ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಶ್ರೀ ಸಿದ್ಧಾರೂಢರ 188ನೇ ಜನ್ಮದಿನೋತ್ಸವದ ಪ್ರಯುಕ್ತ ನಗರದ ಶ್ರೀ ಸಿದ್ಧಾರೂಢರ ಮಠದಲ್ಲಿ ಬುಧವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 5.30ಕ್ಕೆ ಉಭಯ ಶ್ರೀಗಳ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ಮಧ್ಯಾಹ್ನ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬಳಿಕ, ಶ್ರೀಗಳ ಉತ್ಸವ ಮೂರ್ತಿಯ ಪಲ್ಲಕ್ಕಿಯು ಸಕಲ ವಾದ್ಯಮೇಳದೊಂದಿಗೆ ನಗರದ ವಿವಿಧ ಕಡೆ ಸಂಚರಿಸಿತು. ಸಂಜೆ ಮಠಕ್ಕೆ ಹಿಂದಿರುಗಿದ ಸಂದರ್ಭದಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ, ಸಂಜೆ ಇಲ್ಲಿನ ಕೈಲಾಸ ಮಂಟಪದಲ್ಲಿ ತೊಟ್ಟಿಲೋತ್ಸವ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಮಹಾರಾಷ್ಟ್ರ, ಗೋವಾ ಸೇರಿ ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉಭಯ ಶ್ರೀಗಳ ದರ್ಶನ ಪಡೆದರು.ಇದೇ ವೇಳೆ, ಮಠದಲ್ಲಿ ಪೂರ್ಣಗೊಂಡಿರುವ ಶ್ರೀ ಸಿದ್ಧಾರೂಢ ಅತಿಥಿಗೃಹ, ಮಠದ ಮುಂಭಾಗದಲ್ಲಿ ಗ್ರಾನೈಟ್ ಕಲ್ಲುಗಳ ನೆಲಹಾಸು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.
ಶುಭ ಕೋರಿದ ಪ್ರಧಾನಿ ಮೋದಿ:ಸದ್ಗುರು ಶ್ರೀ ಸಿದ್ಧಾರೂಢರ 188ನೇ ಜಯಂತಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಬುಧವಾರ ಬೆಳಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಶುಭಾಶಯ ಕೋರಿದ್ದಾರೆ. ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು ಎಂದು ತಿಳಿಸಿದ್ದಾರೆ. ಆಧ್ಯಾತ್ಮಿಕ ಪ್ರಬುದ್ಧತೆ, ಸಾಮಾಜಿಕ ಸಾಮರಸ್ಯ ಮತ್ತು ವಂಚಿತರ ಸಬಲೀಕರಣಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರ ಜೀವನ ಮತ್ತು ಕಾರ್ಯಗಳು ಎಲ್ಲ ಜೀವಿಗಳ ಕಲ್ಯಾಣಕ್ಕೆ ಗಾಢವಾದ ಬದ್ಧತೆಗೆ ನಿದರ್ಶನವಾಗಿದೆ. ಶ್ರೀ ಸಿದ್ಧಾರೂಢರು ಯಾವಾಗಲೂ ಏಕತೆ ಮತ್ತು ದಯೆಯ ಮಹತ್ವವನ್ನು ಎತ್ತಿ ತೋರಿಸಿದರು. ಅವರ ಆದರ್ಶಗಳನ್ನು ಈಡೇರಿಸಲು ನಾವು ಸದಾ ಶ್ರಮಿಸುತ್ತೇವೆ ಎಂದು ಪ್ರಧಾನಿ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.
===ಪ್ರಧಾನಿಯವರ ಈ ಶುಭಾಶಯ ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಆಗಿದ್ದು, ಸಿದ್ಧಾರೂಢರ ಭಕ್ತರು ಪ್ರಧಾನಿ ಅವರ ಶುಭಾಶಯ ಪತ್ರವನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.17ಎಚ್ಯುಬಿ40
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಿದ್ಧಾರೂಢರ ಜಯಂತಿಗೆ ಶುಭ ಕೋರಿರುವುದು.