ಕನ್ನಡಪ್ರಭ ವಾರ್ತೆ ಬೆಳ್ತಂಗಡಿವಿಪತ್ತು ನಿರ್ವಹಣೆಯ ಕಾರ್ಯಾಚರಣೆಗೆ ಸನ್ನದ್ಧರಾಗಿ ಬಂದಿರುವ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರು ತಮ್ಮಊರಿನಲ್ಲಿ ಸ್ವಯಂ ಪ್ರೇರಿತರಾಗಿ ಸೇವಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂತಹ ಸೇವಾ ಮನೋಭಾವನೆ ಹೊಂದಿದ ತಂಡ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ, ಶೌರ್ಯ ತಂಡ ಕರ್ನಾಟಕ ರಾಜ್ಯದ ವರದಾನ ಎಂದು ಎನ್ಡಿಆರ್ಎಫ್ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯಾ ಹೇಳಿದ್ದಾರೆ.
ಪುತ್ತೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅತಿಥಿ ಗೃಹದಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಘಟಕಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರು ಮಾತನಾಡಿದರು.ಉಳ್ಳಾಲದಲ್ಲಿ ಗುಡ್ಡ ಕುಸಿತ ಸಂದರ್ಭಗಳಲ್ಲಿ ಶೌರ್ಯ ಸ್ವಯಂಸೇವಕರು ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಚಾರ. ಕರ್ನಾಟಕದಲ್ಲಿ ಯಾವುದೇ ರೀತಿಯ ವಿಪತ್ತು ಸಂಭವಿಸಿದ್ದಲ್ಲಿ ಎನ್ ಡಿ ಆರ್ ಎಫ್ ತಂಡದ ಜತೆ ಶೌರ್ಯ ಸ್ವಯಂಸೇವಕರು ಕರ್ತವ್ಯ ನಿರ್ವಹಿಸಲು ಸಿದ್ಧರಿದ್ದಾರೆ ಎನ್ನುವುದು ಖುಷಿಯ ಸಂಗತಿ. ದೇಶದಲ್ಲಿ ಸೈನಿಕರು ಉಗ್ರರ ವಿರುದ್ಧ ಹೋರಾಡಿದರೆ, ಶೌರ್ಯ ಸ್ವಯಂ ಸೇವಕರು ವಿಪತ್ತಿನ ವಿರುದ್ಧ ಹೋರಾಡುತ್ತಿದ್ದಾರೆ ಎಂದರು.ಜನಸೇವೆ ಮಾಡುವ ಈ ತಂಡವನ್ನು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರಾರಂಭಿಸಿರುವುದು ಸಮಾಜಕ್ಕೆ ನೀಡಿದ ಒಂದು ಅತ್ಯದ್ಭುತ ಕೊಡುಗೆ ಎಂದರು. ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಮಾತನಾಡಿ, ರಾಜ್ಯದ ೯೧ ತಾಲೂಕುಗಳಲ್ಲಿ ೧೦ ಸಾವಿರಕ್ಕೂ ಮಿಕ್ಕಿದ ಶೌರ್ಯ ಸ್ವಯಸೇವಕರು ವಿಪತ್ತಿನ ಸಂದರ್ಭ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಶೌರ್ಯ ತಂಡಗಳಿಗೆ ಎನ್ಡಿಆರ್ಎಫ್ ಪಡೆಯಿಂದ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಎಸ್.ಕೆ.ಡಿ.ಆರ್.ಡಿ.ಪಿ. ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ನೀಡಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರನ್ನು ಬಳಸಿಕೊಳ್ಳುವ ಕುರಿತಾದ ಮನವಿ ಮತ್ತು ಮಾಹಿತಿ ಪತ್ರವನ್ನು ಎನ್ಡಿಆರ್ಎಫ್ ಮುಖ್ಯಸ್ಥರಿಗೆ ನೀಡಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ್ ಪಟಗಾರ, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ., ಶೌರ್ಯ ಸಮಿತಿಯ ಸುಳ್ಯ ತಾಲೂಕಿನ ಮಾಸ್ಟರ್ ಜಯರಾಮ್ ಪಿ.ಜಿ, ಕ್ಯಾಪ್ಟನ್ ಸತೀಶ್, ಪುತ್ತೂರುತಾಲೂಕಿನ ಮಾಸ್ಟರ್ ಮನೋಜ್, ಕ್ಯಾಪ್ಟನ್ ಸುರೇಶ್ ಮತ್ತಿತರರಿದ್ದರು.