ಗೆಲುವಿನ ಬಗ್ಗೆ ಶ್ರೇಯಸ್‌ ವಿಶ್ವಾಸ

KannadaprabhaNewsNetwork | Published : Apr 27, 2024 1:15 AM

ಸಾರಾಂಶ

ಹಾಸನದಲ್ಲಿ 12,52,688 ಮತದಾರರು ತಮ್ಮ ಹಕ್ಕು ಚಲಾಯಿಸುವುದರೊಂದಿಗೆ ಶೇ.77.42 ರಷ್ಟು ಮತದಾನವಾಗಿದೆ. ಈ ಮೂಲಕ ಹಾಸನ ಲೋಕಸಭೆ ಚುನಾವಣೆಯಲ್ಲಿ ಇತಿಹಾಸದಲ್ಲೇ ಈ ಬಾರಿ ಅತ್ಯಧಿಕ ಮತದಾನವಾಗಿದೆ.

ಬೇಲೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಸ್ಪಂದಿಸಿದ್ದು ತಾವು ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.

ಬೇಲೂರು ಪಟ್ಟಣಕ್ಕೆ ಶುಕ್ರವಾರ ಸಂಜೆ ವೇಳೆಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಇಂದು ಬೆಳಿಗ್ಗೆಯಿಂದಲೇ ಕಾಂಗ್ರೆಸ್ ಪಕ್ಷದ ಪರವಾಗಿ ಮತದಾನ ಮಾಡಿದ್ದಾರೆ. ಅದೇ ರೀತಿ ಬೇಲೂರು ವಿಧಾನಸಭಾ ಕ್ಷೇತ್ರದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬೂತ್ ಮಟ್ಟದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಬೆಳಗ್ಗೆಯಿಂದಲೇ ನಿಂತು ಮತದಾರರ ಮನವೊಲಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಮತದಾನ ಮಾಡಿಸಲು ಸಹಕರಿಸಿದ್ದ ಎಲ್ಲಾ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜೆ ನಿಶಾಂತ್, ಪುರಸಭೆ ಸದಸ್ಯೆ ಉಷಾ ಸತೀಶ್. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ತೌಫಿಕ್ ಅಹಮದ್, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ರಂಗನಾಥ್, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿಎನ್ ದೇವರಾಜ್. ಮಾಜಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪಾಪು, ಅಲ್ಪ ಸಂಖ್ಯಾತ ಮಹಿಳಾ ಮುಖಂಡ ಕುರ್ಶಿದ್‌, ಆನಂದ್ ಹಾಜರಿದ್ದರು.

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಎಸ್.ಪಟೇಲ್ ಬೇಲೂರಿನಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡರು.ಲೋಕಸಭೆ: ಜಿಲ್ಲೆಯಲ್ಲಿ ಶೇ.77.42ರಷ್ಟು ಮತದಾನ

ಎಲ್ಲ ಭಾಗಗಳಲ್ಲಿ ಬಹುತೇಕ ಶಾಂತಿಯುತ । 12,52,688 ಮತದಾರರು ಹಕ್ಕು ಚಲಾವಣೆ । ಅಂಗವಿಕಲರು, ಹಿರಿಯರಿಗೆ ಪ್ರತ್ಯೇಕ ವ್ಯವಸ್ಥೆ

ಕನ್ನಡಪ್ರಭ ವಾರ್ತೆ ಹಾಸನ ಜಿಲ್ಲೆಯಾದ್ಯಂತ ಶುಕ್ರವಾರ ಲೋಕಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಹಾಗೂ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ನೆರೆಯ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಸೇರಿ ಒಟ್ಟಾರೆ 17,36,610 ಮತದಾರರಿದ್ದು, ಆ ಪೈಕಿ 12,52,688 ಮತದಾರರು ತಮ್ಮ ಹಕ್ಕು ಚಲಾಯಿಸುವುದರೊಂದಿಗೆ ಶೇ.77.42 ರಷ್ಟು ಮತದಾನವಾಗಿದೆ. ಈ ಮೂಲಕ ಹಾಸನ ಲೋಕಸಭೆ ಚುನಾವಣೆಯಲ್ಲಿ ಇತಿಹಾಸದಲ್ಲೇ ಈ ಬಾರಿ ಅತ್ಯಧಿಕ ಮತದಾನವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತದಾನವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಶೇ.77.35 ಮತದಾನ ಆಗಿತ್ತು. ಈ ಬಾರಿ ಜಿಲ್ಲೆಯಾದ್ಯಂತ ಮತದಾನಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು ನೆರಳು, ಕುಡಿಯುವ ನೀರಿನ ಸೌಲಭ್ಯ, ವಿಕಲ ಚೇತನರು ಹಾಗೂ ವೃಯೋವೃದ್ದರಿಗೆ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು.ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿಯೂ ಬೆಳಿಗ್ಗೆ 7 ರಿಂದ ಮತದಾನ ಚುರುಕಿನಿಂದ ನಡೆಯಿತು. ಎಲ್ಲರೂ ಸರತಿ ಸಾಲಿನಲ್ಲಿ ಸಾಗಿ ಮತ ಚಲಾಯಿಸಿದರು. ಬೆಳಿಗ್ಗೆ 9 ಗಂಟೆವರೆಗೆ ಶೇ 8.21ರಷ್ಟು, ಬೆಳಿಗ್ಗೆ 11 ಶೇ 22.06 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 01 ಗಂಟೆವರೆಗೆ ಶೇ 41.25ರಷ್ಟು, 3 ಗಂಟೆವರೆಗೆ ಶೇ 55.96 ರಷ್ಟು, ಸಂಜೆ 5 ಗಂಟೆವರೆಗೆ ಶೇ 72.13 ರಷ್ಟು ಮತದಾನವಾಯಿತು.ಸಂಜೆ 5 ಗಂಟೆಯ ವೇಳೆಗೆ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಶೇ.81, ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ. 75.44, ಬೇಲೂರು ವಿಧಾನಸಭಾ ಕ್ಷೇತ್ರ ಶೇ.69.48, ಹಾಸನ ವಿಧಾನಸಭಾ ಕ್ಷೇತ್ರ ಶೇ 63.71, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ಶೇ.77.27, ಅರಕಲಗೂಡು ವಿಧಾನಸಭಾ ಕ್ಷೇತ್ರ ಶೇ.65.33, ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರ ಶೇ.75.20, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.70.28 ಮತದಾನವಾಗಿತ್ತು. ಬಳಿಕ ಈ ಪ್ರಮಾಣ ಹೆಚ್ಚಿದೆ. ಶ್ರವಣಬೆಳಗೊಳ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡಾವಾರು ಮತದಾನವಾಗಿದ್ದರೆ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆ.

Share this article