ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನಿಗೆ ಪಾಲಕರಿಂದ ಧರ್ಮದೇಟು

KannadaprabhaNewsNetwork |  
Published : Sep 15, 2024, 01:47 AM ISTUpdated : Sep 15, 2024, 01:48 AM IST
ಲೈಂಗಿಕ ಕಿರುಕುಳ | Kannada Prabha

ಸಾರಾಂಶ

ಪ್ರತಿಭಾ ಕಾರಂಜಿ ಸ್ಪರ್ಧೆಯ ವೇಳೆ ವಿದ್ಯಾರ್ಥಿನಿಗೆ ಅದೇ ಶಾಲೆಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ತಾಲೂಕಿನ ಉಳೇನೂರು ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರತಿಭಾ ಕಾರಂಜಿ ಸ್ಪರ್ಧೆಗೆ ಕರೆದೊಯ್ದು ಕೃತ್ಯ: ರಾಜಿ ಪಂಚಾಯಿತಿ ವಿಫಲ

ಕನ್ನಡಪ್ರಭ ವಾರ್ತೆ ಕಾರಟಗಿ

ಪ್ರತಿಭಾ ಕಾರಂಜಿ ಸ್ಪರ್ಧೆಯ ವೇಳೆ ವಿದ್ಯಾರ್ಥಿನಿಗೆ ಅದೇ ಶಾಲೆಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ತಾಲೂಕಿನ ಉಳೇನೂರು ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶನಿವಾರ ಸಂಜೆ ಗ್ರಾಮಸ್ಥರು, ಶಿಕ್ಷಕರ ಸಮ್ಮುಖದಲ್ಲಿಯೇ ಶಿಕ್ಷಕನಿಗೆ ಧರ್ಮದೇಟು ಬಿದ್ದಿವೆ.

ತಾಲೂಕಿನ ಸಿದ್ದಾಪುರ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೆ. 10ರಂದು ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ತಾಲೂಕಿನ ಉಳೇನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿದ್ಯಾರ್ಥಿಗಳನ್ನು ಎರಡು ದಿನಗಳಿಂದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ ಎಂದು ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಸಲ್ಲಿಸಲಾಗಿದೆ.

ಭರತನಾಟ್ಯದಲ್ಲಿ ಭಾಗವಹಿಸಲು ತಯಾರಿ ಮಾಡಿಕೊಂಡಿರುವ ಬಾಲಕಿಗೆ ಮುತ್ತು ಕೊಟ್ಟಿದ್ದಲ್ಲದೇ, ಮೈ ಕೈ ಕಾಲು ಸೇರಿದಂತೆ ಇತರ ಅಂಗಾಂಗ ಮುಟ್ಟಿದ್ದಾಗಿ ಬಾಲಕಿ ಪಾಲಕರ ಮುಂದೆ ಹೇಳಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ.

ಪಾಲಕರು ಮಕ್ಕಳ ರಕ್ಷಣಾ ಘಟಕ- ೧೦೯೮ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟಕದ ಸಿಬ್ಬಂದಿ ಕೂಡಲೇ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ಮಾಡಿ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬಿಇಒಗೆ ಸೂಚಿಸಿದ್ದಾರೆ. ಬಾಲಕಿಯ ಪಾಲಕರ ಹೇಳಿಕೆ ಪಡೆದುಕೊಂಡು ಸಂಪೂರ್ಣ ವರದಿಯನ್ನು ನೀಡುವಂತೆ ಶಾಲೆಯ ಮುಖ್ಯ ಶಿಕ್ಷಕ ವಿಠ್ಠಲ್ ಜೀರಗಾಳಿಗೆ ಬಿಇಒ ಸೂಚಿಸಿದ್ದಾರೆ.

ಧರ್ಮದೇಟು:

ಶಾಲೆಯ ಮುಖ್ಯ ಗುರು, ಪಾಲಕರು ಮತ್ತು ಗ್ರಾಮದ ಸುಮಾರು ೧೨ ಜನರನ್ನು ಕೂರಿಸಿ ಚರ್ಚಿಸಿ ರಾಜೀ ಪಂಚಾಯಿತಿ ನಡೆಸಲಾಗಿದೆ. ಸಿದ್ಧಾಪುರ ಗ್ರಾಮದ ಎಪಿಎಂಸಿ ಆವರಣದಲ್ಲಿನ ಭವನದಲ್ಲಿ ಶನಿವಾರ ಮಧ್ಯಾಹ್ನದಿಂದ ಸಂಜೆಯವರೆಗೂ ಸಭೆ ನಡೆಸಿ ಪ್ರಕರಣವನ್ನು ಸ್ಥಳೀಯ ಹಂತದಲ್ಲಿಯೇ ಬಗೆಹರಿಸುವ ಬಗ್ಗೆ ಚರ್ಚಿಸಿದ್ದಾರೆ. ತಪ್ಪಿತಸ್ಥ ಶಿಕ್ಷಕ ಇನ್ನು ಮುಂದೆ ನಮ್ಮ ಕಣ್ಣೆದುರು ಗ್ರಾಮದಲ್ಲಿಯಾಗಲಿ, ತಾಲೂಕಿನಲ್ಲಿ ಆಗಲಿ ಕಾಣಬಾರದು ನೋಡಿ ಎಂದು ನೊಂದ ಯುವತಿಯ ತಾಯಿ ಸಭೆಗೆ ತಿಳಿಸಿದ್ದಾರೆ. ಜೊತೆಗೆ ಗ್ರಾಮಸ್ಥರು ಮತ್ತು ಸಂಬಂಧಿಕರು ಕೃತ್ಯ ಎಸಗಿದ ಶಿಕ್ಷಕನನ್ನು ಸ್ಥಳಕ್ಕೆ ಕರೆಸುವಂತೆ ತರಾಟೆ ತೆಗೆದುಕೊಂಡಿದ್ದಾರೆ. ಸಂಜೆ ೬ ಗಂಟೆ ಪಾಲಕರ ಸಹನೆ ಕಟ್ಟೆ ಒಡೆದುಹೋಗಿ ಸಭೆಯಲ್ಲಿ ಹಾಜರಿದ್ದ ಶಿಕ್ಷಕ ರಾಜು ಆತ್ಮಕೂರುಗೆ ಬಾಲಕಿಯ ತಾಯಿ ಧರ್ಮದೇಟು ನೀಡಿದ್ದಾರೆ.

ಅಲ್ಲಿಯೇ ಇದ್ದ ಬಾಲಕಿ ಸಹೋದರ ಸಹಿತ ಮೇಲಿಂದ ಮೇಲೆ ಶಿಕ್ಷಕನಿಗೆ ಏಟಿನ ಮೂಲಕ ಪಾಠ ಮಾಡಿದ್ದಾರೆ. ಅಲ್ಲಿಯೇ ಇಡೀ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ವಿಫಲವಾಗಿದೆ.

ಇದಕ್ಕೂ ಮುನ್ನ ಯಾವುದೇ ಪ್ರಕರಣ ನಡೆದಿಲ್ಲ, ನೃತ್ಯ ತಪ್ಪಾಗಿ ಮಾಡಿದಕ್ಕೆ ಶಿಕ್ಷಕ ವಿದ್ಯಾರ್ಥಿನಿಗೆ ಥಳಿಸಿದ್ದ ಅಷ್ಟೇ ಎಂದು ಲಿಖಿತ ಪತ್ರ ಸಿದ್ಧಪಡಿಸಿ ಆ ಪತ್ರಕ್ಕೆ ಪಾಲಕರು ಮತ್ತು ಬಾಲಕಿಯ ಸಹಿ ಪಡೆಯಲು ಯತ್ನಿಸಿದ್ದರು. ಪತ್ರಕ್ಕೆ ನೊಂದ ಬಾಲಕಿ ಸಹಿ ಮಾಡಲು ನಿರಾಕರಿಸಿದ ತಕ್ಷಣವೇ ಶಿಕ್ಷಕನಿಗೆ ಧರ್ಮದೇಟು ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ