ಕನ್ನಡಪ್ರಭ ವಾರ್ತೆ ಪಾಂಡವಪುರ
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲೂಕಿನಾದ್ಯಂತ ಹೆಣ್ಣುಮಕ್ಕಳು ಹೊಸ ಉಡುಗೆ ತೊಟ್ಟು ಎಳ್ಳು ಬೆಲ್ಲ ಹಂಚುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಿದರು.
ಹಬ್ಬದ ಅಂಗವಾಗಿ ಮನೆ ಮುಂದೆ ಬಗೆಬಗೆ ಬಣ್ಣಗಳಿಂದ ರಂಗೋಲಿ ಹಾಕಿ, ಬಳಿಕ ದೇವರಿಗೆ ಎಳ್ಳುಬೆಲ್ಲ, ಕಬ್ಬು ಇಟ್ಟು ಪೂಜೆ ಸಲ್ಲಿಸಿದರು. ನಂತರ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಎಳ್ಳೆಬೆಲ್ಲ ತೆಗೆದುಕೊಂಡು ಮನೆಮನೆಗಳಿಗೆ ತೆರಳಿ ಎಳ್ಳು ಬೆಲ್ಲ ನೀಡುವ ಮೂಲಕ ಹಬ್ಬದ ಶುಭಾಶಯ ಹೇಳಿದರು.
ಎತ್ತು, ಹಸುಗಳನ್ನು ಬೆಳಗ್ಗೆಯೇ ಸ್ವಚ್ಚಗೊಳಿಸಿ ಬಗೆಬಗೆಯ ಬಣ್ಣಗಳು, ಹೂವು, ಅಲಂಕಾರ ವಸ್ತುಗಳಿಂದ ಶೃಂಗಾರಗೊಳಿಸಿದರು. ಚಿಕ್ಕಮರಳಿ ಗ್ರಾಮದಲ್ಲಿ ಎತ್ತುಗಳಿಗೆ ಶ್ರೀರಾಮನ ಚಿತ್ರ, ಸೇಬಿನ ಹಾಕಿರುವ ಎತ್ತುಗಳು ವಿಶೇಷವಾಗಿದ್ದವು.
ಬಳಿಕ ಗ್ರಾಮದ ಹೊರವಲಯಗಳಲ್ಲಿ ಸಂಜೆಯ ವೇಳೆಗೆ ಸಂಪ್ರದಾಯದಂತೆ ಬೆಂಕಿಯಲ್ಲಿ ಕಿಚ್ಚು ಹಾಯಿಸುವ ಮೂಲಕ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರು.
ಸಂಕ್ರಾಂತಿ ಅಂಗವಾಗಿ ಹೆಣ್ಣು ಮಕ್ಕಳು ಎಳ್ಳು, ಬೆಲ್ಲ ಹಂಚಿ ಸಂಭ್ರಮ
ಭಾರತೀನಗರ: ಮಕರ ಸಂಕ್ರಾಂತಿ ಅಂಗವಾಗಿ ಮಹಿಳೆಯರು, ಮಕ್ಕಳು, ಎಳ್ಳು, ಬೆಲ್ಲ, ಕಬ್ಬು ಹಂಚಿ ಸಂಭ್ರಮಿಸಿದರು.ಗಂಡಸರು ಜಾನುವಾರುಗಳನ್ನು ಶೃಂಗರಿಸಿ ಪೂಜೆಸಲ್ಲಿಸುವ ಮೂಲಕ ಸಂಪ್ರದಾಯ ಬದ್ದವಾಗಿ ಸಡಗರ ಸಂಭ್ರಮದಿಂದ ಹಬ್ಬವನ್ನು ಕೆಲವು ಕಡೆ ಆಚರಿಸಿದರು.
ಸುತ್ತಮುತ್ತಲಿನ ಸಣ್ಣಕ್ಕಿರಾಯಸ್ವಾಮಿ, ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರಸ್ವಾಮಿ, ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಶ್ರೀಬೊಮ್ಮಲಿಂಗೇಶ್ವರ, ಕರಡಕೆರೆ ಹನುಮಂತರಾಯ ಸ್ವಾಮಿ, ಮೆಳ್ಳಹಳ್ಳಿ ಶನೇಶ್ವರ, ಕೆ.ಎಂ.ದೊಡ್ಡಿ ಗಣಪತಿ ದೇವಸ್ಥಾನ ಸೇರಿದಂತೆ ಇಲ್ಲಿನ ಸುತ್ತಮುತ್ತಲ ಹತ್ತಾರು ದೇವಾಲಯಗಳಲ್ಲಿ ಭಕ್ತಾಧಿಗಳು ಪೂಜೆಸಲ್ಲಿಸಿದರು.
ಹನುಮಂತನಗರದ ಶ್ರೀಆತ್ಮಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಿ ಸ್ವರ್ಗದ ಬಾಗಿಲನ್ನು ತೆರೆದು ಭಕ್ತಾದಿಗಳಿಗೆ ಸ್ವರ್ಗದ ಬಾಗಿಲಿನಿಂದ ಹೋಗುವಂತೆ ಅನುವು ಮಾಡಿಕೊಡಲಾಗಿತ್ತು.
ಹೆಣ್ಣುಮಕ್ಕಳು, ಗೃಹಿಣಿಯರು ಮನೆಯ ಮುಂದೆ ರಂಗೋಲಿಗಳನ್ನು ಬಿಟ್ಟು ಹೊಸ ಉಡುಪುಗಳನ್ನು ತೊಟ್ಟು ಮೆನೆ-ಮನೆಗೆ ತೆರಳಿ ಎಳ್ಳು, ಬೆಲ್ಲ, ಕಬ್ಬುನ್ನು ಹಂಚಿದರು.