಕರ್ನಾಟಕ, ದಲಿತ ವಿದ್ಯಾರ್ಥಿ ಒಕ್ಕೂಟ, ಸಂಶೋಧಕರ ಸಂಘ, ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಸಂಘ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ- 2025- ಚಾರಿತ್ರಿಕ ಹಿನ್ನೆಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ ಕುರಿತು ವಿಚಾರಗೋಷ್ಠಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಳಿದವರಿಗೆ ಹಾಗೂ ದಲಿತರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಲ ತುಂಬಲು ಮೀಸಲಾತಿ ಕೊಡಲಾಗುತ್ತದೆ. ಯಾರು ಹಿಂದುಳಿದಿರುತ್ತಾರೋ ಅವರಿಗೆ ಶಕ್ತಿ ತುಂಬಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ನಮ್ಮ ಸಂವಿಧಾನ ಕೂಡ ಹೇಳುತ್ತದೆ ಎಂದರು.ಸಮೀಕ್ಷೆ ಮಾಡಿ ಯಾರು ದುರ್ಬಲರೆಂದು ಗುರುತಿಸಲು ಡೇಟಾ ಬಹಳ ಮುಖ್ಯ. ಯಾವ ವರ್ಗದವರು ಹಿಂದುಳಿದಿದ್ದಾರೆ, ಅವರ ಸಾಮಾಜಿಕ ಹಾಗೂ ಔದ್ಯೋಗಿಕ ಸ್ಥಿತಿ ಏನು ಎಂದು ತಿಳಿದುಕೊಂಡರೆ ಹಿಂದುಳಿದ ವರ್ಗದವರಿಗೆ ಬಲ ತುಂಬಲು ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಯಾವ ಜಾತಿಯಲ್ಲಿ ಹುಟ್ಟುತ್ತಾರೋ ಅದೇ ಜಾತಿಯಲ್ಲಿ ಸಾಯುವವರೆಗೂ ಜೀವಿಸಬೇಕಾಗಿದೆ. ಹೀಗಾಗಿ, ಜಾತಿ ಹುಟ್ಟಿನಿಂದಲೇ ನಮ್ಮ ಯೋಗ್ಯತೆ, ಸ್ಥಾನಮಾನ, ಯಾವ ಉದ್ಯೋಗ ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಇಂತಹ ಕ್ರೂರವಾದ, ಶೋಷಣೆ ಮಾಡುವ ಜಾತಿ ವ್ಯವಸ್ಥೆ ಯಾವ ದೇಶದಲ್ಲೂ ಇಲ್ಲ. ಬೇರೆ ಸಮಾಜದಲ್ಲೂ ವರ್ಗಗಳ ಅಸಮಾನತೆ ಇರುತ್ತದೆ. ಶಿಕ್ಷಣ ಪಡೆದು, ಹಣ ಗಳಿಸಿ ಉನ್ನತ ಉದ್ಯೋಗ ಪಡೆದುಕೊಂಡಾಗ ಅವರು ಶ್ರೀಮಂತರಾಗುತ್ತಾರೆ. ಆ ಸಮಾಜದಲ್ಲಿ ವರ್ಗ ತಾರತಮ್ಯ ಹೊರಟು ಹೋಗುತ್ತದೆ ಎಂದು ಅವರು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದ ಮಾತ್ರ ಹಿಂದುಳಿದವರು ವಿದ್ಯೆ, ಉದ್ಯೋಗವನ್ನು ಮೀಸಲಾತಿ ಮೂಲಕ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಸಂವಿಧಾನದಿಂದ ಮಾತ್ರ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತಿದೆ. ರಾಜಕೀಯದಲ್ಲಿ ಮೀಸಲಾತಿ ಇರುವುದರಿಂದ ದಲಿತರು, ಶೂದ್ರರು, ಹಿಂದುಳಿದವರು ಕಾಣಿಸಿಕೊಳ್ಳುತ್ತಾರೆ. ಆದರೆ, ಸಮಾಜವನ್ನು ನಿಯಂತ್ರಿಸುವ ಆಯಾಕಟ್ಟಿನ ಅಧಿಕಾರ ಸ್ಥಾನದಲ್ಲಿ ಮೊದಲು ಕಾಣಿಸಿಕೊಳ್ಳುವುದೇ ಕೆಲವೇ ಸಮುದಾಯದವರು ಮಾತ್ರ ಎಂದು ಅವರು ತಿಳಿಸಿದರು.
ಶಾಸಕ ಡಿ. ರವಿಶಂಕರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ನಿವೃತ್ತ ಡಿವೈಎಸ್ಪಿ ಸುಹೇಲ್ ಅಹ್ಮದ್, ಹೋರಾಟಗಾರ್ತಿ ಸವಿತಾ ಪ. ಮಲ್ಲೇಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ದಮನಿತ ಸಮಾಜಗಳ ಜನಪರ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಂ. ಗಾಡ್ಕರ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್ ಆಲನಹಳ್ಳಿ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ವಕೀಲ ರಮೇಶ್ ಗೌಡ ಮೊದಲಾದವರು ಇದ್ದರು. ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಸ್ವಾಗತಿಸಿದರು.
ಬಾಕ್ಸ್...
ಜಾತಿ ಸಮೀಕ್ಷೆಗೆ ಮುಂದಾದಾಲೆಲ್ಲಾ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಜಾತಿ ಸಮೀಕ್ಷೆಯಿಂದ ಮುಂದುವರಿದಿರುವ ಜಾತಿಗಳನ್ನು ತಿಳಿಯಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಯಾವುದೇ ಸಮುದಾಯಗಳನ್ನು ತುಳಿಯಲು ಸಮೀಕ್ಷೆ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
----
ಕೋಟ್...ಜಾತಿ ವ್ಯವಸ್ಥೆ ಹೋಗಲಾಡಿಸಲು ಮೀಸಲಾತಿ, ಉದ್ಯೋಗ ಹಾಗೂ ಶಿಕ್ಷಣ ನೀಡಲು ಅವಕಾಶ ಮಾಡಿಕೊಟ್ಟರು. ಜಾತಿ ವ್ಯವಸ್ಥೆ ಹೋಗಲಾಡಿಸಲು ಇಷ್ಟು ಮಾಡಿದರೆ ಸಾಲದು, ಅಂತರ್ಜಾತಿ ವಿವಾಹ ಮಾಡಬೇಕು, ಧರ್ಮ ಸುಧಾರಣೆ ಮಾಡಬೇಕು.
- ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ----
ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕಾದರೆ ಹಾಗೂ ಸಂವಿಧಾನ ಜಾರಿಯಾಗಬೇಕಾದರೆ ಈ ಸಮೀಕ್ಷೆ ನಡೆಯಬೇಕು. ಸಮೀಕ್ಷೆಯಲ್ಲಿ ಅಲ್ಪ ಸ್ವಲ್ಪ ದೋಷವಿದ್ದರೆ ತಿದ್ದಿಕೊಳ್ಳಬಹುದು. ಅದನ್ನು ಬಿಟ್ಟು ನಾನು ಲೆಕ್ಕ ಕೊಡಲ್ಲ, ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಎಂದು ಹೇಳಬಾರದು. ಸಮೀಕ್ಷೆ ವಿರೋಧಿಸುವವರನ್ನು ಎಲ್ಲರೂ ವಿರೋಧಿಸಬೇಕು.- ಡಾ.ಎಚ್.ಪಿ. ವಾಸು, ಕಾರ್ಯಕಾರಿ ಸಮಿತಿ ಸದಸ್ಯ, ಜಾಗೃತ ಕರ್ನಾಟಕ