ನ್ಯಾಮತಿ ಪಟ್ಟಣದಲ್ಲಿ ಸರಣಿ ಕಳವು: ಶ್ವಾನದಳದೊಂದಿಗೆ ಪರಿಶೀಲನೆ

KannadaprabhaNewsNetwork |  
Published : Jul 24, 2024, 12:21 AM ISTUpdated : Jul 24, 2024, 12:22 AM IST
ದೇಗುಲ ಹಾಗೂ ಮನೆ ಕಳ್ಳತನ ನಡೆದಿರುವ ಸ್ಥಳಕ್ಕೆ ಶ್ವಾನದಳ ತಂಡ ತುಂಗಾ 2, ಪೊಲೀಸರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  | Kannada Prabha

ಸಾರಾಂಶ

ನ್ಯಾಮತಿ ಪಟ್ಟಣದಲ್ಲಿ ಭಾನುವಾರ ರಾತ್ರಿ ವಿವಿಧೆಡೆ ದೇಗುಲ ಹಾಗೂ ಮನೆಗಳಲ್ಲಿ ಸರಣಿ ಕಳವು ಪ್ರಕರಣಗಳು ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

- ಭಾನುವಾರ ರಾತ್ರಿ ದೇಗುಲ, ವಿವಿಧೆಡೆ ಮನೆಗಳಲ್ಲಿ ಚಿನ್ನಾಭರಣ, ನಗದು ಕಳವು

- ಮನೆಯ ಅಕ್ಕಪಕ್ಕದ ಮನೆಗಳ ಚಿಲಕಗಳ ಹಾಕಿ ಚಾಲಾಕಿ ಕಳ್ಳರಿಂದ ಕೃತ್ಯ- - - ಕನ್ನಡಪ್ರಭ ವಾರ್ತೆ, ನ್ಯಾಮತಿ

ಪಟ್ಟಣದಲ್ಲಿ ಭಾನುವಾರ ರಾತ್ರಿ ವಿವಿಧೆಡೆ ದೇಗುಲ ಹಾಗೂ ಮನೆಗಳಲ್ಲಿ ಸರಣಿ ಕಳವು ಪ್ರಕರಣಗಳು ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಕಾಳಮ್ಮ ದೇಗುಲದ ಬೀಗ ಒಡೆದು ಶಿಲಾಮೂರ್ತಿ ಮೇಲಿದ್ದ ಬಂಗಾರದ ತಾಳಿ, ಬಂಗಾರದ ನತ್ತು ಕದ್ದಿದ್ದಾರೆ. ದೇಗುಲದ ಕಾಣಿಕೆ ಹುಂಡಿ ಒಡೆಯಲು ಯತ್ನಿಸಿದ್ದಾರೆ. ನೆಹರೂ ರಸ್ತೆಯ ಕೊಲ್ಲೂರು ಮೂಕಾಂಬಿಕಾ ದೇಗುಲದ ಹುಂಡಿ ಒಡೆದು, ಕಾಣಿಕೆ ಹಣ ದೋಚಿದ್ದಾರೆ.

ಅಷ್ಟೇ ಅಲ್ಲದೇ, ಮರಿಡೇರ ಬೀದಿಯ ಹೊಸಮನೆ ರಾಜಪ್ಪ ಅವರ ಮನೆ ಬೀರುವಿನಲ್ಲಿದ್ದ ಸುಮಾರು 5 ತೊಲ ಬಂಗಾರ-ನಗದು, ವಿಶ್ವೇಶ್ವರಯ್ಯ ಬೀದಿಯ ಗಡೇಕಟ್ಟೆ ಯಶೋಧಮ್ಮನವರ ಮನೆ ಬೀರುವಿನಲ್ಲಿದ್ದ 200 ಗ್ರಾಂ ತೂಕದ ಬೆಳ್ಳಿ ಆಭರಣ, ₹15 ಸಾವಿರ ಹಣ, ಮಾರಿಗುಡಿ ಬೀದಿಯ ಸಾವಿತ್ರಮ್ಮ ಅವರ ಮನೆಯಲ್ಲಿ ಬೀರುವಿನಲ್ಲಿದ್ದ ₹80 ಸಾವಿರವನ್ನು ಕಳ್ಳರು ದೋಚಿದ್ದಾರೆ.

ನ್ಯಾಮತಿ ಪಟ್ಟಣದ ಅಂಚೆ ಕಚೇರಿ ಹಿಂಭಾಗದ ನಿವಾಸಿ ಹನುಮಂತ ರಾವ್‌ ಎಂಬವರ ಮನೆಯಲ್ಲಿ ಮುಂಬಾಗಿಲ ಬೀಗ ಒಡೆದು ಒಳನುಗ್ಗಿರುವ ಕಳ್ಳರು, ಬೀರು ತೆಗೆದು, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಳವು ನಡೆಸಿದ್ದಾರೆ. ಚಾಲಾಕಿ ಕಳ್ಳರು ಕೃತ್ಯ ನಡೆಸುವ ಮುನ್ನ ಅಕ್ಕಪಕ್ಕದ ಮನೆಗಳ ಬಾಗಿಲುಗಳ ಚಿಲಕಗಳನ್ನು ಹಾಕಿ, ಕಳವಿನ ಕೈ ಚಳಕ ತೋರಿದ್ದಾರೆ. ಶಿವಾನಂದಪ್ಪ ಬಡಾವಣೆ, ಚಂದ್ರಹಾಸ್‌ ಬಡಾವಣೆಯಲ್ಲಿಯೂ ಮನೆಗಳಲ್ಲಿ ಕಳ್ಳತನ ನಡೆಸಲು ಯತ್ನಿಸಿ ಪರಾರಿಯಾಗಿದ್ದಾರೆ.

ದೇಗುಲ ಹಾಗೂ ಮನೆಗಳಲ್ಲಿ ಸರಣಿ ಕಳವು ಪ್ರಕರಣಗಳು ನಡೆದ ಹಿನ್ನೆಲೆ ಸ್ಥಳಕ್ಕೆ ಶ್ವಾನದಳ ತಂಡ ತುಂಗಾ-2, ಪೊಲೀಸರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ ಕ್ರೈಂ ವಿಭಾಗದ ಅಡಿಷನಲ್‌ ಎಸ್‌ಪಿ ಮಂಜುನಾಥ, ಅಪರಾಧ ತನಿಖಾಧಿಕಾರಿ ದೇವರಾಜ್‌, ಶ್ರೀನಾಥ್‌, ಬೆರಳಚ್ಚು ತಜ್ಞ ಇಸ್ಮಾಯಿಲ್‌, ನ್ಯಾಮತಿ ಠಾಣೆಯ ಸಿಪಿಐ ಎನ್‌.ಎಸ್‌.ರವಿ, ಪಿಎಸ್‌ಐ ಬಿ.ಎಲ್‌. ಜಯಪ್ಪ ನಾಯ್ಕ, ಸಿಬ್ಬಂದಿ ಡಿ.ಎನ್‌.ದೇವರಾಜ್‌, ಮಹೆಶ್‌ ನಾಯ್ಕ, ತಿಮ್ಮರಾಜು, ಚನ್ನೇಶ್‌, ಎ.ಆನಂದ್‌, ಮತ್ತಿತರರಿದ್ದರು.

- - - (-ಫೋಟೋ ಇದೆ)

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ