ಕುಮಾರ ಬಂಗಾರಪ್ಪಗೆ ಶಿವಮೊಗ್ಗ ಕಾಂಗ್ರೆಸ್‌ ಟಿಕೆಟ್‌ ಸುಳ್ಳು ಸುದ್ದಿ: ರಾಘವೇಂದ್ರ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಬಸವನಗೌಡ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಸಮಯ ಸಂದರ್ಭ ನೋಡಿಕೊಂಡು ಅವರನ್ನು ಕರೆಸಿ ಮಾತನಾಡುವ ಕೆಲಸ ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಯತ್ನಾಳ್ ಮಾಡಿರುವ ಆರೋಪಗಳಿಗೆಲ್ಲ ಪಕ್ಷವೇ ಆದಷ್ಟು ಬೇಗ ಉತ್ತರ ಕೊಡುತ್ತದೆ ಎಂದು ಬಿವೈ ರಾಘವೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರಕುಮಾರ್ ಬಂಗಾರಪ್ಪ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎನ್ನುವುದು ಸುಳ್ಳು ಸುದ್ದಿ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.ಇಲ್ಲಿನ‌ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಸೋಮವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ ವೇಳೆಯಲ್ಲಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬಸವನಗೌಡ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಸಮಯ ಸಂದರ್ಭ ನೋಡಿಕೊಂಡು ಅವರನ್ನು ಕರೆಸಿ ಮಾತನಾಡುವ ಕೆಲಸ ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಯತ್ನಾಳ್ ಮಾಡಿರುವ ಆರೋಪಗಳಿಗೆಲ್ಲ ಪಕ್ಷವೇ ಆದಷ್ಟು ಬೇಗ ಉತ್ತರ ಕೊಡುತ್ತದೆ ಎಂದರು.ಮಾಲ್ಡಿವ್ಸ್‌ನ ಸಚಿವರು ಪ್ರಧಾನಿ ಮೋದಿಯವರನ್ನು ಟೀಕೆ ಮಾಡಿದ್ದಕ್ಕೆ ಅಲ್ಲಿನ ಸರ್ಕಾರವೇ ಅವರನ್ನು ವಜಾ ಮಾಡಿದೆ. ಇದು ನಮ್ಮ ಪ್ರಧಾನಿ ಬಗ್ಗೆ ವಿಶ್ವದೆಲ್ಲೆಡೆ ಇರುವಂತಹ ಅಭಿಮಾನಕ್ಕೆ ಸಾಕ್ಷಿ. ಸಂಘಟನೆ ಅವಕಾಶ ಕೊಟ್ಟರೆ ಖಂಡಿತ ಮತ್ತೊಮ್ಮೆ ಸ್ಪರ್ಧಿಸಲುದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.ನೇರ ರೈಲಿಗೆ ಪ್ರಯತ್ನ:ಜ.22 ಕ್ಕೆ ದೇಶದ ಕೋಟ್ಯಾಂತರ ಜನರ ಕನಸು ನನಸಾಗುವ ದಿನ. ಆ ದಿನ ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಅಯೋಧ್ಯೆಗೆ ಈ ಕಡೆಯಿಂದ ನೇರ ರೈಲು ವ್ಯವಸ್ಥೆ ಕಲ್ಪಿಸುವ ಬಗ್ಗೆ ಪ್ರಯತ್ನಿಸಲಾಗುವುದು. ದೇಶದ ಎಲ್ಲ ಕಡೆಯಿಂದಲೂ ರಸ್ತೆ, ವಿಮಾನ, ರೈಲು ಸಂಪರ್ಕ ಕುರಿತಂತೆ ಕೇಂದ್ರ ಸರಕಾರ ಕಾರ್ಯಯಪ್ರವೃತ್ತವಾಗಲಿದೆ. ಮುಂಬೈಗೆ ವಂದೇ ಭಾರತ್ ರೈಲು ಸಂಪರ್ಕಕ್ಕೆ ಮುಂದಿನ ಬಾರಿ ಖಂಡಿತ ಪ್ರಯತ್ನಿಸುವೆ. ಸೇನಾಪುರ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಕುರಿತು ಸಂಬಂಧಪಟ್ಟ ಕೇಂದ್ರದ ಅಧಿಕಾರಿಗಳ ಬಳಿಯೂ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.ಕುಂದಾಪುರ - ಬೈಂದೂರು ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಅಲ್ಲಲ್ಲಿ ಮೇಲ್ಸೆತುವೆ, ಬೈಪಾಸ್, ಅಂಡರ್‌ಪಾಸ್ ಹೀಗೆ ಸುಮಾರು 10 ಕಾಮಗಾರಿಗಳ ಬಗ್ಗೆ ವಿಶೇಷ ಅನುದಾನಕ್ಕಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಭೇಟಿಯಾಗಿ ಕೊಟ್ಟಿದ್ದೇವೆ. ಶಾಸಕರಿಗೂ ಬಂದಂತಹ ಮನವಿಗಳನ್ನು ಇಲಾಖೆಗೆ ಸಲ್ಲಿಸಲಾಗಿದೆ. ಇದಕ್ಕೆ ಪ್ರತ್ಯೇಕ ಅನುದಾನ ನೀಡುವುದಾಗಿ ಸಚಿವರು ಒಪ್ಪಿಕೊಂಡಿದ್ದು, ಆ ಬಗ್ಗೆ ವಿಶ್ವಾಸವಿದೆ ಎಂದ ಸಂಸದರು, ಹೆದ್ದಾರಿ ಪ್ರಾಧಿಕಾರಕ್ಕೆ 6 ತಿಂಗಳಿಗೊಬ್ಬರು ಯೋಜನಾ ನಿರ್ದೇಶಕರು ಬದಲಾಗುತ್ತಿದ್ದಾರೆ. ಹೀಗೆ ಆದರೆ ಕಾಮಗಾರಿಯನ್ನು ಹೇಗೆ ಕಾರ್ಯ ರೂಪಕ್ಕೆ ತರುವುದು. ಈ ಬಗ್ಗೆ ಸಚಿವ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ ಎಂದರು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮುಖಂಡರಾದ ವೆಂಕಟೇಶ್ ಕಿಣಿ, ಸುರೇಶ್ ಶೆಟ್ಟಿ ಮತ್ತಿತರರಿದ್ದರು. ಸುಕುಮಾರ್ ಶೆಟ್ಟರದ್ದು ಹಿಂದೂ ರಕ್ತ!

ಮಾಜಿ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿಯವರ ಮೈಯ್ಯಲ್ಲಿ ಹರಿಯುತ್ತಿರುವುದು ಹಿಂದೂ ರಕ್ತ. ಅವರು ಬೈಂದೂರು ಕ್ಷೇತ್ರದಲ್ಲಿ ಪಕ್ಷ, ಸಂಘಟನೆಗೆ ಶಕ್ತಿ ತುಂಬಿದವರು. ಮುಂದೆಯೂ ಅವರ ಮಾರ್ಗದರ್ಶನ ನಮಗೆ ಇರಲಿದೆ ಎನ್ನುವ ವಿಶ್ವಾಸವಿದೆ. ಇತ್ತೀಚೆಗಷ್ಟೇ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬೈಂದೂರು ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿಯವರನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದಿದ್ದೇನೆ. ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಅವರನ್ನೇ ಕೇಳಬೇಕು. ಅವರ ಆಶೀರ್ವಾದ ನಮ್ಮ ಸಂಘಟನೆಗೆ ಇರಲಿದೆ ಎಂದು ಬಿವೈಆರ್ ವಿಶ್ವಾಸ ವ್ಯಕ್ತಪಡಿಸಿದರು.

Share this article