ಸಮಾಜ ಪರಿವರ್ತಿಸುವ ಗುರಿ ಇಟ್ಟಕೊಳ್ಳಿ

KannadaprabhaNewsNetwork |  
Published : Apr 27, 2025, 01:46 AM IST
26ಕೆಪಿಎಲ್27 ಶಿವಪ್ರೀಯಾ ಕಾನೂನು ವಿದ್ಯಾಲಯದಲ್ಲಿ ನಡೆದ ಕಾನೂನು ನೆರವು ಮತ್ತು ಜಾಗೃತಿ ಕಾರ್ಯಕ್ರಮ | Kannada Prabha

ಸಾರಾಂಶ

ಕಾನೂನು ಹಾಗೂ ಸಂವಿಧಾನ ಬಾಹಿರ ಕೆಲಸ ಮಾಡಬಾರದು. ಸಾಮಾಜಿಕ ನ್ಯಾಯ, ಆರ್ಥಿಕ ಮತ್ತು ರಾಜಕೀಯ ನ್ಯಾಯ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಮೂಲಭೂತ ಹಕ್ಕುಗಳ ಉಲ್ಲಂಘನೆ ಆದಾಗ ಕಾನೂನಿನ ಮೊರೆ ಹೋಗಬೇಕು.

ಕೊಪ್ಪಳ:

ಯುವಜನತೆ ಸಮಾಜವನ್ನು ಪರಿವರ್ತಿಸುವ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಜೀವನದ ಮಹತ್ತರ ಘಟ್ಟ ತಲುಪಲು ಮೊದಲು ನಕಾರಾತ್ಮಕ ಭಾವನೆ ತೊಲಗಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶ ಮಹಾಂತೇಶ ದರಗದ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಿಕಲಚೇತನ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಶಿವಪ್ರಿಯಾ ಕಾನೂನು ವಿದ್ಯಾಲಯದಲ್ಲಿ ನಡೆದ ಕಾನೂನು ನೆರವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂವಿಧಾನ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು. ಹುಟ್ಟಿನಿಂದ ತೊಡಗಿ ವ್ಯಕ್ತಿಯ ಅಂತ್ಯದ ನಂತರವೂ ಹಿಂಬಾಲಿಸುವುದು ಕಾನೂನು ಎಂದ ಅವರು, ಕಾನೂನು ಹಾಗೂ ಸಂವಿಧಾನ ಬಾಹಿರ ಕೆಲಸ ಮಾಡಬಾರದು. ಸಾಮಾಜಿಕ ನ್ಯಾಯ, ಆರ್ಥಿಕ ಮತ್ತು ರಾಜಕೀಯ ನ್ಯಾಯ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಮೂಲಭೂತ ಹಕ್ಕುಗಳ ಉಲ್ಲಂಘನೆ ಆದಾಗ ಕಾನೂನಿನ ಮೊರೆ ಹೋಗಬೇಕು. ಸಂವಿಧಾನದ ಹೇಳಿರುವ ನಿಯಮಗಳ ಪಾಲನೆ ಹಾಗೂ ಕಾನೂನಿನ ಅರಿವಿದ್ದುಕೊಂಡು ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರ ದೇಶದ ಆಡಳಿತ ಯಂತ್ರ ಸುಧಾರಿಸಲು ಸಾಧ್ಯ ಎಂದು ಹೇಳಿದರು.

ರಾಮರಾಜ್ಯದ ಕಲ್ಪನೆ ಕಂಡರೆ ಸಾಲದು, ಅದನ್ನು ಸಾಕಾರಗೊಳಿಸಬೇಕಾದರೆ ಯುವಜನತೆ ಕಾನೂನು ಅಧ್ಯಯನ ಮಾಡಿಕೊಂಡು ಆಡಳಿತಾತ್ಮಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಾಗಬೇಕು. ಉನ್ನತ ಆಡಳಿತ ಹುದ್ದೆಗಳಲ್ಲಿ ಕರ್ತವ್ಯ ಮಾಡುವ ಮೂಲಕ ಸದೃಢ ದೇಶ ಕಟ್ಟುವ ಮನಸ್ಸು ವಿದ್ಯಾರ್ಥಿಗಳಲ್ಲಿ ಇರಬೇಕಾಗಿದೆ. ಇದಕ್ಕಾಗಿ ಕನಸು ಕಾಣಬೇಕು. ಎತ್ತರಕ್ಕೆ ಬೆಳೆಯುವ ತುಡಿತ ಹುಟ್ಟಿಕೊಳ್ಳಬೇಕು. ಕನಸು ನನಸು ಮಾಡಿಕೊಳ್ಳುವಲ್ಲಿ ಪೂರಕವಾಗಿ ಸ್ಪಂದಿಸುವ ವಿಷಯಗಳೆಲ್ಲವನ್ನೂ ಅರಿಯುವ ಪ್ರಯತ್ನ ಮಾಡಬೇಕು ಎಂದರು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಶಿಧರ ಸಕ್ರಿ ಉಪನ್ಯಾಸ ನೀಡಿದರು. ಈ ವೇಳೆ ಹಿರಿಯ ವಕೀಲ ರಾಘವೇಂದ್ರ ಘಟನಘಂಟಿ, ಪ್ರಾಂಶುಪಾಲರಾದ ಡಾ. ಬಸವರಾಜ ಹನಸಿ, ನರೇಂದ್ರ, ಉಪನ್ಯಾಸಕರಾದ ರಜೀಯಾಬೇಗಂ, ಸೋಮಶೇಖರ ಸೇರಿದಂತೆ ಕಾನೂನು ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ
ಗುರಿ ಸಾಧಿಸಲು ಕಠಿಣ ಏಕಾಗ್ರತೆ ಅಗತ್ಯ