ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾ ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ನಗರದ ಗುರುನಗರ ಬಡಾವಣೆ ಡಾ.ಬಸವರಾಜ ಪಾಟೀಲ್ ಅಷ್ಟೂರ್ ನಿವಾಸದಲ್ಲಿ ಜಿಲ್ಲೆಯ ಪೂಜ್ಯರು, ಸಂತರೊಂದಿಗೆ ಸಂವಾದ ನಡೆಯಿತು. ಶಂಕರಾನಂದ ಉಪಸ್ಥಿತಿಯಲ್ಲಿ ನಡೆದ ಸಂವಾದ ಗೋಷ್ಠಿಯಲ್ಲಿ ವೀರಶೈವ-ಲಿಂಗಾಯತ, ಬಂಜಾರಾ, ಬೌದ್ಧ, ಸಿಖ್, ವಿಶ್ವಕರ್ಮ ಸೇರಿದಂತೆ ವಿವಿಧ ಸಂಪ್ರದಾಯಗಳ 35ಕ್ಕೂ ಹೆಚ್ಚು ಪೂಜ್ಯರು ಪಾಲ್ಗೊಂಡಿದ್ದರು. ಸಮಾಜದಲ್ಲಿ ಸಮಾನತೆ ತರುವುದು, ಅಸ್ಪ್ರಶ್ಯತೆ, ಮೇಲು-ಕೀಳು ನಿವಾರಣೆ, ಎಲ್ಲ ಮಹಾಪುರುಷರ ಚಿಂತನೆಗಳಡಿ ಜಾತಿಭೇದ ಮರೆತು ಸಶಕ್ತ ಸಮಾಜದ ನಿರ್ಮಾಣ ಕುರಿತಾಗಿ ಮುಕ್ತವಾಗಿ ಚರ್ಚೆ ನಡೆದವು. ಅನೇಕ ಶ್ರೀಗಳು ಇದಕ್ಕೆ ಪೂರಕವಾಗಿ ಮಹತ್ವದ ಸಲಹೆ, ಸೂಚನೆ ತಿಳಿಸಿದರು.
ಜಾತೀಯತೆ, ಮೇಲು-ಕೀಳು, ಅಸ್ಪೃಶ್ಯತೆ, ಅಸಮಾನತೆಗಳು ಸ್ವಸ್ಥ ಸಮಾಜಕ್ಕೆ ಕಂಟಕವಾಗಿವೆ. ನಮ್ಮ ಮಧ್ಯೆ ಇರುವ ಸಮಾಜಘಾತುಕ ಶಕ್ತಿಗಳು ಇದರ ದುರ್ಲಾಭ ಪಡೆದುಕೊಂಡು ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಭಾರತೀಯರ ಸಾಮರಸ್ಯದ ಬದುಕಿಗೆ ಕೊಳ್ಳಿ ಇಡುವ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚರದಿಂದ ಇರಬೇಕಾಗಿದೆ. ಸಮಾಜದಲ್ಲಿ ಕೆಳಮಟ್ಟದ ಜೊತೆಗೆ ಸರ್ವ ಸಮುದಾಯದಲ್ಲಿ ಸಾಮರಸ್ಯ ಗಟ್ಟಿಗೊಳಿಸಿ, ಎಲ್ಲರಿಗೂ ಒಟ್ಟುಗೂಡಿಸುವಲ್ಲಿ ಶ್ರೀಗಳ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ಶಂಕರಾನಂದ ಪ್ರತಿಪಾದಿಸಿದರು.ಮಹಾಪುರುಷರು ಒಂದೇ ಜಾತಿಗೆ ಸೀಮಿತರಲ್ಲ:ಮೌಲಿಕ ಚಿಂತನೆ, ತತ್ವಾದರ್ಶ ಮುಖಾಂತರ ಸಮಾಜಕ್ಕೆ ಬೆಳಕಾಗಿ ಭಾರತ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡಿದ ಅನೇಕ ಮಹಾಪುರುಷರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ. ಅವರೆಲ್ಲರೂ ಸಮಾಜ ಸುಧಾರಕರು. ಅವರ ತತ್ವ, ವಿಚಾರ ಅರಿತು ನಾವೆಲ್ಲರೂ ಸಾಗಬೇಕಾಗಿದೆ. ಮಹಾಪುರುಷರಿಗೆ ಜಾತಿಗೆ ಕಟ್ಟಿಹಾಕುವುದು ಸರಿಯಲ್ಲ ಎಂದು ಶಂಕರಾನಂದ ಹೇಳಿದರು.
ಸಾಮಾಜಿಕ ಸಾಮರಸ್ಯ ವಿಭಾಗ ಉತ್ತರ ಪ್ರಾಂತ ಸಂಯೋಜಕ ಶಿವಲಿಂಗ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರ ಶಿವಾಚಾರ್ಯ, ಡಾ.ಶಿವಾನಂದ ಸ್ವಾಮೀಜಿ, ಶಿವಯೋಗೇಶ್ವರ ಸ್ವಾಮೀಜಿ, ಜಯಶಾಂತಲಿಂಗ ಶಿವಾಚಾರ್ಯರು, ಹಾವಗಿಲಿಂಗ ಶಿವಾಚಾರ್ಯರು, ಭಂತೆ ಜ್ಞಾನಸಾಗರ, ಜ್ಞಾನಿ ದರ್ಬಾರಾಸಿಂಗ್, ಗೋವಿಂದ ಮಹಾರಾಜ ಸೇರಿದಂತೆ 35ಕ್ಕೂ ಹೆಚ್ಚು ಶ್ರೀಗಳು ಇದ್ದರು. ಈ ಸಂದರ್ಭದಲ್ಲಿ ಕೆಲ ಪೂಜ್ಯರು ಮಾತನಾಡಿ ಸಲಹೆ ನೀಡಿದರು.