ಕನ್ನಡಪ್ರಭ ವಾರ್ತೆ ಭಾಲ್ಕಿ:
ಬೆಂಗಳೂರಿನ ವಿಕಾಸ ಸೌಧದ ಅರಣ್ಯ ಇಲಾಖೆ ಕೊಠಡಿಯಲ್ಲಿ ಮಂಗಳವಾರ ವಿ.ಸಿದ್ದರಾಮಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಮಧ್ಯ ಕರ್ನಾಟಕ ಭಾಗದ ದಾವಣಗೆರೆ ಜಿಲ್ಲೆಯ ಮೂಲದವರಾಗಿದ್ದರೂ ಕೂಡ ವಿ.ಸಿದ್ದರಾಮಣ್ಣ ಶರಣರು ಬೀದರ್ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಚನ್ನಬಸವ ಪಟ್ಟದ್ದೇವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಇವರು ಗಡಿ ಭಾಗದಲ್ಲಿ ಬಸವತತ್ವ ಪ್ರಚಾರ ಪ್ರಸಾರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಬಸವಕಲ್ಯಾಣ ನೂತನ ಅನುಭವ ಮಂಟಪ ನಿರ್ಮಾಣದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು, ಶತಾಯಷಿ ಡಾ.ಭೀಮಣ್ಣ ಖಂಡ್ರೆ ಅವರ ಜೊತೆಗೆ ವಿ. ಸಿದ್ದರಾಮಣ್ಣ ಅವರು ಕೈಜೋಡಿಸಿದರು. ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಮ್ಮೆಲ್ಲರಿಗೂ ಮಾರ್ಗದರ್ಶಕರೂ ಆಗಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ತೀವ್ರ ದುಃಖ ತರಿಸಿದೆ. ಕುಟುಂಬ ಸದಸ್ಯರಿಗೆ ಅವರ ಅಗಲಿಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಬಸವಣ್ಣನವರು ಕರುಣಿಸಲಿ ಎಂದು ಈಶ್ವರ ಖಂಡ್ರೆ ಪ್ರಾರ್ಥಿಸಿದರು. ಈ ವೇಳೆ ಶೇಖರಗೌಡ ರಾಮತನಾಳ, ಡಾ. ಕೆ.ಟಿ ತಿಪ್ಪೇಸ್ವಾಮಿ, ಪ್ರಭಾಕರ ಗೌಡ ಸೇರಿದಂತೆ ಹಲವರು ಇದ್ದರು.