ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಗುರುವಾರ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಕ್ತದಾನ ಶಿಬಿರ, ಬಡವರಿಗೆ ದಿನಸಿ ಕಿಟ್ಗಳ ವಿತರಣೆ, ರೋಗಿಗಳಿಗೆ ಹಣ್ಣು-ಹಂಪಲು, ಬಡವರಿಗೆ ಬಟ್ಟೆಗಳ ವಿರಣೆ, ಸಸಿ ನೆಡುವಿಕೆ ಸೇರಿದಂತೆ ವಿವಿಧ ವಸ್ತುಗಳ ವಿತರಣೆ ಸೇರಿದಂತೆ ಅರ್ಥಪೂರ್ಣ ಸೇವಾ ಕಾರ್ಯಗಳನ್ನು ಮಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಗುರುವಾರ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಕ್ತದಾನ ಶಿಬಿರ, ಬಡವರಿಗೆ ದಿನಸಿ ಕಿಟ್ಗಳ ವಿತರಣೆ, ರೋಗಿಗಳಿಗೆ ಹಣ್ಣು-ಹಂಪಲು, ಬಡವರಿಗೆ ಬಟ್ಟೆಗಳ ವಿರಣೆ, ಸಸಿ ನೆಡುವಿಕೆ ಸೇರಿದಂತೆ ವಿವಿಧ ವಸ್ತುಗಳ ವಿತರಣೆ ಸೇರಿದಂತೆ ಅರ್ಥಪೂರ್ಣ ಸೇವಾ ಕಾರ್ಯಗಳನ್ನು ಮಾಡಿದರು.
ಮಹದೇವಪುರ ಕ್ಷೇತ್ರದ ಕಾಟಮ್ನಲ್ಲೂರಿನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಗ್ರಾಮಾಂತರ ಮಂಡಲ ಯುವ ಮೋರ್ಚಾದಿಂದ ರಕ್ತದಾನ ಶಿಬಿರ, ಪೌರಕಾರ್ಮಿಕರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಹೋಪ್ ಫಾರಂನ ಡಿವೈನ್ ಲೈಟ್ ಟ್ರಸ್ಟ್ ಬ್ಲೈಂಡ್ ಸ್ಕೂಲ್ನ ಅಂಧ ಮಕ್ಕಳಿಗೆ ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಊಟ, ಹಣ್ಣು ಹಂಪಲು ಹಾಗೂ ಬ್ಲಾಂಕೆಟ್ ವಿತರಿಸಲಾಯಿತು.
ಬೆಳತೂರು ವಾರ್ಡ್ನ ಬೆಳತೂರು ಶಕ್ತಿಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು. ಯಮಲೂರು ವಾರ್ಡ್ನ ಯಮಲೂರು ಶಕ್ತಿಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು. ಚಳ್ಳಘಟ್ಟ ಶಕ್ತಿಕೇಂದ್ರದಲ್ಲಿ ಪೌರ ಕಾರ್ಮಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು. ಕಾವೇರಿ ನಗರ ಶಕ್ತಿಕೇಂದ್ರ-1ರಲ್ಲಿ ಸಸಿ ನೆಡಲಾಯಿತು. ಬಿದರಹಳ್ಳಿ, ಹೂಡಿ ವಾರ್ಡ್ನಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಪೌರ ಕಾರ್ಮಿಕರಿಗೆ ದಿನಸಿ ವಿತರಿಸಲಾಯಿತು.ಇಮ್ಮಡಿಹಳ್ಳಿ ಶಕ್ತಿಕೇಂದ್ರದ ವತಿಯಿಂದ ಪೌರ ಕಾರ್ಮಿಕರಿಗೆ ಊಟ ವಿತರಣೆ, ಹುಸ್ಕೂರು ಶಕ್ತಿಕೇಂದ್ರ ಮಂಡೂರು ವಾರ್ಡ್, ನಾಗೊಂಡಹಳ್ಳಿಯಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಕ್ಷೇತ್ರದ ಹಲವು ಕಡೆ ಹಲವು ಸೇವಾ ಕಾರ್ಯಗಳನ್ನು ಮಾಡಲಾಯಿತು.
ದುಂದು ವೆಚ್ಚದ ಬದಲು ಸೇವಾ ಕಾರ್ಯ ಮಾಡಿ: ಲಿಂಬಾವಳಿ
ಮಹದೇವಪುರ ಕ್ಷೇತ್ರದ ಕಾಟಮ್ನಲ್ಲೂರಿನಲ್ಲಿ ನಡೆದ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಪ್ರಧಾನಿ ನರೇಂದ್ರ ಮೋದಿ ಅವರ 77ನೇ ಜನ್ಮ ದಿನದ ಪ್ರಯುಕ್ತ ಪಕ್ಷದಿಂದ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನಕ್ಕೆ ಕರೆ ನೀಡಲಾಗಿದೆ. ಅದರಂತೆ ನಮ್ಮ ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರು ನೂರಕ್ಕೂ ಹೆಚ್ಚು ಕಡೆ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ರಕ್ತದಾನ ಶಿಬಿರ, ದಿನಸಿ ಕಿಟ್ ವಿತರಣೆ, ಬಟ್ಟೆ, ಹೊದಿಕೆ ವಿತರಣೆ, ಸಸಿ ನೆಡುವುದು ಸೇರಿದಂತೆ ನಾನಾ ರೀತಿಯ ಸೇವಾ ಕಾರ್ಯಗಳಲ್ಲಿ ಕಾರ್ಯಕರ್ತರು ತೊಡಗಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸುವುದು ಬೇಕಿಲ್ಲ. ಇಂತಹ ಸೇವಾ ಕೆಲಸಗಳು ಒಂದು ದಿನಕ್ಕೆ ಸೀಮಿತವಾಗಬಾರದು. ಬೇರೆಯವರು ಜನ್ಮ ದಿನ ಸೇರಿದಂತೆ ವಿಶೇಷ ದಿನಗಳಲ್ಲಿ ಬೇರೆ ಕೆಲಸಕ್ಕೆ ಹಣ ಖರ್ಚು ಮಾಡುವ ಬದಲು ಇಂತಹ ಸೇವಾ ಕಾರ್ಯಗಳನ್ನು ಮಾಡಬಹುದು ಎಂದು ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚಿತ್ರಣ ಬದಲಿಸಿದ್ದಾರೆ. ಭಾರತ ಇಂದು ಜಾಗತಿಕ ಬಲಿಷ್ಠ ದೇಶಗಳ ಸಾಲಿಗೆ ಸೇರ್ಪಡೆಯಾಗಿದೆ. ಇದನ್ನು ವಿದೇಶಿಯರೇ ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಹೆಚ್ಚಿನ ಆಯಸ್ಸು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಅವರ ಸೇವೆ ಈ ದೇಶಕ್ಕೆ ಅತ್ಯವಶ್ಯಕವಾಗಿದೆ ಎಂದು ಲಿಂಬಾವಳಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.