ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷ ಸ್ಪರ್ಧಿಸಲಿದೆ. ಕ್ಷೇತ್ರದ ಮತದಾರರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರ ಮತ್ತು ಜನಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ ಮನವಿ ಮಾಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಮತ್ತು ಇತರೆ ಸಮುದಾಯಗಳ ಜನರು ಈ ಸಲ ಬಿಎಸ್ಪಿ ಬೆಂಬಲಿಸಿ, ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೇಕು ಎಂದರು.
ಕಾಂಗ್ರೆಸ್, ಬಿಜೆಪಿ ಮನುವಾದಿ ಪಕ್ಷಗಳಾಗಿವೆ. ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿವೆ. ಬಿಎಸ್ಪಿ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತದ ಮೇಲೆ ಮತ್ತು ಸಂವಿಧಾನವನ್ನು ಸಮರ್ಪಕವಾಗಿ ಜಾರಿಗೊಳಿಸುವ ಉದ್ದೇಶ, ಗುರಿ ಹೊಂದಿರುವ ಏಕೈಕ ಪಕ್ಷವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಎಸ್ಪಿ ಸಮರ್ಪಕ ವಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮದಾಯದ ಏಳಿಗೆಗೆ ಶ್ರಮಿಸುತ್ತಿದೆ. ಕಾಂಗ್ರೆಸ್, ಬಿಜೆಪಿ ಜಿಲ್ಲೆಯಲ್ಲಿ ಈ ವರ್ಗಗಳನ್ನು ಕೇವಲ ಚುನಾವಣೆ ಸಮಯದಲ್ಲಿ ಮತ ಪಡೆಯಲಿಕ್ಕಷ್ಟೇ ಬಳಸುತ್ತಿವೆ. ಅಲ್ಪಸಂಖ್ಯಾತರ ಮುಖಂಡರ ಪೈಕಿ ಯಾರನ್ನೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೇ, ಅಧಿಕಾರ ವಂಚಿತಗೊಳಿಸಿವೆ ಎಂದು ಆರೋಪಿಸಿದರು.
ಜಿಲ್ಲೆ 7 ವಿಧಾನಸಭಾ ಕ್ಷೇತ್ರಗಳ ಪೈಕಿ 2 ಮೀಸಲು ಕ್ಷೇತ್ರ ಹೊರತುಪಡಿಸಿ, ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಶಾಸಕರೇ ಇದ್ದಾರೆ. ಆದರೆ, ಯಾವುದೇ ಕ್ಷೇತ್ರದಲ್ಲಿ ಹಿಂದುಳಿದವರಿಗೆ ಅವಕಾಶ ನೀಡಿಲ್ಲ. ಗೆದ್ದವರು ಸಹ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಅಸಡ್ಡೆ ತೋರುತ್ತಿದ್ದಾರೆ. ಪಕ್ಷದಿಂದ ಹಿಂದುಳಿದ ವರ್ಗದ ಅಭ್ಯರ್ಥಿಗೆ ಆಯ್ಕೆ ಮಾಡಿ, ಕ್ಷೇತ್ರದ ಜನರ ಸೇವೆ, ಅಭಿವೃದ್ಧಿ ಕೈಗೊಳ್ಳಲು ಅವಕಾಶ ನೀಡುವಂತೆ ಅವರು ಕೋರಿದರು.
ಮುಖಂಡರಾದ ಯಶೋಧ ಪ್ರಕಾಶ, ಎಂ.ಚಂದ್ರಪ್ಪ ಇದ್ದರು.