ಕನ್ನಡಪ್ರಭ ವಾರ್ತೆ ಯಾದಗಿರಿ
ಹಳೆಯ ಘೋಷಣೆಗಳಿಗೆ ಹೆಸರು ಬದಲಿಸಿ, ಹೊಸ ಜೀವ ತುಂಬುವ ಯತ್ನ ನಡೆದಂತಿದೆ. ಕೆಲವೊಂದು ಹಳೆಯ ಘೋಷಣೆಗಳಿಗೆ ಅನುದಾನ ಹಾಗೂ ಪೂರ್ಣಗೊಳಿಸುವ ನಿರ್ಧಾರ ನಿಟ್ಟುಸಿರು ಮೂಡಿಸಿದ್ದರೆ, ಜಿಲ್ಲೆಯನ್ನು ಭೀಕರವಾಗಿ ಕಾಡುತ್ತಿರುವ ಗುಳೇ, ಉದ್ಯೋಗ ಸಮಸ್ಯೆ, ಘೋಷಣೆಯಾದ ಹೊಸ ತಾಲೂಕುಗಳ ಅಭಿವೃದ್ಧಿ ವಿಚಾರದಲ್ಲಿ ಬಜೆಟ್ನಲ್ಲಿ ಪ್ರಸ್ತಾಪವಾಗದಿರುವುದು ಬೇಸರಕ್ಕೆ ಕಾರಣವಾಗಿದೆ.
ಸಾಲಮನ್ನಾ ಹಾಗೂ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಬಗ್ಗೆ ರೈತರ ನಿರೀಕ್ಷೆ ಹುಸಿಯಾಗಿದ್ದರೆ, ಕಡೇಚೂರು ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗದ ಆಶಾಭಾವ ಮುದುಡಿದಂತಾಗಿದೆ.ಬೂದಿಹಾಳ್-ಪೀರಾಪುರ ಹಂತ-1ಕ್ಕೆ ನೀಡಿದಷ್ಟೇ ಆದ್ಯತೆಯನ್ನು 800 ಕೋಟಿ ರು.ಗಳ ವೆಚ್ಚದ ಹಂತ -2ಕ್ಕೆ ನೀಡಿದ್ದರೆ, ಸುರಪುರ ಹಾಗೂ ಶಹಾಪುರ ತಾಲೂಕಿನ 39 ಹಳ್ಳಿಗಳಲ್ಲಿ ನೀರಾವರಿ ಸೌಕರ್ಯದಿಂದ ರೈತರ ಮೊಗದಲ್ಲಿ ಹಸಿರು ಮೂಡಿಸಲು ಸಾಧ್ಯವಾಗುತ್ತಿತ್ತು. ಇದಿಲ್ಲಿ ಆಗಿಲ್ಲ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾ/ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು ಎಂದಿದೆ. ಹೊಸ ವಿವಿ ನಿರೀಕ್ಷೆಯಲ್ಲಿದ್ದ ಜನರಿಗೆ ಇದು ಕೊಂಚ ಸಮಾಧಾನ ಮೂಡಿಸಬಹುದು.
2016-17 ರಲ್ಲೇ ಯಾದಗಿರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಜೂರಾಗಿ, 4 ಕೋಟಿ ರು.ಗಳ ಅನುದಾನ ಘೋಷಿಸಲಾಗಿತ್ತು. ಇದರಲ್ಲಿ 1.50 ಕೋಟಿ ರು.ಗಳ ಹಣ ಬಿಡುಗಡೆಯಾಗಿದೆ. ಮೂರು ಬಾರಿ ಸ್ಥಳ ಬದಲಾವಣೆ ಹಿನ್ನೆಲೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಮೊದಲು ರಾಚೋಟಿ ವೀರಣ್ಣ ದೇವಸ್ಥಾನ ಬಳಿ ನಿಗದಿಪಡಿಸಿದ್ದನ್ನು ಬದಲಾಯಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿ ಅನ್ನೋ ಕಾರಣಕ್ಕೆ ನಂತರದಲ್ಲಿ ಮುದ್ನಾಳ್ ಸಮೀಪದ ಮೆಡಿಕಲ್ ಕಾಲೇಜು ಬಳಿ ಗುರುತಿಸಲಾಯಿತಾದರೂ, ಮೆಡಿಕಲ್ ಕಾಲೇಜಿಗೆ ಹೆಚ್ಚಿನ ಜಾಗ ಬೇಕಿದ್ದರಿಂದ ಮತ್ತೇ ಸ್ಥಳಾಂತರ ಅನಿವಾರ್ಯವಾಯಿತು. ಮುಂಡರಗಿ ಬಳಿ ದೂರ ಅನ್ನುವ ಕಾರಣಕ್ಕೆ ಬದಲಾಯಿಸಿ, ಈಗ ಆರ್ಟಿಓ ಕಚೇರಿ ಹತ್ತಿ 4 ಎಕರೆ ಗುರುತಿಸುವ ಕಾರ್ಯ ನಡೆದಿದೆ. ಹೀಗಾಗಿ, ಹಳೆಯ ಯೋಜನೆಗೆ ಹೊಸ ಪಾಲಿಶ್ ನೀಡಿದಂತಿದೆ.
ರಾಜ್ಯವ್ಯಾಪಿ ಯೋಜನೆಗಳಲ್ಲಿ ಇಲ್ಲಿನನವರಿಗೆ ಅದು ಸದುಪಯೋಗವಾಗುತ್ತಾದರೂ, ಬಹುಪಾಲು ನಿರೀಕ್ಷಿತ ಯೋಜನೆಗಳು ಜಿಲ್ಲೆಯಲ್ಲಿ ಬೆರಳಣಿಕೆಷ್ಟು ಸಿಗುತ್ತವೆ ಅನ್ನೋ ಮಾತುಗಳಿವೆ.