ಕುಷ್ಟಗಿ: ನಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶ ಹಾಗೂ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೇವಲ ಒಬ್ಬರು,ಇಬ್ಬರಿಂದ ಇಂತಹ ಕಾರ್ಯ ಸಾಧ್ಯವಿಲ್ಲ, ಸಮಾಜದಲ್ಲಿನ ಪ್ರತಿಯೊಬ್ಬರು ಸ್ವಚ್ಛತೆಗೆ ಕೈಜೋಡಿಸಿದಾಗ ಬದಲಾವಣೆ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಹೇಳಿದರು.
ಪಟ್ಟಣದ ಸ್ವಚ್ಛತೆಯು ಕೇವಲ ಪುರಸಭೆ ಸಿಬ್ಬಂದಿಗಳ ಕರ್ತವ್ಯ ಮಾತ್ರವಲ್ಲ, ಅದು ನಮ್ಮ ಪಟ್ಟಣ ಎಂದುಕೊಂಡು ಎಲ್ಲೆಂದರಲ್ಲಿ ಕಸ ಹಾಕದೇ ನಿಗದಿತ ಸ್ಥಳದಲ್ಲಿ ಕಸ ಹಾಕುವ ಮೂಲಕ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರು ಸಹಿತ ಮುಖ್ಯಪಾತ್ರ ವಹಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಸತೀಶ, ವಕೀಲರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ ಕುಷ್ಟಗಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ, ಇಂದಿರಾ ಸುಹಾಸಿನಿ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ನ್ಯಾಯಾಲಯದ ಶಿರಸ್ಥೆದಾರ ಗೋವಿಂದ, ಆದಪ್ಪ, ಯಲ್ಲಪ್ಪ, ಶಾಮಿದ ಹಾಗೂ ವಕೀಲರ ಸಂಘದ ಸದಸ್ಯರು ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಸುನಿಲ್ ಕುಮಾರ, ಪುರಸಭೆ ಸಿಬ್ಬಂದಿ ಪ್ರಾಣೇಶ ಹಾಗೂ ಪೌರಕಾರ್ಮಿಕರು ಹಾಜರಿದ್ದರು.ಮೌನಾಚರಣೆ: ಕುಷ್ಟಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.