ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬರ ಬೆಲೆ ಏರಿಕೆಯ ನಡುವೆಯೂ ಈ ಬಾರಿ ಗೌರಿ ಗಣವತಿ ವ್ಯಾಪಾರ ಬಲು ಜೋರಾಗಿದ್ದು, ಮಾರುಕಟ್ಟೆಯಲ್ಲಿ ವಿವಿಧ ರೀತಿಯ ವಿವಿಧ ಭಂಗಿಯ ಗೌರಿ- ಗಣಪತಿಯನ್ನು ಕೊಳ್ಳಲು ಜನರು ಆಗಮಿಸುತ್ತಿದ್ದರು, ಅಗತ್ಯ ವಸ್ತಗಳ ಬೆಲೆ, ಹೂ, ಹಣ್ಣು ಪೂಜಾ ಸಾಮಾಗ್ರಿಗಳ ಬೆಲೆ ಹೆಚ್ಚಾದರು, ಜನರು ಲೆಕ್ಕಿಸದೇ ಖರೀದಿಯಲ್ಲಿ ತೊಡಗಿದ್ದರು. ಇದ್ದುದರಲ್ಲಿ ತರಕಾರಿಗಳ ಬೆಲೆ ಸಾಮಾನ್ಯವಾಗಿತ್ತು.
ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು ಕೊಳವೆಬಾವಿಗಳಲ್ಲಿ ನೀರಿಲ್ಲದೆ ಹೂವು ಮತ್ತು ಹಣ್ಣುಗಳ ಇಳುವರಿ ಕುಸಿದಿದ್ದು ದರಗಳು ಗಣನೀಯವಾಗಿ ಏರಿಕೆಯಾಗಿವೆ. ಮಾರುಕಟ್ಟೆಯಲ್ಲಿ ಕನಕಾಂಬರ ೧,೩೦೦ ರು., ಮಲ್ಲಿಗೆ ೬೦೦ ರು. ಹಾಗೂ ಸೇಬು ೩೦೦ ರು. ತಲುಪಿದೆ. ಇಷ್ಟಾದರೂ ಹಬ್ಬದ ಉತ್ಸಾಹದಲ್ಲಿ ಯಾವುದೇ ಕೊರತೆಯಾಗದೆ ನಾಗರಿಕರು ಹೂವು, ಹಣ್ಣು, ಗೌರಿ ಬಾಗಿನದ ಕಿಟ್ಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಭರ್ಜರಿಯಾಗಿ ಖರೀದಿಸುತ್ತಿದ್ದಾರೆಜಿಲ್ಲಾ ಕೇಂದ್ರ ಚಾಮರಾಜನಗರ ಭಾನುವಾರ ಅಂಗಡಿ ಬೀದಿಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು, ಅದರಲ್ಲೂ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಚಾಮರಾಜೇಶ್ವರ ದೇವಸ್ಥಾನದ ಪಕ್ಕದಲ್ಲಿ ತೆರೆದಿರುವ ಗೌರಿ-ಗಣಪತಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಕಳೆಕಟ್ಟಿತ್ತು.
ಭಾನುವಾರ ಬೆಳಿಗ್ಗೆಯಿಂದಲೇ ವಸ್ತುಗಳನ್ನು ಖರೀದಿಸಲು ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಯ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಹಳೆ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳು, ಚಾಮರಾಜೇಶ್ವರ ದೇವಸ್ಥಾನದ ಪಕ್ಕದಲ್ಲಿ ತೆರೆದಿರುವ ಗೌರಿ-ಗಣಪತಿ ಮಾರಾಟ ಮಳಿಗೆಗಳಿಗೆ ಜನರು ಮುಗಿಬಿದ್ದರು.