ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದ ಸಮೀಪ ಸುಸಜ್ಜಿತ ಹವಾನಿಯಂತ್ರಿತ ನೂತನ ಸಭಾಭವನ ನಿರ್ಮಾಣ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಸಮಾಜದ ದಾನಿಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಸಭಾಭವನ ನಿರ್ಮಾಣ ಸಮಿತಿ ವತಿಯಿಂದ ಸಿದ್ಧಗೊಳಿಸಿದ ‘ವಿಜ್ಞಾಪನಾ ಪತ್ರ’ವನ್ನು ಮಂಗಳವಾರ ಶ್ರೀ ದೇವಳದಲ್ಲಿ ಶ್ರೀ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಬೆಲ್ಪತ್ರೆ ವಿಶ್ವನಾಥ ನಾಯಕ್ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದ ಸಮೀಪ ಸುಸಜ್ಜಿತ ಹವಾನಿಯಂತ್ರಿತ ನೂತನ ಸಭಾಭವನ ನಿರ್ಮಾಣ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಸಮಾಜದ ದಾನಿಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಸಭಾಭವನ ನಿರ್ಮಾಣ ಸಮಿತಿ ವತಿಯಿಂದ ಸಿದ್ಧಗೊಳಿಸಿದ ‘ವಿಜ್ಞಾಪನಾ ಪತ್ರ’ವನ್ನು ಮಂಗಳವಾರ ಶ್ರೀ ದೇವಳದಲ್ಲಿ ಶ್ರೀ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಬೆಲ್ಪತ್ರೆ ವಿಶ್ವನಾಥ ನಾಯಕ್ ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು, ಚಿಕ್ಕ ಬಾಲಕನಾಗಿರುವಾಗ ದೇವಳದ ಆರಂಭದಲ್ಲೇ ತಮ್ಮ ತಂದೆಯವರೊಂದಿಗೆ ಬಂದ ಸವಿ ನೆನಪುಗಳನ್ನು ಮೆಲುಕುಹಾಕಿ, ಆಡಳಿತ ಸಮಿತಿಯಲ್ಲಿ ಹಾಗೂ ಆಡಳಿತ ಮೊಕ್ತೇಸರರಾಗಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿ, ಈ ಕ್ಷೇತ್ರದಲ್ಲಿ ಸಂಕಲ್ಪಿಸಿದ ಎಲ್ಲ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಂತೆ ನೂತನ ಸಭಾಭವನ ಒಂದು ವರ್ಷದೊಳಗೆ ಲೋಕಾರ್ಪಣೆಗೊಳ್ಳುವುದಾಗಿ ಶುಭಹಾರೈಸಿದರು.ಮಾಜಿ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್ ಮಾತನಾಡಿ, ತಮ್ಮ ಅವಧಿಯಲ್ಲಿ ಶ್ರೀಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯ ಸಾನ್ನಿಧ್ಯದ ಪ್ರಭಾವ ಹಾಗೂ ಶ್ರೀಸಂಸ್ಥಾನ ಗೌಡಪಾಚಾರ್ಯ ಕೈವಲ್ಯ ಮಠದ ಪೂಜ್ಯ ಗುರುವರ್ಯರ ಆಶೀರ್ವಾದದಿಂದ ಅತ್ಯಂತ ಯಶಸ್ವಿಯಾಗಿ ನಡೆದುದನ್ನು ಸ್ಮರಿಸಿ, ನೂತನ ಸಭಾಭವನದ ನಿರ್ಮಾಣ ಕಾರ್ಯವೂ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಸಭಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ವೈ. ಉಪೇಂದ್ರ ಪ್ರಭು ಮಾಣ್ಯೂರು ವಹಿಸಿ, ಈ ಸ್ತುತ್ಯ ಕಾರ್ಯದಲ್ಲಿ ಸಮಾಜ ಬಾಂಧವರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆಯಿತ್ತರು.ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಭಾಭವನದ ಎಂಜಿನಿಯರ್ ಪಳ್ಳಿ ಧರ್ಮೆಟ್ಟು ಗೋಪಿನಾಥ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಮಾಜಿ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್. ಪಾಟ್ಕರ್, ಕಾರ್ಯಕಾರಿ ಸಮಿತಿ ಸದಸ್ಯ ಬಿ.ಪುಂಡಲೀಕ ಮರಾಠೆ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಆಡಳಿತ ಮೊಕ್ತೇಸರ ಸರಳೇಬೆಟ್ಟು ರಮಾನಾಥ ನಾಯಕ್, ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಉಪಾಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್ ಪರ್ಕಳ, ಕೋಶಾಧಿಕಾರಿ ವಿಟ್ಠಲ ಮಡ್ಕೇಕರ್ ಸಗ್ರಿ ನೋಳೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಮದಾಸ್ ಪ್ರಭು ಸ್ವಾಗತಿಸಿದರು. ಕ್ಷೇತ್ರದ ವೈದಿಕರಾದ ಮಂಜುನಾಥ್ ಭಟ್ ಪ್ರಾರ್ಥಿಸಿದರು. ಪೆರ್ನಂಕಿಲ ಉಮೇಶ ನಾಯಕ್ ನಿರೂಪಿಸಿದರು. ಜೊತೆ ಕಾರ್ಯದರ್ಶಿ ರಾಮರಾಯ ಪಾಟ್ಕರ್ ಧನ್ಯವಾದವಿತ್ತರು. ವಿಶ್ವನಾಥ್ ಬಾಂದೇಲ್ಕರ್ ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.