ಮಕರ ಸಂಕ್ರಾಂತಿ ಪ್ರಯುಕ್ತ ಪ್ರತಿ ವರ್ಷದಂತೆ ತಾಲೂಕಿನ ಕಣ್ವಕುಪ್ಪೆ ಗವಿ ಮಠದಲ್ಲಿ ಮಂಗಳವಾರ ಶ್ರೀ ಶಾಂತಲಿಂಗೇಶ್ವರ ರಥೋತ್ಸವ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕೇದಾರದ ಪ್ರಧಾನ ಅರ್ಚಕ ಗಂಗಾಧರಲಿಂಗ ಶಾಸ್ತ್ರಿಗಳು ಶ್ರೀ ಶಾಂತಲಿಂಗೇಶ್ವರ ಬಾವುಟವನ್ನು ₹66 ಸಾವಿರಕ್ಕೆ ಹರಾಜು ಮಾಡಿದರು. ಅನಂತರ ರಥೋತ್ಸವ 4 ಗಂಟೆಗೆ ಭಕ್ತರ ಹಷೋದ್ಗಾರ, ಘೋಷಣೆಗಳೊಂದಿಗೆ ಮುಂದೆ ಸಾಗಿತು. ಬಾಳೆಹಣ್ಣು, ಹೂ ಮತ್ತು ಪತ್ರೆಯನ್ನು ರಥದ ಕಳಶಕ್ಕೆ ತೂರಿ ಭಕ್ತರು ಭಕ್ತಿಯನ್ನು ಸಮರ್ಪಿಸಿದರು. ವಿವಿಧ ಜಾನಪದ ಕಲಾಪ್ರಕಾರಗಳು ಮೆರವಣಿಗೆಗೆ ಕಳೆ ತಂದವು. ತೇರನ್ನು ಭಕ್ತರು ಪಾದಗಟ್ಟೆಯವರೆಗೆ ಎಳೆದು, ಪೂಜೆ ಸಲ್ಲಿಸಿದ ನಂತರ ಪುನಃ ರಥೋತ್ಸವವನ್ನು ತೇರುಗಡ್ಡೆಗೆ ಎಳೆದು ತಂದರು. ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು.
ಮಠವು ಹಣ- ಸಂಪತ್ತು ಬಯಸಲ್ಲ:
ಶ್ರೀಗಳು ಮಾತನಾಡಿ, ಮನುಷ್ಯನಲ್ಲಿ ಸಾಕಷ್ಟು ಅಪೇಕ್ಷೆ, ಆಕಾಂಕ್ಷಿಗಳಿದ್ದು, ಅವುಗಳು ಈಡೇರಲು ಶರೀರ ,ಮನಸ್ಸು, ಬುದ್ಧಿ ಮೂರನ್ನು ಹೊಂದಿರಬೇಕು. ಕಣ್ವಕುಪ್ಪೆ ಮಠವು ಹಣ, ಸಂಪತ್ತು ಬಯಸಲ್ಲ. ಬದಲಿಗೆ ಕಾಯ, ವಾಚ, ಮನಸ್ಸನ್ನು ಬಯಸುತ್ತದೆ. ಮಠಕ್ಕಾಗಿ ಭಕ್ತರು ಅಪಾರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಗಳು ಭಕ್ತರಿಗೆ ಸಂಕ್ರಾಂತಿಯ ಎಳ್ಳುಬೆಲ್ಲದ ಪ್ರಸಾದ ವಿತರಿಸಿದರು. ಸಹಸ್ರಾರು ಭಕ್ತರಿಗೆ ರೊಟ್ಟಿ, ಪಲ್ಯೆ, ಚಟ್ನಿಪುಡಿ, ಪಾಯಸ ಮಹಾಪ್ರಸಾದ ಅಚ್ಚುಕಟ್ಟಾಗಿ ನೆರವೇರಿತು. ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಐದಾರು ಕೌಂಟರ್ಗಳನ್ನು ತೆರೆಯಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ಸಾಗಿ ಊಟ ಸೇವಿಸಿದರು.
ಸ್ಪಟಿಕ ಲಿಂಗದರ್ಶನ:
ಮಠದ ಹಿಂದಿನ ಲಿಂಗೈಕ್ಯ ಶ್ರೀಗಳ ಗದ್ದುಗೆ ಮಧ್ಯದಲ್ಲಿ ಸ್ಪಟಿಕ ಲಿಂಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅತ್ಯಂತ ಶಕ್ತಿಶಾಲಿ ಲಿಂಗವೆಂದೇ ಕರೆಯುವ ಸ್ಪಟಿಕ ಲಿಂಗವನ್ನು ಪ್ರತಿಷ್ಠಾಪಿಸಿ, ಬಿಲ್ವಪತ್ರೆ, ಬನ್ನಿಪತ್ರೆ ಸೇರಿದಂತೆ ವಿವಿಧ ಹೂಗಳಿಂದ ಶೃಂಗರಿಸಿ, ಭಕ್ತಾದಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಎಸ್.ವಿ.ರಾಮಚಂದ್ರ, ಮುಖಂಡ ಮುನಿಯಪ್ಪ ಕೆ.ಪಿ.ಪಾಲಯ್ಯ, ಎಂ.ಡಿ.ಕೀರ್ತಿಕುಮಾರ್, ಅನೇಕ ಗಣ್ಯರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.