ಜೂ.15ರೊಳಗೆ ಸಿಗಂದೂರು ಸೇತುವೆ ಪೂರ್ಣ

KannadaprabhaNewsNetwork |  
Published : May 09, 2025, 12:33 AM IST
ಪೊಟೋ: 08ಎಸ್ಎಂಜಿಕೆಪಿ03ಸಾಗರ ತಾಲೂಕು ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಬ್ಯಾಕೋಡು: 423 ಕೋಟಿ ರು. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣವಾಗುತ್ತಿದೆ. ನಾಲ್ಕೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಆಗಸ್ಟ್ ತಿಂಗಳವರೆಗೆ ಕಾಲವಕಾಶವಿದೆ. ಆದರೆ, ಅದಕ್ಕೂ ಮುಂಚೆಯೇ ಸೇತುವೆ ಉದ್ಘಾಟನೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬ್ಯಾಕೋಡು: 423 ಕೋಟಿ ರು. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣವಾಗುತ್ತಿದೆ. ನಾಲ್ಕೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಆಗಸ್ಟ್ ತಿಂಗಳವರೆಗೆ ಕಾಲವಕಾಶವಿದೆ. ಆದರೆ, ಅದಕ್ಕೂ ಮುಂಚೆಯೇ ಸೇತುವೆ ಉದ್ಘಾಟನೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಬುಧವಾರ ಹಿನ್ನೀರು ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸಿಗಂದೂರು ಸೇತುವೆಯನ್ನು ಲೋಕಾರ್ಪಣೆ ಮಾಡಬೇಕು. ಈ ಸಂಬಂಧ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದೆ. ಈ ಹಿನ್ನೆಲೆ ಕೇಂದ್ರದಿಂದ ರೀಜನಲ್ ಆಫೀಸರ್ ಶರ್ಮಾ ಎಂಬುವವರ ನೇತೃತ್ವದ ತಂಡ ಪರಿಶೀಲಿಸಿದರು. ಜೂ.15ರೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ ಎಂದು ತಿಳಿಸಿದರು.

ಕಳಸವಳ್ಳಿ - ಅಂಬಾರಗೋಡ್ಲು ಮಧ್ಯೆ ಸೇತುವೆ ಆಗಬೇಕು ಎಂಬುದು ಬಹು ವರ್ಷದ ಕನಸಾಗಿತ್ತು. ಸಂಜೆ ನಂತರ ಇಲ್ಲಿಂದ ಹೊರ ಪ್ರಪಂಚಕ್ಕೆ ಸಂಪರ್ಕ ಇರಲಿಲ್ಲ. ಅನೇಕ ವರ್ಷ ಹೋರಾಟ ನಡೆಸಿದ್ದರು. ಹಾಗಾಗಿ ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಯಿತು. ಸಾಗರ -ಮರಕುಟಿಕ ರಸ್ತೆಗೆ ಎನ್.ಎಚ್ 369 ಇ ಎಂದು ಘೋಷಿಸಲಾಯಿತು. ಯಡಿಯೂರಪ್ಪ ಅವರು ಪ್ರಯತ್ನಪಟ್ಟು ಕೇಂದ್ರದಿಂದ 550 ಕೋಟಿ ರು. ಹಣ ತರಿಸಿಕೊಟ್ಟಿದ್ದರು ಎಂದು ಹೇಳಿದರು.ಸಿಗಂದೂರು ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ 900 ಕೋಟಿ ರು. ನಿಗದಿಪಡಿಸಲಾಗಿದೆ. ಇನ್ನು 15 ದಿನದೊಳಗೆ ಸಂಪರ್ಕ ರಸ್ತೆ ಸಂಬಂಧ ಯೋಜನೆ ಸಿದ್ಧವಾಗಲಿದೆ. ನಾವೆಲ್ಲ ಸಿಗಂದೂರು ಸೇತುವೆ ಮೇಲೆ ವಾಹನಗಳಲ್ಲಿಯೇ ತೆರಳಿದೆವು. ಗುರುವಾರ ರಾಯರ ವಾರ. ಇದೇ ದಿನ ಅಧಿಕಾರಿಗಳು ಇಂತಹ ಅವಕಾಶ ಮಾಡಿಕೊಟ್ಟರು. ಸಿಗಂದೂರು ದೇವಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ ಎಂದರು.

ಕೇಂದ್ರ ಸರ್ಕಾರ ಈ ಭಾಗದಲ್ಲಿ ಹಲವು ಸೇತುವೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಸುತ್ತಾ ಸೇತುವೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 766 ಸಿ ಆಗಿ ಮೇಲ್ದರ್ಜೆಗೇರಿಸಿ ಒಂದು ಕಿ.ಮೀ ಹೊಸನಗರ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಮುಕ್ಕಾಲು ಕಿ.ಮೀ.ನ ಬೆಕ್ಕೋಡಿ ಸೇತುವೆ, ಹಾಲಪ್ಪ ಅವರ ಅವಧಿಯಲ್ಲಿ ಪಟಗುಪ್ಪ ಸೇತುವೆ, ಕಾಗೋಡು ತಿಮ್ಮಪ್ಪ ಅವರ ಶ್ರಮದಿಂದ ಹಸಿರುಮಕ್ಕಿ ಸೇತುವೆ ಸೇರಿದಂತೆ ನಾನಾ ಕಾಮಗಾರಿ ನಡೆಸಲಾಗಿದೆ. ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಅನುಕೂಲ ಮಾಡಲಾಗಿದೆ. ಇದರಿಂದ ಅನೇಕ ಯಾತ್ರ ಸ್ಥಳಕ್ಕೆ ತೆರಳಲು ಅವಕಾಶವಾಗಲಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ