ಕನ್ನಡಪ್ರಭ ವಾರ್ತೆ ಮೂಡಲಗಿ
ಘಟಪ್ರಭೆಯ ಪುಣ್ಯ ನದಿ ತೀರದಲ್ಲಿ ಶೋಭಿಸುತ್ತಿರುವ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ನಿಜಗುಣದೇವ ಶ್ರೀಗಳು ಸಿದ್ದಲಿಂಗ ಕೈವಲ್ಯಾಶ್ರಮ ಸ್ತಾಪಿಸಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕಂತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ವಿಶಿಷ್ಠ ಸೇವೆ ಸಲ್ಲಿಸುವ ಮೂಲಕ ಈ ಭಾಗದಲ್ಲಿ ಆಧ್ಯಾತ್ಮಿಕ ಸಂಘಟನೆ ಕೈಗೊಂಡು ಹುಣಶ್ಯಾಳ ಪಿ.ಜಿಯನ್ನು ಸುಕ್ಷೇತ್ರವನ್ನಾಗಿಸಿದ್ದಾರೆಂದು ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟ (ಬೆಮುಲ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಿಜಗುಣ ದೇವರ ಸೇವಾಕಾರ್ಯ ಮುಕ್ತಕಂಠದಿಂದ ಶ್ಲಾಘಿಸಿದರು.ಶುಕ್ರವಾರ ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ನಡೆಯುತ್ತಿರುವ ಸಿದ್ದಲಿಂಗ ಕೈವಲ್ಯಾಶ್ರಮದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೂವಿನ ಸುಗಂಧದಂತೆ ಹುಣಶ್ಯಾಳ ಪಿ.ಜಿ. ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ ಸಿದ್ದಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿಗಳಿಗೆ ಸಲ್ಲುತ್ತದೆ ಎಂದವರು ಹೇಳಿದರು.
ಕಳೆದ ಮೂರು ದಶಕಗಳಿಂದ ಈ ಮಠದ ಶ್ರೀಗಳು ಮಠದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಹಲವಾರು ಧಾರ್ಮಿಕ ಕಾರ್ಯ ಹಮ್ಮಿಕೊಳ್ಳುವ ಮೂಲಕ ಈ ಭಾಗದ ಸದ್ಭಕ್ತರಿಗೆ ಆಧ್ಯಾತ್ಮಿಕ ವಾತಾವರಣ ಉಣಬಡಿಸುತ್ತಿದ್ದಾರೆ. ಪ್ರತಿವರ್ಷ ಭಕ್ತರ ಸಹಕಾರದೊಂದಿಗೆ ಅದ್ಧೂರಿಯಾಗಿ ಹೊಸ ವರ್ಷದ ಆರಂಭದ ದಿನದಂದು ಜಾತ್ರೆ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಭಕ್ತರ ಇಷ್ಟಾರ್ಥ ಈಡೇರಿಸಿ ಭಕ್ತರ ಪಾಲಿಗೆ ಕಾಮಧೇನುವಾಗಿದ್ದಾರೆ. ಈ ಮೂಲಕ ಭವ್ಯ ಪರಂಪರೆಯ ದಿವ್ಯ ಶಕ್ತಿಯಾಗಿ ಸೇವಾ ಪರಂಪರೆಗೆ ಶ್ರೀಗಳು ಸಾಕ್ಷಿಯಾಗಿದ್ದಾರೆಂದು ಅವರು ತಿಳಿಸಿದರು.ಪೀಠಾಧಿಪತಿ ನಿಜಗುಣದೇವ ಸ್ವಾಮೀಜಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಮುಖಂಡರಾದ ಗುರುಸಿದ್ದಪ್ಪ ಕರಬನ್ನಿ, ಬಸು ಕಾಡಾಪೂರ, ರಾಮನಾಯಿಕ ನಾಯಿಕ, ಶಂಕರ ಇಂಚಲ, ಶಬ್ಬೀರ್ ತಾಂಬಿಟಗಾರ, ಈಶ್ವರ ಅಂಕಲಗಿ, ಸಿದ್ಧಾರೂಢ ಇಂಚಲ, ಬಸವರಾಜ ಘೋರ್ಪಡೆ, ಬಸಗೌಡ ನಾಯಿಕ, ಸಲೀಮ್ ಜಮಾದಾರ, ಹಣಮಂತ ಶೆಕ್ಕಿ, ಬಸು ಗಲಗಲಿ ಇತರರು ಉಪಸ್ಥಿತರಿದ್ದರು.