ವಿಜಯಪುರ: ಇಂದಿನ ಯುವಜನತೆಗೆ ಜಗಜ್ಯೋತಿ ಬಸವಣ್ಣನವರ ತತ್ವ ಚಿಂತನೆಗಳು, ಸಿದ್ದಗಂಗಾ ಮಠದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿಯ ಜೀವನ ಹಾಗೂ ಬಸವಕಲ್ಯಾಣ ಮಠದ ಅಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿಯವರ ಬದುಕು ಆದರ್ಶಮಯ ಎಂದು ಶ್ರೀವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವ ರಮಾನಂದ ಸ್ವಾಮೀಜಿ ಹೇಳಿದರು.
ಬಸವಕಲ್ಯಾಣ ಮಠದ ಅಧ್ಯಕ್ಷ ಮಹದೇವ ಸ್ವಾಮೀಜಿ ಮಾತನಾಡಿ, ಯಾವುದೇ ಜಾತಿ, ಮತ, ಪಂಥ ಹಾಗೂ ಭೇದಭಾವವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿ ಸಮಾಜಮುಖಿಯಾಗಿ ಮಠವನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಕ್ತಾದಿಗಳು ಇದೇ ರೀತಿಯ ಪ್ರೀತಿ-ಆದರಗಳನ್ನು ಕಿರಿಯ ಶ್ರೀಗಳಾದ ಸದಾಶಿವ ಸ್ವಾಮೀಜಿ ನೀಡಬೇಕು ಎಂದು ಕೋರಿದರು.
ರಾಜ್ಯ ೫ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ಸಮಾಜದಲ್ಲಿ ಗುರುಗಳಿಗೆ ನೀಡಬೇಕಾದ ಗೌರವ ಮತ್ತು ಮಹತ್ವದ ಕುರಿತು ಬೆಳಕು ಚೆಲ್ಲಿದರು.ಬಸವೇಶ್ವರನಗರದ ವಿನಾಯಕ ದೇವಾಲಯದಿಂದ ಮಹದೇವ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ ಹಾಗೂ ಸದಾಶಿವ ಸ್ವಾಮೀಜಿಯವರನ್ನು ವೀರಗಾಸೆಯ ಜಾನಪದ ಕಲಾತಂಡದೊಂದಿಗೆ ಆಕರ್ಷಕ ಅಲಂಕೃತ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಠಕ್ಕೆ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಮಠದ ಕಿರಿಯ ಶ್ರೀಗಳಾದ ಶ್ರೀ ಸದಾಶಿವ ಸ್ವಾಮೀಜಿ, ಅಂಡ್ರಕಳ್ಳಿ ಶ್ರೀ ಪಟ್ಟದ ಪಂಚಾಕ್ಷರಿ ಸ್ವಾಮೀಜಿ, ಚಕ್ರಭಾವಿ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ದೊಡ್ಡಬಳ್ಳಾಪುರ ಖಾನಿಮಠದ ಶ್ರೀ ಬಸವರಾಜ ಸ್ವಾಮೀಜಿ, ಶ್ರೀ ಬಸವೇಶ್ವರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಮರಳವಾಡಿ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ಶ್ರೀ ಶಿವಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.
ವಿಜಯಪುರ ಬಸವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಯ ೧೧೯ನೇ ಜನ್ಮದಿನ, ಬಸವಕಲ್ಯಾಣ ಮಠದ ಪೀಠಾರೋಹಣ ಮಹೋತ್ಸವ, ಬಸವ ಜಯಂತಿ, ಎಂ.ಮರಿಯಮ್ಮನವರ ಸ್ಮರಣೋತ್ಸವ, ಶ್ರೀ ಮಹದೇವ ಸ್ವಾಮೀಜಿ ವರ್ಧಂತ್ಯುತ್ಸವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದ ಪ್ರಯುಕ್ತ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.