ಕನ್ನಡಪ್ರಭ ವಾರ್ತೆ ಪಾಂಡವಪುರ
ಲಯನ್ಸ್ ಕ್ಲಬ್ ಆಫ್ ಫ್ರೆಂಚ್ ರಾಕ್ಸ್ ಪಾಂಡವಪುರ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರು ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಶಿಬಿರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಸಂಸ್ಥೆಯು ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಶಿಬಿರ ಏರ್ಪಡಿಸಿದ್ದು, ವಾಕ್ ಮತ್ತು ಶ್ರವಣ ದೋಷ ಇರುವಂತಹ ವೃದ್ಧರು, ಸಾರ್ವಜನಿಕರು ಭಾಗವಹಿಸಿ ಶಿಬಿರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಪಿ.ಕರೀಗೌಡ ಮಾತನಾಡಿ, ಗ್ರಾಮೀಣ ಪ್ರದೇಶರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂಸ್ಥೆಯೂ ಹಲವು ಆರೋಗ್ಯ ಉಚಿತ ಶಿಬಿರ ಆಯೋಜಿಸಿಕೊಂಡು ಬರುತ್ತಿದೆ ಎಂದರು.
ಶಿಬಿರದಲ್ಲಿ ತಾಲೂಕಿನ 150ಕ್ಕೂ ಅಧಿಕ ಮಂದಿ ಭಾಗಹಿಸಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಬಿರವನ್ನು ಏರ್ಪಡಿಸಿ ಹಳ್ಳಿಯ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಗ್ರಾಮೀಣ ಭಾಗದ ವೃದ್ಧರು ವಾಕ್ ಹಾಗೂ ಶ್ರವಣದೋಷದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರಿಗೆ ಉಚಿತ ತಪಾಸಣೆ ನಡೆಸುವ ಮೂಲಕ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದರು.ಈ ವೇಳೆ ಲಯನ್ಸ್ ಕ್ಲಬ್ ಆಫ್ ಫ್ರೆಂಚ್ರಾಕ್ಸ್ ಸಂಸ್ಥೆ ಕಾರ್ಯದರ್ಶಿ ಪುಟ್ಟಬಸವೇಗೌಡ, ಖಜಾಂಚಿ ಡಾ.ಸ್ವಾಮೀಗೌಡ, ಡಾ.ಸುಂದರ್ ರಾಜ್, ಡಾ.ಅರುಣ್ರಾಜ್, ರಕ್ಷಾ ಸಮಿತಿ ಸದಸ್ಯ ಎಲೆಕೆರೆ ಚಂದ್ರಣ್ಣ, ಮಂಜುನಾಥ್, ಅಭಿ ಸೇರಿದಂತೆ ಹಲವರು ಭಾಗವಹಿಸಿದ್ದರು.