ಸಿದ್ಧಗಂಗಾ ಮಠ ಆಧುನಿಕ ಮಂಟಪ

KannadaprabhaNewsNetwork | Published : Jan 5, 2025 1:31 AM

ನಾಡಿನ ಲಕ್ಷಾಂತರ ಮಕ್ಕಳಿಗೆ ಬದುಕು ಕಟ್ಟಿಕೊಟ್ಟಿರುವ ಶ್ರೀ ಸಿದ್ದಗಂಗಾ ಮಠ ಆಧುನಿಕ ಮಂಟಪ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ನಾಡಿನ ಲಕ್ಷಾಂತರ ಮಕ್ಕಳಿಗೆ ಬದುಕು ಕಟ್ಟಿಕೊಟ್ಟಿರುವ ಶ್ರೀ ಸಿದ್ದಗಂಗಾ ಮಠ ಆಧುನಿಕ ಮಂಟಪ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಹೇಳಿದರು.

ನಗರದ ಶ್ರೀ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂಸ್ಕೃತಿ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದಗಂಗಾ ಶಿಕ್ಷಣ ಸಂಸ್ಥೆಯು ವ್ಯಕ್ತಿಗಳ ವ್ಯಕ್ತಿತ್ವ ರೂಪಿಸುವ ಪುಣ್ಯ ಸ್ಥಳವಾಗಿದೆ ಎಂದರು. ಗುರು ಮತ್ತು ಮಕ್ಕಳ ನಡುವಿನ ಸಂಬಂಧ ರಕ್ತ ಸಂಬಂಧಕ್ಕಿಂತ ಹೆಚ್ಚಾಗಿರುತ್ತದೆ ಎಂದರು. ಮೊಬೈಲ್ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಅತಿಥಿಗಳಾಗಿ ಭಾಗವಹಿಸಿದ್ದ ವಾಲಿಬಾಲ್ ತರಬೇತುದಾರ ರವೀಂದ್ರ ಟಿ.ವಿ. ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆಗಳ ಪ್ರಾಮುಖ್ಯತೆ ಮತ್ತು ಅದರಿಂದ ಉದ್ಯೋಗ ಅವಕಾಶಗಳ ಬಗ್ಗೆ ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಚಲನಚಿತ್ರ ನಟ ವಿರಾಟ್‌ ರವರು ಕಾಲೇಜಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ವಿದ್ಯಾರ್ಥಿನಿಯರನ್ನು ರಂಜಿಸಿದರು. ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಪದವಿ ಪೂರ್ವ ಕಾಲೇಜುಗಳ ಸಂಯೋಜನಾಧಿಕಾರಿ ಪ್ರೊ.ಜಿ.ಎಸ್.ರೇಣುಕಪ್ಪ ಮಾತನಾಡಿ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯು ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಪಿ. ಮಾತನಾಡಿ, ವಿದ್ಯಾರ್ಥಿನಿಯರ ಫಲಿತಾಂಶ ಶ್ರಮದಲ್ಲಿ ಅಡಗಿದೆ. ಹಾಗಾಗಿ ಶ್ರದ್ಧೆ, ಪರಿಶ್ರಮದಿಂದ ಅಧ್ಯಯನಶೀಲರಾಗಬೇಕು ಎಂದು ಹೇಳಿದರು.

ಸಂಸ್ಕೃತಿ ಸಂಚಾಲಕರಾದ ಪುಷ್ಪಲತ ಹೆಚ್.ಎಸ್. ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು. ಬಸವರಾಜು ಆರ್.ಸಿ. ಸ್ವಾಗತಿಸಿದರು. ವೀಣಾ ಬಿ.ಸಿ. ನಿರೂಪಿಸಿದರು. ಕವಿತ ವಂದಿಸಿದರು.