ಹಾವೇರಿ: ಎಸ್ಎಫ್ಐ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಂಘಟನೆಯಾಗಿದೆ. ದೇಶದಾದ್ಯಂತ ವಿದ್ಯಾರ್ಥಿಗಳ ಪರವಾಗಿ ಹೋರಾಡುವ ಫೆಡರೇಷನ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಬೇಕು ಎಂದು ಜಿಲ್ಲಾ ವಕೀಲರ ಸಂಘದ ಸಹ ಕಾರ್ಯದರ್ಶಿ ಹಾಗೂ ಎಸ್ಎಫ್ಐ ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಕಾಳೆ ಹೇಳಿದರು.ನಗರದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎಸ್ಎಫ್ಐ ಜಿಲ್ಲಾ ಸಮಿತಿ ಆಯೋಜಿಸಿದ ೨೦೨೪-೨೫ ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಫ್ಐನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಗ್ರಾಪಂ ಸದಸ್ಯ, ಪತ್ರಕರ್ತ ನಿಂಗಪ್ಪ ಆರೇರ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಉಳಿಯಲು, ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಬಸ್ಸಿನ ಸಮಸ್ಯೆಗಳು, ಕಾಲ ಕಾಲಕ್ಕೆ ವಿದ್ಯಾರ್ಥಿ ವೇತನ ಬಿಡುಗಡೆ ಆಗಲು ಎಸ್ಎಫ್ಐ ಸಂಘಟನೆ ಕಾರಣ. ದೇಶ, ನಾಡು ನುಡಿ, ಭಾಷೆ, ಸ್ನೇಹ ಸೌಹಾರ್ದತೆ ಪರಂಪರೆಯ ಉಳಿವಿಗಾಗಿ, ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ ಎಂಬ ಘೋಷಣೆ ಅಡಿಯಲ್ಲಿ ವಿದ್ಯಾರ್ಥಿ ಸಮುದಾಯದ ಪರವಾಗಿ ಧ್ವನಿ ಎತ್ತುವ ಎಸ್ಎಫ್ಐ ಸಂಘಟನೆ ಸೇರಿ ದೇಶದಲ್ಲಿ ವಿದ್ಯಾರ್ಥಿ ಚಳವಳಿ ಕಟ್ಟಲು ಮುಂದಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರವಿಕುಮಾರ್ ಪೂಜಾರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು. ಎಸ್ಎಫ್ಐ ಸಂಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದ ಅಭಿವೃದ್ಧಿ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಉಪನ್ಯಾಸಕ ಪ್ರಭು ಬಣಕಾರ ವೇದಿಕೆಯಲ್ಲಿದ್ದರು. ವಿದ್ಯಾರ್ಥಿ ಮುಖಂಡರಾದ ಸುಲೇಮಾನ ಮತ್ತಿಹಳ್ಳಿ, ಜಗದೀಶ ಎರೇಶಿಮೆ, ಸುನೀಲ್ ಲಮಾಣಿ, ಬ್ರಹ್ಮೇಂದ್ರಾ ಬಡಿಗೇರ, ಶಿವಾನಂದ ಸುಣಗಾರ, ಅಕ್ಕಮ್ಮ ತಳವಾರ, ಅನುಷಾ ಲಮಾಣಿ, ಸೌಜನ್ಯ ಭಜಂತ್ರಿ, ಭಾವನಾ ಪಿ. ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.