;Resize=(412,232))
ಕನ್ನಡಪ್ರಭ ವಾರ್ತೆ ಬೆಳಗಾವಿ
‘ಹಿಂದು ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ. ಹಾಗಾಗಿ, ಮಸೀದಿಗಳನ್ನು ಧ್ವಂಸ ಮಾಡಿ ದೇವಸ್ಥಾನಗಳನ್ನು ಕಟ್ಟಬೇಕು ಎಂದು ಅವನ್ಯಾರೋ ಮೂರ್ಖ ಹೇಳುತ್ತಾನೆ.
ದಾರಿ ತಪ್ಪಿಸುವ ಇಂತಹ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ’ ಎಂದು ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷ ವಾಗ್ಧಾಳಿ ನಡೆಸಿದರು.
ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ದ್ವೇಷ ಹರಡಿ, ಮಸೀದಿ ಧ್ವಂಸ ಮಾಡಲು ಕರೆಕೊಟ್ಟ ಮೂರ್ಖರು ಈಗಲೂ ಇದ್ದಾರೆ.
ಅವನ್ಯಾರೋ ಮೂರ್ಖ ಹಿಂದು ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ. ಹಾಗಾಗಿ, ಮಸೀದಿಗಳನ್ನು ಧ್ವಂಸ ಮಾಡಿ ದೇವಸ್ಥಾನಗಳನ್ನು ಕಟ್ಟಬೇಕು ಎನ್ನುತ್ತಾನೆ. ಇತಿಹಾಸ ಇದನ್ನೆಲ್ಲ ನಮಗೆ ಹೇಳುತ್ತದೆಯೇ ಎಂದು ಪ್ರಶ್ನಿಸಿದರು.
ಆ ಮೂರ್ಖನ ಮಾತಿಗೂ ಜನ ಚಪ್ಪಾಳೆ ತಟ್ಟುತ್ತಾರೆ. ದಯವಿಟ್ಟು ಸಂಗೊಳ್ಳಿ ರಾಯಣ್ಣನಂತವರಿಗೆ ಚಪ್ಪಾಳೆ ತಟ್ಟೋಣ. ದಾರಿ ತಪ್ಪಿಸುವ ಇಂತಹ ಮೂರ್ಖರಿಗೆ ತಪ್ಪಾಳೆ ತಟ್ಟಬೇಡಿ ಎಂದು ಸಂಸದ ಅನಂತಕುಮಾರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.