ಮಂಡ್ಯ : ರಾಜ್ಯದಲ್ಲಿ ಸಿದ್ದರಾಮಯ್ಯರಂತ ಹಸಿ ಸುಳ್ಳು ಹೇಳುವ ಇನ್ನೊಬ್ಬ ಮುಖ್ಯಮಂತ್ರಿಯಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಮಾಜಿ ಶಾಸಕ ಅಶ್ವಥ್ನಾರಾಯಣ್ ನಾಗಮಂಗಲ ಕಿಡಿಕಾರಿದರು.
ನಗರದ ಚಾಮುಂಡೇಶ್ವರಿ ಬಡಾವಣೆಯ ಬೇಕ್ಪಾಯಿಂಟ್ ಬಳಿ ಬಿಜೆಪಿ ಕಾರ್ಯರ್ತಕರು ಮತ್ತು ಹಿತೈಶಿಗಳು ಆಯೋಜಿಸಿದ್ದ ರಾಜ್ಯ ಬಿಜೆಪಿ ವಕ್ತಾರ, ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ನಾರಾಯಣ್ ನಾಗಮಂಗಲ ಅವರ ಹುಟ್ಟುಹಬ್ಬ ಪ್ರಯುಕ್ತ ಅಭಿನಂದನೆ-ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೈಲ ಬೆಲೆ ಹೆಚ್ಚಳ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲೆ ಹಾಕ್ತಿದ್ದಾರೆ. ಈ ದೇಶದಲ್ಲಿ ಸಿದ್ದರಾಮಯ್ಯರಂತ ಹಸಿ ಸುಳ್ಳು ಹೇಳುವ ಇನ್ನೊಬ್ಬ ಮುಖ್ಯಮಂತ್ರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕ ಖರ್ಗೆ ಅವರಿಗೆ ಪ್ರಧಾನಿ ಮೋದಿ ಅವರ ಮೇಲೆ ಕಾಮೆಂಟ್ಸ್ ಮಾಡೋದೆ ಇವರ ಕೆಲಸವಾಗಿದೆ,
೨೦೨೧ರಲ್ಲಿ ನರೇಂದ್ರ ಮೋದಿ ಅವರು ತೈಲೆ ಬೆಲೆ ಕಡಿಮೆ ಮಾಡಿದ್ದರು. ಜನರಿಗೆ ಸಾಕಷ್ಟು ಉಪಯೋಗವಾಗಿ ಹಣ ಉಳಿತಾಯವಾಗುತ್ತಿತ್ತು, ಈಗ ಇವರು ಬೆಲೆ ಹೆಚ್ಚಳಮಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ಸಾಕಷ್ಟು ವಸ್ತುಗಳಿಗೆ ತೆರಿಗೆ ಹೆಚ್ಚಿಸಿ, ಜನರ ಜೋಬಿನಿಂದ ಕಿತ್ತುಕೊಳ್ಳುತ್ತಿದ್ದಾರೆ ಎಂದರು.
ಬೆಲೆ ಏರಿಕೆಯಿಂದ ರಾಜ್ಯದ ಜನರಿಗೆ ಬರೆ:
ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಹಿತಿ ತೆಗೆದುಕೊಂಡು ಬಿಜೆಪಿ ಬಗ್ಗೆ ಮಾತನಾಡಲಿ, ಈಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ, ಬಡವರ ಮೇಲೆ ಬರೆ ಎಳೆದಿದ್ದಾರೆ, ಲಿಕ್ಕರ್ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದಾರೆ, ವಿದ್ಯುತ್ ದರ ೭.೫ರೂ ಏರಿಕೆ, ನೀರಿನ ಬೆಲೆ, ಭೂಮಿ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಬರಗಾಲ ತಂದು ಜಿಲ್ಲೆಯಲ್ಲಿ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾಲೆಗಳಿಗೆ ನೀರು ಬಿಟ್ಟಿಲ್ಲ, ನಾಲೆಗೆ ನೀರು ಬಿಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕು, ಸಿದ್ದರಾಮಯ್ಯ ಅವರು ಸರ್ಕಾರದ ಲೋಪಗಳನ್ನು ಮುಚ್ಚಿಕೊಳ್ಳಲು ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ನಿಂದ ಅಭಿವೃದ್ಧಿಗೆ ತೀವ್ರ ಹಿನ್ನೆಡೆ:
ದೇಶದಲ್ಲಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ರೈತರ ಪರ ಯೋಜನೆ ಕೊಟ್ಟಿದ್ದಾರೆ, ಮೋದಿ ಮಾದರಿಯಲ್ಲಿ ಸಿದ್ದರಾಮಯ್ಯ ಕೆಲಸ ಮಾಡಿ ತೋರಿಸಲಿ, ಮೋದಿ ವಿರುದ್ಧ ಟೀಕೆ ಮಾಡುವುದನ್ನ ಕಾಂಗ್ರೆಸ್ ಬಿಡಬೇಕು. ಗ್ಯಾರಂಟಿಯನ್ನು ಸಹ ಸರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ೫೮ ಸಾವಿರ ಕೋಟಿ ರು. ಮೀಸಲು ಅಂತಾರೆ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗುತ್ತಿದೆ ಎಂದು ದೂರಿದರು.
ಪಿಡಬ್ಲ್ಯುಡಿ ಮಿನಿಸ್ಟರ್ ಯಾರು ಅಂತಾನೇ ಗೊತ್ತಿಲ್ಲ, ಗ್ರಾಮೀಣಾಭಿವೃದ್ಧಿ ಸಚಿವ ಮಂತ್ರಿಯಾಗಿ ಮುಂದುವರೆಯಲು ಯೋಗ್ಯತೆ ಇಲ್ಲ. ಮೈಸೂರಿನ ಸಾಲುಂಡಿ ಗ್ರಾಮದಲ್ಲಿ ವಿಷ ನೀರು ಕುಡಿದು ಜನ ಸತ್ತಿದ್ದಾರೆ, ಮಧುಗಿರಿಯಲ್ಲಿ ಕಲುಸಿತ ನೀರು ಕುಡಿದು ಸಾವು ಆಗಿದೆ. ಕೇಂದ್ರ ಸರ್ಕಾರ ಅರ್ ಘರ್ ಯೋಜನೆ ತರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ತಾಂಡವವಾಡುತ್ತಿತ್ತು ತಿಳಿಸಿದರು.
ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಪಿಡಬ್ಲ್ಯುಡಿ ಸಚಿವ ಎಲ್ಲಿದ್ದಾರೆ? ಅಭಿವೃದ್ಧಿಗೆ ಹಣ ಇಲ್ಲ, ಕಾಂಗ್ರೆಸ್ ಪಕ್ಷದ ಶಾಸಕರಲ್ಲೇ ಮನಸ್ತಾಪದ ಕೂಗೆದ್ದಿದೆ. ಅದನ್ನ ಮುಚ್ಚಿಕೊಳ್ಳಲು ಈ ರೀತಿಯ ಬೆಲೆ ಏರಿಕೆ ಮಾಡಿರುವ ಸಾಕಷ್ಟು ತಪ್ಪುಗಳನ್ನು ಬಿಜೆಪಿ ಖಂಡಿಸುತ್ತದೆ ಎಂದು ಎಚ್ಚರಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ, ದರ್ಶನ್ ಮಾಡಿರುವುದು ತಪ್ಪು, ಈಗಾಗಲೇ ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ. ಈಗಾಗಲೇ ಕೆಲವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ದರ್ಶನ್ ಇನ್ನೂ ಪೊಲೀಸ್ ವಶದಲ್ಲಿದ್ದಾರೆ. ಕೂಲಂಕುಷ ವಿಚಾರಣೆ ಮಾಡಿ ನ್ಯಾಯಸಮ್ಮತವಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು. ಪ್ರಾಣ ಕಳೆದುಕೊಂಡ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಬಿಜೆಪಿ ರೇಣುಕಾಸ್ವಾಮಿ ನ್ಯಾಯದ ಪರ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ನಗರಮೋರ್ಚಾ ಮಾಜಿ ಅಧ್ಯಕ್ಷ ಎಚ್.ಆರ್.ಅರವಿಂದ್, ನಗರಮೋರ್ಚಾ ಅಧ್ಯಕ್ಷ ವಿವೇಕ್, ಯುವಮೋರ್ಚಾ ಅಧ್ಯಕ್ಷ ವಸಂತಕುಮಾರ್, ಹಿರಿಯ ಮುಖಂಡ ಮಲ್ಲಿಕಾರ್ಜುನ್, ಸಿ.ಟಿ.ಮಂಜುನಾಥ್, ಸಿದ್ದರಾಜು, ಶಿವಕುಮಾರ್ ಆರಾಧ್ಯ ಮತ್ತಿತರರಿದ್ದರು.