ಬಸವಕಲ್ಯಾಣ: ಶಿವಯೋಗ ಸುಲಭವಾಗಿದ್ದು, ಎಲ್ಲಾ ಯೋಗಗಳ ಸಮನ್ವಯವಾಗಿದೆ. ಬಸವಾದಿ ಶರಣರು ಜಗತ್ತಿಗೆ ಕೊಟ್ಟ ವಿಸ್ಮಯ ಯೋಗ ದೃಷ್ಟಿಯೋಗ-ಶಿವಯೋಗ ಎಂದು ಉಪ್ಪಿನ ಬೇಟಗೇರಿಯ ಪೂಜ್ಯ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ನುಡಿದರು.
ಶಿವಯೋಗ ಸಾಧನೆಯ ಅನುಭವ ಹಿರಿದು, ಮನೋನಿಯಂತ್ರಣ ಮಾಡುವ ಶ್ರೇಷ್ಠ ವಿಧಾನ ಇದು ವೈಚಾರಿಕ, ವೈಜ್ಞಾನಿಕವಾಗಿದ್ದು, ಮನಸ್ಸನ್ನು ಸಹಜ ಸ್ಥಿತಿಗೆ ಕೊಂಡೊಯ್ದು ಸಹಜ ಇರುವಿಕೆ ಕಲ್ಪಿಸುತ್ತದೆ. ಶಿವಯೋಗದಿಂದ ಕಾಯಕ-ದಾಸೋಹ ತತ್ವಗಳು ಅರಿವಿಗೆ ಬರುತ್ತವೆ. ಇವುಗಳನ್ನು ಪ್ರತಿ ದಿನ ಮಾಡಬೇಕು. ಶರಣರು ಸಂಪಾದಿಸಿದ್ದು ಶೂನ್ಯ ಬಯಲು ಎಂದರು.
ಸಾನಿಧ್ಯವಹಿಸಿದ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ 770 ಅಮರಗಣಂಗಳು ಒಂದೆಡೆ ಸೇರಿ ವಚನ ಸಾಹಿತ್ಯ ರಚಿಸಿದ್ದು, 12ನೇ ಶತಮಾನದಲ್ಲಿ ಕಾಣುತ್ತೇವೆ. ಶರಣರ ಜೀವನ ಸಿದ್ಧಾಂತಗಳು ಸೂರ್ಯ-ಚಂದ್ರರಿರುವರೆಗೂ ಇರುತ್ತವೆ. ಎಲ್ಲರ ಅಂತರಂಗದಲ್ಲಿಯೇ ಪರಮಾತ್ಮನಿದ್ದಾನೆ ಎಂದು ತೋರಿಸಿಕೊಟ್ಟವರು ಬಸವಾದಿ ಶರಣರು. ಸುಖಲಿಂಗ, ಸುಖಿ ಶರಣ ಮತ್ತು ಸುಖದ ಅನುಭಾವ ಶರಣರ ಸುಸಂಗ ಎಂಬ ಸೂತ್ರಗಳು ಜೀವನದ ಸೂತ್ರಗಳಾಗಿವೆ ಎಂದರು.ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ನೇತೃತ್ವವಹಿಸಿದರು. ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಚನ್ನಬಸಪ್ಪ ಪ್ರತಾಪೂರೆ, ವಿಶಾಲಮ್ಮಾ, ರವೀ ಚಿದ್ರ ಕೊಳಕೂರ, ಸುಲೋಚನಾ ಮಾಮಾ, ನಿರ್ಮಲಾ ಶಿವಣಕರ್, ಸೋನಾಲಿ ನೀಲಕಂಠೆ ಸೇರಿದಂತೆ ಇತರರರು ಉಪಸ್ಥಿತರಿದ್ದರು.