ನಾಳೆ ಶಿವರಾಜ್ ಸಿಂಗ್ ಚೌಹಾಣ್ ಶಿವಮೊಗ್ಗಕ್ಕೆ

KannadaprabhaNewsNetwork | Published : Jan 17, 2025 12:48 AM

ಶಿವಮೊಗ್ಗ : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಜ.18 ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಜ.18 ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.18 ರಂದು ಬೆಳಗ್ಗೆ 10ಕ್ಕೆ ಶಿವಮೊಗ್ಗದ ಪೆಸಿಟ್ ಕಾಲೇಜ್‌ನಲ್ಲಿ ನಡೆಯುವ ಮಲೆನಾಡು ಸ್ಟಾರ್ಟ್ ಅಪ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ನಂತರ ಅವರು ಬೆಳಗ್ಗೆ 11 ಗಂಟೆಗೆ ಸಾಗರದ ಸಂತೆ ಮೈದಾನದಲ್ಲಿ ನಡೆಯುವ ಅಡಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.ಈ ಸಮಾರಂಭದಲ್ಲಿ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಗಮಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಆರಗ ಜ್ಞಾನೇಂದ್ರ, ಡಾ.ಆರ್.ಎಂ.ಮಂಜುನಾಥ್ ಗೌಡ, ಮಾಜಿ ಸಚಿವ ಎಚ್.ಹಾಲಪ್ಪ, ಮೊದಲಾದವರು ಭಾಗಿಯಾಗಲಿದ್ದಾರೆ. ಅಡಿಕೆ ಬೆಳೆಗಾರ ಸಮಾವೇಶ ಸಮಿತಿಯ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಹಾಗೂ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರಭಟ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.

ಸಮಾವೇಶದಲ್ಲಿ ಅಡಕೆ ಬೆಳೆಗಾರರ ಪ್ರಮುಖ ಉದ್ದೇಶಗಳಾದ ವಿದೇಶಿ ಅಡಕೆ ಆಮದು ನಿಯಂತ್ರಣ, ಅಡಕೆಗೆ ಬರುವ ರೋಗಬಾಧೆ ಪರಿಹಾರಕ್ಕೆ ಕ್ರಮ, ವನ್ಯಜೀವಿಗಳ ಹಾವಳಿ ತಡೆಗಟ್ಟುವಂತೆ, ಅಡಕೆ ಬೆಳೆಗಾರರ ಸೊಪ್ಪಿನ ಬೆಟ್ಟದ ಸಮಸ್ಯೆ ಪರಿಹಾರ ಹಾಗೂ ರಾಷ್ಟ್ರೀಯ ಅಡಕೆ ಮಂಡಳಿ ರಚನೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ನೀಡಿದ್ದ ಅಡಕೆ ಹಾನಿಕಾರಕ ಎನ್ನುವ ವರದಿಯಲ್ಲಿ ಸಿಗರೇಟ್ ಲಾಬಿಗಳಿಂದ ಈ ವರದಿ ಹೊರಗೆ ಬಂದಿರುವ ಶಂಕೆ ಇದೆ. ಹಾಗಾಗಿ ನುರಿತ ತಜ್ಞರ ತಂಡ ರಚಿಸಿ, ಅದಕ್ಕೆ ಒಂದು ಬಜೆಟ್ ನೀಡಿ, ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ಸಚಿವರಲ್ಲಿ ಮನವಿ ಮಾಡಲಾಗುವುದು ಎಂದರು.

ವಂಶ ಪಾರಂಪರಿಕ ಬೆಳೆಯಾದ ಅಡಕೆಯು ಎಲೆ ಚುಕ್ಕೆ ರೋಗದಿಂದ ತುಂಬಾ ದೊಡ್ಡ ರೀತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಒಂದು ರೋಗದಿಂದ ಮಲೆನಾಡು ಭಾಗದಲ್ಲಿ ಸುಮಾರು 226 ಕೋಟಿ ರು. ನಷ್ಟವಾಗಿದೆ. ಇದಕ್ಕೆ ಕೇಂದ್ರದಿಂದ ಪರಿಹಾರದ ರೂಪದಲ್ಲಿ ಹಣ ನೀಡಲು ಒತ್ತಾಯಿಸಲಾಗಿತ್ತು. ಕೇಂದ್ರದಿಂದ ಅನುದಾನ ನೀಡುವುದರ ಮೂಲಕ ರೈತರ ಕಣ್ಣೀರನ್ನು ಒರೆಸಬೇಕು ಎಂದರು.

ಜಿಲ್ಲೆಗೆ ಅಡಕೆ ಸಂಶೋಧನಾ ಕೇಂದ್ರದ ಅವಶ್ಯಕತೆ ಇದೆ. ಮಾಯಿಶ್ಚರ್ ಕಂಟೆಂಟ್ (ಅಡಕೆ ತೇವಾಂಶ) ಶೇ.7 ರಷ್ಟು ಇದೆ. ಇದು ಸಾಧ್ಯವಾಗುತ್ತಿಲ್ಲ. ಅದನ್ನು 10 ರಿಂದ 11ಕ್ಕೆ ತೇವಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒತ್ತಾಯ ಮಾಡಲಾಗುವುದು. ಮಲೆನಾಡಿನ ಅಡಿಕೆಯ ರಫ್ತಿಗೆ ಒತ್ತಾಯಿಸಲಾಗುವುದು. ಹೊರ ರಾಷ್ಟ್ರಗಳಿಂದ ಅಡಿಕೆ ಆಮಧಿಗೆ ತೆರಿಗೆ ಹೆಚ್ಚಿಸಲು ಒತ್ತಾಯ ಮಾಡಲಾಗುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಭತ್ತಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದ ಅವರು, ಮಲೆನಾಡು ಅಡಿಕೆ ಸಂಶೋಧನಾ ಕೇಂದ್ರಕ್ಕೆ ಕಳೆದ ಬಾರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ 10 ಕೋಟಿ ರು. ಅನುದಾನ ಮೀಸಲಿಡಲಾಗಿತ್ತು. ಅಷ್ಟರಲ್ಲಿ ಸರ್ಕಾರ ಬದಲಾಯಿತು. ಸಮಾವೇಶಕ್ಕೆ ಜಿಲ್ಲೆಯ ರೈತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಬೇಕು. ರೈತರ ಕೂಗನ್ನು ಮಂತ್ರಿಗಳಿಗೆ ಮುಟ್ಟಿಸುವ ಅವಕಾಶ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹರತಾಳು ಹಾಲಪ್ಪ, ಟಿ.ಡಿ.ಮೇಘರಾಜ, ಹಕ್ರೆ ಮಲ್ಲಿಕಾರ್ಜುನ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

ರಾಜ್ಯಾಧ್ಯಕ್ಷರಾಗಿ ಬಿವೈವಿ ಉತ್ತಮ ಕಾರ್ಯನಿರ್ವಹಣೆ

ಶಿವಮೊಗ್ಗ: ರಾಜ್ಯಾಧ್ಯಕ್ಷ ಬದಲಾವಣೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗುವ ವಿಷಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬಿ.ವೈ.ವಿಜಯೇಂದ್ರ ಅವರು ರಾಜ್ಯಧ್ಯಕ್ಷರಾದ ಬಳಿಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷ ಸಂಟನೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಪಕ್ಷದಲ್ಲಿದ್ದ ಅನೇಕ ಗೊಂದಲಗಳು ಈಗ ಸರಿಯಾಗುತ್ತಿವೆ ಎಂದು ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದರು.