ಕನ್ನಡಪ್ರಭ ವಾರ್ತೆ ಸೊರಬ
ಶಿವಯೋಗ ಸಾಧನೆ ಮಾಡುವ ಸಾಧಕನು ಜಗತ್ತಿಗೇ ತಕ್ಕಂತೆ ಇರದೇ ಮತ್ತು ಯಾವುದಕ್ಕೂ ಚಿಂತಿಸದೇ ಶಿವಯೋಗಾನಂದದಲ್ಲಿ ಇರುತ್ತಾನೆ ಎಂದು ಜಡೆ ಬಂಕಾಸಾಣ ಸಮಾಧಾನ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಗುಂಜನೂರು ಗ್ರಾಮದಲ್ಲಿ ಪುರಾತನವಾದ ಪೆದ್ದಯ್ಯ ಹಾಗೂ ಸಿದ್ದಯ್ಯ ಮಠದ ಸ್ವಾಮಿಗಳ ಗದ್ದುಗೆ ಪೂಜೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ ಶಿವಯೋಗಿಯ ಜಗತ್ತು ಯೋಗಿ, ಹುಚ್ಚ, ಪೆದ್ದ ಏನೇ ಅನ್ನಲಿ ಆತ ಯಾವುದಕ್ಕೂ ಚಿಂತಿಸುವುದಿಲ್ಲ. ಜಗತ್ತಿನ ಒಳಿತಿಗೆ ಮಹಾಧ್ಯಾನಿಯಾಗಿರುತ್ತಾನೆ. ಆತ್ಮ ಸಾಧನೆ ಮಾಡುತ್ತಾ ಜಂಗಮರು, ತಮಗೆ ಆಧ್ಯಾತ್ಮದಲ್ಲಿ ಅನುಭವಕ್ಕೆ ಬಂದ ಕೆಲವು ಸಿದ್ಧಿಗಳ, ತತ್ವಗಳ ಲೋಕ ಕಲ್ಯಾಣಾರ್ಥವಾಗಿ ಭಕ್ತರಿಗೆ ಕರುಣಿಸುತ್ತಾ ಇಲ್ಲಿ ಬಂದು ಗದ್ದುಗೆಯಲ್ಲಿ ವಿರಾಜಾಮಾನರಾಗಿದ್ದಾರೆ. ನಾಮ ಸೀಮೆಗಳಿಲ್ಲದ ಅವರ ಲೀಲಾ ವಿನೋದವನ್ನು ನೋಡಿ ಭಕ್ತರು ಅವರನ್ನು ಕೆಲವು ಬಾರಿ ಪೆದ್ದಯ್ಯ ಎಂತಲೂ ಮತ್ತೆ ಹಲವು ಬಾರಿ ಸಿದ್ದಯ್ಯ ಎಂತಲೂ ಕರೆದಿರಬಹುದು. ಎಲ್ಲರೂ ಗುರುವಿನ ಅಗತ್ಯವನ್ನು ಮನಗಂಡು ಮಠದ ಕಾಯಕಲ್ಪಕ್ಕೆ ಮುಂದಾಗಿರುವುದು ಯೋಗ್ಯವಾದದು. ಮಠದ ಆವರಣದಲ್ಲಿ ಹಸಿರೀಕರಣ ಮಾಡಬೇಕು ಎಂದರು.ದುಗ್ಲಿ ಹಾಗೂ ಕಡೆ ನಂದಿಹಳ್ಳಿ ತಪೋಕ್ಷೇತ್ರದ ರೇವಣಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವಯೋಗ ಸಾಧಕನು ಇಷ್ಟಲಿಂಗ ಪೂಜಿಸುತ್ತಾ ಆತನ ಹಸ್ತ, ಪಾದ, ನೇತ್ರ, ವಾಕ್ ಹಾಗೂ ಪಾದ ಈ ಐದೂ ಪಂಚ ಪುರುಷಗಳಾಗುತ್ತವೆ. ಇದರಿಂದ ಭಕ್ತರ ಕಲ್ಯಾಣ ಗುರುಗಳು ಮಾಡುತ್ತಾರೆ. ಇದು ಶಿವಯೋಗದ ಉದ್ದೇಶ. ಕ್ಷೇತ್ರವು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಪ್ರಾತಃಕಾಲದಲ್ಲಿ ಮಲ್ಲಿಕಾರ್ಜುನ ಅರಮನಿ ಮಠ ಮತ್ತು ಸಂಗಡಿಗರಿಂದ ರುದ್ರಾಭಿಷೇಕ ಹೋಮ ಹವನಾದಿಗಳು ನಡೆದವು. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಭಕ್ತರು ಹಾಗೂ ಬಸವೇಶ್ವರ ಯುವಕ ತಂಡದ ಸದಸ್ಯರು ಗುಂಜನೂರು ಗ್ರಾಮದ ಗ್ರಾಮಸ್ಥರಿದ್ದರು.