ಕಬ್ಬು ಬೆಳೆಯದ ಊರಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ?

KannadaprabhaNewsNetwork |  
Published : Apr 08, 2025, 12:32 AM IST
6ಡಿಡಬ್ಲೂಡಿ1ಧಾರವಾಡ ತಾಲೂಕಿನ ಯಾದವಾಡ ಬಳಿ ಮೃಣಾಲ್‌ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಯೋಜಿಸಿರುವ ಸ್ಥಳ. | Kannada Prabha

ಸಾರಾಂಶ

ಧಾರವಾಡ ಸಮೀಪದ ಯಾದವಾಡ-ಕರಡಿಗುಡ್ಡ-ಪುಡಕಲಕಟ್ಟಿ ಗ್ರಾಮಗಳ ಗಡಿಯಲ್ಲಿ ಸ್ಥಾಪನೆಗೆ ಉದ್ದೇಶಿಸಿರುವ ಮೃಣಾಲ್‌ ಸಕ್ಕರೆ ಕಾರ್ಖಾನೆಯು ಗ್ರಾಮಸ್ಥರ ಹಾಗೂ ರೈತರ ತೀವ್ರ ವಿರೋಧ ಎದುರಿಸುತ್ತಿದೆ. ಸಕ್ಕರೆ ಕಾರ್ಖಾನೆ ಆರಂಭಿಸಲು ಈ ಸ್ಥಳ ಸೂಕ್ತ ಅಲ್ಲ ಎಂಬುದು ರೈತರ ಅಭಿಪ್ರಾಯ.

ಬಸವರಾಜ ಹಿರೇಮಠ

ಧಾರವಾಡ: ಬರೋಬ್ಬರಿ 15 ವರ್ಷಗಳ ಸಂಗತಿ ಇದು. ಆಗ ಶಾಸಕರಾಗಿದ್ದ, ಈಗ ಕಾರ್ಮಿಕ ಸಚಿವರಾಗಿರುವ ಸಂತೋಷ ಲಾಡ್‌ ಮಾಲೀಕತ್ವದ ವಿಎಸ್‌ಎಲ್‌ ಶುಗರ್ ಕಂಪನಿಯು ಕಲಘಟಗಿಯ ಬಳಿಯ ಬಿ. ಗುಡಿಹಾಳ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಯೋಜಿಸಿತ್ತು. ಉದ್ದೇಶಿತ ಕಾರ್ಖಾನೆಗೆ ನೂರು ಎಕರೆ ಭೂಮಿ ಸಹ ಖರೀದಿಸಿತ್ತು. ಆದರೆ, ಕಾರಣಾಂತರದಿಂದ ಸಕ್ಕರೆ ಕಾರ್ಖಾನೆ ಕನಸು ಈಡೇರಲಿಲ್ಲ. ಇದೀಗ ಅಂತಹುದೇ ಮತ್ತೊಂದು ಪ್ರಯತ್ನ ಧಾರವಾಡ ಬಳಿ ನಡೆಯುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಹೆಸರಿನಲ್ಲಿ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆ ಸ್ಥಾಪನೆಯ ಚಟುವಟಿಕೆ ಯಾದವಾಡ-ಪುಡಕಲಕಟ್ಟಿ-ಕರಡಿಗುಡ್ಡ ಗ್ರಾಮಗಳ ಗಡಿ (ಇರಕಾಳು)ಯಲ್ಲಿ ತಲೆ ಎತ್ತಲು ಹವನಿಸುತ್ತಿದೆ.

ಆದರೆ, ಕಾರ್ಖಾನೆಯ ಕಾಲಂ ಪೂಜೆಗೆ ಆಗಮಿಸಿದ್ದ ಸಚಿವೆ ಹೆಬ್ಬಾಳಕರ, ಪುತ್ರ ಮೃಣಾಲ ವಿರುದ್ಧ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಹತ್ತು-ಹಲವು ಸವಾಲುಗಳ ಮಧ್ಯೆ ಇರಕಾಳಿನ ಪ್ರದೇಶದಲ್ಲಿ ಈ ಕಾರ್ಖಾನೆ ಮೊಳಕೆಯೊಡೆಯಲಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ.

ಹೋರಾಟಕ್ಕೆ ಕಾರಣ?: ಈ ಭಾಗದಲ್ಲಿ ಕಾರ್ಖಾನೆಯೊಂದು ಶುರುವಾದರೆ ಉದ್ಯೋಗ ಸೃಷ್ಟಿ, ವ್ಯಾಪಾರ-ವಹಿವಾಟು, ಸುತ್ತಲಿನ ಪ್ರದೇಶದ ಭೂಮಿ ಮೌಲ್ಯ ಏರಿಕೆ, ರೈತರ ಆದಾಯ ದ್ವಿಗುಣ ಸೇರಿದಂತೆ ಹಲವು ಅನುಕೂಲತೆ ಇದ್ದು, ಕಾರ್ಖಾನೆ ಬರುತ್ತಿರುವ ಹಿನ್ನೆಲೆಯಲ್ಲಿ ಖುಷಿ ಪಡಬೇಕಾದ ಜನತೆ ಅದರಲ್ಲೂ ಸ್ಥಳೀಯರು ಈ ಕಾರ್ಖಾನೆಯ ಸ್ಥಾಪನೆ ವಿರೋಧಿಸಿ ಪ್ರತಿಭಟನೆ, ಹೋರಾಟ ಮಾಡುತ್ತಿರುವುದು ಏಕೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದಕ್ಕೆ ಕಾರಣ ಇಲ್ಲದೇನಿಲ್ಲ!

ಕಲಘಟಗಿ, ಅಳ್ನಾವರದಲ್ಲಿ ಮಾತ್ರ ಕಬ್ಬು: ಕೃಷಿ ಇಲಾಖೆ ಮಾಹಿತಿ ಪ್ರಕಾರ, ಧಾರವಾಡ ಜಿಲ್ಲೆಯ ಪೈಕಿ ಕಲಘಟಗಿ ಹಾಗೂ ಅಳ್ನಾವರದ ಮಲೆನಾಡಿನ ಸುಮಾರು ಒಂದು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಕಬ್ಬು ಬೆಳೆಯಲಾಗುತ್ತದೆ. ಇನ್ನುಳಿದ ಧಾರವಾಡ, ಹುಬ್ಬಳ್ಳಿ, ನವಲಗುಂದ, ಕುಂದಗೋಳದಲ್ಲಿ ಒಣ ಬೇಸಾಯದ ಹಿನ್ನೆಲೆಯಲ್ಲಿ ಬೆಳೆ ಪದ್ಧತಿಯೇ ಬೇರೆ ಇದೆ.

ಕಲಘಟಗಿ, ಅಳ್ನಾವರದಲ್ಲಿ ಬೆಳೆಯುವ ಕಬ್ಬು 30-50 ಕಿಮೀ ವ್ಯಾಪ್ತಿಯಲ್ಲಿರುವ ಹಳಿಯಾಳದ ಪ್ಯಾರಿ ಶುಗರ್ಸ್‌, ಕೋಣನಕೆರೆ ವಿಐಎನ್‌ ಶುಗರ್ಸ್, ಬೆಳವಡಿಯ ಸೋಮೇಶ್ವರ ಶುಗರ್ಸ್‌, ಸವದತ್ತಿ ಬಳಿಯ ಹರ್ಷಾ ಶುಗರ್ಸ್‌ಗೆ ಹೋಗುತ್ತಿದೆ. ಈ ಕಬ್ಬು ಕಾರ್ಖಾನೆ ಮಾಲೀಕರು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸ್ಪಂದಿಸುವುದಿಲ್ಲ. ಸರಿಯಾದ ಸಮಯಕ್ಕೆ ಹಣ ನೀಡದೇ ಇರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಹಾಗೆ ನೋಡಿದರೆ ಧಾರವಾಡ ಜಿಲ್ಲೆಗೆ ಸಕ್ಕರೆ ಕಾರ್ಖಾನೆ ಅಗತ್ಯವಿದೆ.

ಹೊಸ ಫ್ಯಾಕ್ಟರಿ ಸಹ ದೂರ: ಆದರೆ, ಕಾರ್ಖಾನೆ ಎಲ್ಲಿ ಸ್ಥಾಪನೆಯಾಗಬೇಕು ಎಂಬುದು ಪ್ರಮುಖವಾದ ಸಂಗತಿ. ಈಗ ಸ್ಥಾಪನೆಯಾಗುತ್ತಿರುವ ಶುಗರ್‌ ಕಂಪನಿ ಅವೈಜ್ಞಾನಿಕ ಜಾಗದಲ್ಲಿದೆ ಎಂದು ಕಬ್ಬು ಬೆಳೆಗಾರರು ಸಹ ಪ್ರಶ್ನಿಸುತ್ತಿದ್ದಾರೆ. ಕಲಘಟಗಿ ಅಥವಾ ಅಳ್ನಾವರ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಿದ್ದು, ಈ ಭಾಗದಲ್ಲಿ ಸ್ಥಾಪನೆಯಾದರೆ ಕಬ್ಬು ಕಟಾವು, ಸಾಗಾಣಿಕೆ ಸೇರಿದಂತೆ ಹಲವು ವಿಚಾರಗಳಿಗೆ ಉತ್ತಮ.

ಆದರೆ, ಇದೀಗ ಆರಂಭಿಸುತ್ತಿರುವ ಕಾರ್ಖಾನೆ ಕಲಘಟಗಿ, ಅಳ್ನಾವರದಿಂದ ಸುಮಾರು 40 ಕಿಮೀಗೂ ಹೆಚ್ಚು ದೂರ ಇದೆ. ಜತೆಗೆ ಯಾವುದೇ ನೀರಿನ ಮೂಲ ಇಲ್ಲದ, ರೈತರ ಫಲವತ್ತಾದ ಭೂಮಿಯಲ್ಲಿದೆ.

ದಾರಿ ಯಾವುದಯ್ಯ?: ಕಬ್ಬು ಬೆಳೆಯುವ ಪ್ರದೇಶವಾದ ಕಲಘಟಗಿಯಿಂದ ಟೋಲನಾಕಾ, ಕೋರ್ಟ್‌ ವೃತ್ತ, ಜ್ಯೂಬಿಲಿ ವೃತ್ತ, ಸಿಬಿಟಿ, ಶಿವಾಜಿ ವೃತ್ತ, ಮುರುಘಾಮಠ ಮೂಲಕ ಅಥವಾ ಕಮಲಾಪುರ-ಯಾದವಾಡ ಮೂಲಕ ಸಂಚರಿಸಬೇಕು. ಅಳ್ನಾವರದಿಂದ ಬರಬೇಕಾದರೂ ನಗರದ ಮಾರ್ಗ ಅನಿವಾರ್ಯ. ಫ್ಯಾಕ್ಟರಿಗೆ ಬರಬೇಕಾದ ಕಬ್ಬಿನ ವಾಹನಗಳು ಧಾರವಾಡ ನಗರದ ಮೂಲಕವೇ ಹಾದು ಹೋಗಬೇಕಾದ ಸ್ಥಿತಿ ಇದ್ದು, ಈಗಾಗಲೇ ಟ್ರಾಫಿಕ್‌ ಸಮಸ್ಯೆಯಿಂದ ನಗರ ನಲಗುತ್ತಿದೆ. ಇನ್ನು, ಫ್ಯಾಕ್ಟರಿ ಶುರುವಾದರೆ, ಹಗಲು-ರಾತ್ರಿ ಕಬ್ಬಿನ ವಾಹನಗಳ ಸಂಚಾರದಿಂದ ತೀವ್ರ ಸಮಸ್ಯೆಯಾಗಲಿದೆ ಎಂದು ಧಾರವಾಡ ಜನರು ಸಹ ಸಕ್ಕರೆ ಕಾರ್ಖಾನೆ ಈ ಸ್ಥಳದಲ್ಲಿ ಬೇಡ ಎನ್ನುತ್ತಿದ್ದಾರೆ.

ಯಾದವಾಡ ಬಳಿ ಉದ್ದೇಶಿತ ಮೃಣಾಲ ಸಕ್ಕರೆ ಕಾರ್ಖಾನೆ ಕಲಘಟಗಿ ಅಥವಾ ಅಳ್ನಾವರ ಕಬ್ಬು ಬೆಳೆಗಾರರಿಗೆ ಯಾವುದೇ ರೀತಿ ಅನುಕೂಲವಿಲ್ಲ. ಜಿಲ್ಲೆಯಲ್ಲಿ ಸ್ಥಾಪನೆಯಾದರೂ ಜಿಲ್ಲೆಯ ರೈತರಿಗೆ 30ರಿಂದ 40 ಕಿಮೀ ದೂರ ಆಗಲಿದೆ. ಜತೆಗೆ ಧಾರವಾಡ ನಗರ ಪ್ರವೇಶಿಸಿಯೇ ಈ ಕಂಪನಿಗೆ ಕಬ್ಬಿನ ವಾಹನಗಳು ಸಂಚರಿಸಬೇಕಾದ ಅನಿವಾರ್ಯ. ಇದು ಕಷ್ಟಸಾಧ್ಯ. ನಮ್ಮ ಭಾಗದಲ್ಲಿ ಆಗಬೇಕಾದ ಕಾರ್ಖಾನೆ ಸ್ಥಳೀಯರ ವಿರೋಧದ ಮಧ್ಯೆ ಅಲ್ಲೇಕೆ ಎಂಬ ಪ್ರಶ್ನೆ? ಇದೇ ಕಂಪನಿ ನಮ್ಮಲ್ಲಿ ಸ್ಥಾಪಿಸುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಕಲಘಟಗಿ ಕಬ್ಬು ಬೆಳೆಗಾರರು ನಿಂಗಯ್ಯ ಪಟದಯ್ಯನವರ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''