ಬಸವರಾಜ ಹಿರೇಮಠ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್ ಹೆಸರಿನಲ್ಲಿ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆ ಸ್ಥಾಪನೆಯ ಚಟುವಟಿಕೆ ಯಾದವಾಡ-ಪುಡಕಲಕಟ್ಟಿ-ಕರಡಿಗುಡ್ಡ ಗ್ರಾಮಗಳ ಗಡಿ (ಇರಕಾಳು)ಯಲ್ಲಿ ತಲೆ ಎತ್ತಲು ಹವನಿಸುತ್ತಿದೆ.
ಆದರೆ, ಕಾರ್ಖಾನೆಯ ಕಾಲಂ ಪೂಜೆಗೆ ಆಗಮಿಸಿದ್ದ ಸಚಿವೆ ಹೆಬ್ಬಾಳಕರ, ಪುತ್ರ ಮೃಣಾಲ ವಿರುದ್ಧ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಹತ್ತು-ಹಲವು ಸವಾಲುಗಳ ಮಧ್ಯೆ ಇರಕಾಳಿನ ಪ್ರದೇಶದಲ್ಲಿ ಈ ಕಾರ್ಖಾನೆ ಮೊಳಕೆಯೊಡೆಯಲಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ.ಹೋರಾಟಕ್ಕೆ ಕಾರಣ?: ಈ ಭಾಗದಲ್ಲಿ ಕಾರ್ಖಾನೆಯೊಂದು ಶುರುವಾದರೆ ಉದ್ಯೋಗ ಸೃಷ್ಟಿ, ವ್ಯಾಪಾರ-ವಹಿವಾಟು, ಸುತ್ತಲಿನ ಪ್ರದೇಶದ ಭೂಮಿ ಮೌಲ್ಯ ಏರಿಕೆ, ರೈತರ ಆದಾಯ ದ್ವಿಗುಣ ಸೇರಿದಂತೆ ಹಲವು ಅನುಕೂಲತೆ ಇದ್ದು, ಕಾರ್ಖಾನೆ ಬರುತ್ತಿರುವ ಹಿನ್ನೆಲೆಯಲ್ಲಿ ಖುಷಿ ಪಡಬೇಕಾದ ಜನತೆ ಅದರಲ್ಲೂ ಸ್ಥಳೀಯರು ಈ ಕಾರ್ಖಾನೆಯ ಸ್ಥಾಪನೆ ವಿರೋಧಿಸಿ ಪ್ರತಿಭಟನೆ, ಹೋರಾಟ ಮಾಡುತ್ತಿರುವುದು ಏಕೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದಕ್ಕೆ ಕಾರಣ ಇಲ್ಲದೇನಿಲ್ಲ!
ಕಲಘಟಗಿ, ಅಳ್ನಾವರದಲ್ಲಿ ಬೆಳೆಯುವ ಕಬ್ಬು 30-50 ಕಿಮೀ ವ್ಯಾಪ್ತಿಯಲ್ಲಿರುವ ಹಳಿಯಾಳದ ಪ್ಯಾರಿ ಶುಗರ್ಸ್, ಕೋಣನಕೆರೆ ವಿಐಎನ್ ಶುಗರ್ಸ್, ಬೆಳವಡಿಯ ಸೋಮೇಶ್ವರ ಶುಗರ್ಸ್, ಸವದತ್ತಿ ಬಳಿಯ ಹರ್ಷಾ ಶುಗರ್ಸ್ಗೆ ಹೋಗುತ್ತಿದೆ. ಈ ಕಬ್ಬು ಕಾರ್ಖಾನೆ ಮಾಲೀಕರು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸ್ಪಂದಿಸುವುದಿಲ್ಲ. ಸರಿಯಾದ ಸಮಯಕ್ಕೆ ಹಣ ನೀಡದೇ ಇರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಹಾಗೆ ನೋಡಿದರೆ ಧಾರವಾಡ ಜಿಲ್ಲೆಗೆ ಸಕ್ಕರೆ ಕಾರ್ಖಾನೆ ಅಗತ್ಯವಿದೆ.
ಹೊಸ ಫ್ಯಾಕ್ಟರಿ ಸಹ ದೂರ: ಆದರೆ, ಕಾರ್ಖಾನೆ ಎಲ್ಲಿ ಸ್ಥಾಪನೆಯಾಗಬೇಕು ಎಂಬುದು ಪ್ರಮುಖವಾದ ಸಂಗತಿ. ಈಗ ಸ್ಥಾಪನೆಯಾಗುತ್ತಿರುವ ಶುಗರ್ ಕಂಪನಿ ಅವೈಜ್ಞಾನಿಕ ಜಾಗದಲ್ಲಿದೆ ಎಂದು ಕಬ್ಬು ಬೆಳೆಗಾರರು ಸಹ ಪ್ರಶ್ನಿಸುತ್ತಿದ್ದಾರೆ. ಕಲಘಟಗಿ ಅಥವಾ ಅಳ್ನಾವರ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಿದ್ದು, ಈ ಭಾಗದಲ್ಲಿ ಸ್ಥಾಪನೆಯಾದರೆ ಕಬ್ಬು ಕಟಾವು, ಸಾಗಾಣಿಕೆ ಸೇರಿದಂತೆ ಹಲವು ವಿಚಾರಗಳಿಗೆ ಉತ್ತಮ.ಆದರೆ, ಇದೀಗ ಆರಂಭಿಸುತ್ತಿರುವ ಕಾರ್ಖಾನೆ ಕಲಘಟಗಿ, ಅಳ್ನಾವರದಿಂದ ಸುಮಾರು 40 ಕಿಮೀಗೂ ಹೆಚ್ಚು ದೂರ ಇದೆ. ಜತೆಗೆ ಯಾವುದೇ ನೀರಿನ ಮೂಲ ಇಲ್ಲದ, ರೈತರ ಫಲವತ್ತಾದ ಭೂಮಿಯಲ್ಲಿದೆ.
ದಾರಿ ಯಾವುದಯ್ಯ?: ಕಬ್ಬು ಬೆಳೆಯುವ ಪ್ರದೇಶವಾದ ಕಲಘಟಗಿಯಿಂದ ಟೋಲನಾಕಾ, ಕೋರ್ಟ್ ವೃತ್ತ, ಜ್ಯೂಬಿಲಿ ವೃತ್ತ, ಸಿಬಿಟಿ, ಶಿವಾಜಿ ವೃತ್ತ, ಮುರುಘಾಮಠ ಮೂಲಕ ಅಥವಾ ಕಮಲಾಪುರ-ಯಾದವಾಡ ಮೂಲಕ ಸಂಚರಿಸಬೇಕು. ಅಳ್ನಾವರದಿಂದ ಬರಬೇಕಾದರೂ ನಗರದ ಮಾರ್ಗ ಅನಿವಾರ್ಯ. ಫ್ಯಾಕ್ಟರಿಗೆ ಬರಬೇಕಾದ ಕಬ್ಬಿನ ವಾಹನಗಳು ಧಾರವಾಡ ನಗರದ ಮೂಲಕವೇ ಹಾದು ಹೋಗಬೇಕಾದ ಸ್ಥಿತಿ ಇದ್ದು, ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ನಗರ ನಲಗುತ್ತಿದೆ. ಇನ್ನು, ಫ್ಯಾಕ್ಟರಿ ಶುರುವಾದರೆ, ಹಗಲು-ರಾತ್ರಿ ಕಬ್ಬಿನ ವಾಹನಗಳ ಸಂಚಾರದಿಂದ ತೀವ್ರ ಸಮಸ್ಯೆಯಾಗಲಿದೆ ಎಂದು ಧಾರವಾಡ ಜನರು ಸಹ ಸಕ್ಕರೆ ಕಾರ್ಖಾನೆ ಈ ಸ್ಥಳದಲ್ಲಿ ಬೇಡ ಎನ್ನುತ್ತಿದ್ದಾರೆ.ಯಾದವಾಡ ಬಳಿ ಉದ್ದೇಶಿತ ಮೃಣಾಲ ಸಕ್ಕರೆ ಕಾರ್ಖಾನೆ ಕಲಘಟಗಿ ಅಥವಾ ಅಳ್ನಾವರ ಕಬ್ಬು ಬೆಳೆಗಾರರಿಗೆ ಯಾವುದೇ ರೀತಿ ಅನುಕೂಲವಿಲ್ಲ. ಜಿಲ್ಲೆಯಲ್ಲಿ ಸ್ಥಾಪನೆಯಾದರೂ ಜಿಲ್ಲೆಯ ರೈತರಿಗೆ 30ರಿಂದ 40 ಕಿಮೀ ದೂರ ಆಗಲಿದೆ. ಜತೆಗೆ ಧಾರವಾಡ ನಗರ ಪ್ರವೇಶಿಸಿಯೇ ಈ ಕಂಪನಿಗೆ ಕಬ್ಬಿನ ವಾಹನಗಳು ಸಂಚರಿಸಬೇಕಾದ ಅನಿವಾರ್ಯ. ಇದು ಕಷ್ಟಸಾಧ್ಯ. ನಮ್ಮ ಭಾಗದಲ್ಲಿ ಆಗಬೇಕಾದ ಕಾರ್ಖಾನೆ ಸ್ಥಳೀಯರ ವಿರೋಧದ ಮಧ್ಯೆ ಅಲ್ಲೇಕೆ ಎಂಬ ಪ್ರಶ್ನೆ? ಇದೇ ಕಂಪನಿ ನಮ್ಮಲ್ಲಿ ಸ್ಥಾಪಿಸುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಕಲಘಟಗಿ ಕಬ್ಬು ಬೆಳೆಗಾರರು ನಿಂಗಯ್ಯ ಪಟದಯ್ಯನವರ ಹೇಳುತ್ತಾರೆ.