ಮರ್ಯಾದಾ ಹತ್ಯೆ ಖಂಡಿಸಿ ಮೌನ ಮೆರವಣಿಗೆ

KannadaprabhaNewsNetwork |  
Published : Jan 06, 2026, 02:30 AM IST
ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಸೋಮವಾರ ಮಾನ್ಯಾ ಮರ್ಯಾದೆಗೇಡು ಹತ್ಯೆ ವಿರೋಧಿ ಹೋರಾಟ ಸಮಿತಿಯಿಂದ ಕಪ್ಪುಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಲಾಯಿತು. | Kannada Prabha

ಸಾರಾಂಶ

ಮರ್ಯಾದಾಗೇಡು ಹತ್ಯೆ ಘಟನೆಯಿಂದ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮನುಷ್ಯತ್ವ ಇಲ್ಲದಿರುವವರಿಂದ ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ. ಜಾತಿಯ ಮೌಢ್ಯತೆ ತುಂಬಿಕೊಂಡು ಗರ್ಭಿಣಿಯಾಗಿದ್ದ ತನ್ನ ಮಗಳನ್ನೇ ಹತ್ಯೆ ಮಾಡಿದವನು ತಂದೆಯ ಸ್ಥಾನಕ್ಕೆ ಯೋಗ್ಯವಾದವನಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು.

ಹುಬ್ಬಳ್ಳಿ:

ಇನಾಂ ವೀರಾಪುರ ಗ್ರಾಮದಲ್ಲಿ ಈಚೆಗೆ ನಡೆದ ಮರ್ಯಾದಾ ಹತ್ಯೆ ಖಂಡಿಸಿ ಸೋಮವಾರ ಮಾನ್ಯಾ ಮರ್ಯಾದೆಗೇಡು ಹತ್ಯೆ ವಿರೋಧಿ ಹೋರಾಟ ಸಮಿತಿಯಿಂದ ಕಪ್ಪುಪಟ್ಟಿ ಧರಿಸಿ ನಗರದಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಲಾಯಿತು.

ನಗರದ ಶ್ರೀಸಿದ್ಧಾರೂಢಸ್ವಾಮಿ ಮಠದಿಂದ ಆರಂಭವಾದ ಮೌನ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಇಲ್ಲಿನ ಸ್ಟೇಷನ್‌ ರಸ್ತೆಯಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ ಸಮಾರೋಪಗೊಂಡಿತು. ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಕೊಪ್ಪಳ, ಚಿಕ್ಕಮಗಳೂರು ಸೇರಿದಂತೆ 10ಕ್ಕೂ ಅಧಿಕ ಜಿಲ್ಲೆಗಳಿಂದ ಜನರು ಪಾಲ್ಗೊಂಡಿದ್ದರು. ಈ ವೇಳೆ ಮರ್ಯಾದಾ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಸೂಕ್ತ ರಕ್ಷಣೆ ಸೇರಿದಂತೆ ಪರಿಹಾರಕ್ಕೆ ಒತ್ತಾಯಿಸಲಾಯಿತು.

ಬಳಿಕ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಯ ಆವರಣದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ಆದಿಜಾಂಬವ ಮಠದ ಷಡಕ್ಷರಿ ಮುನಿಗಳು ಮಾತನಾಡಿ, ಈ ಘಟನೆಯಿಂದ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮನುಷ್ಯತ್ವ ಇಲ್ಲದಿರುವವರಿಂದ ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ. ಜಾತಿಯ ಮೌಢ್ಯತೆ ತುಂಬಿಕೊಂಡು ಗರ್ಭಿಣಿಯಾಗಿದ್ದ ತನ್ನ ಮಗಳನ್ನೇ ಹತ್ಯೆ ಮಾಡಿದವನು ತಂದೆಯ ಸ್ಥಾನಕ್ಕೆ ಯೋಗ್ಯವಾದವನಲ್ಲ ಎಂದರು.

ಇಂದಿಗೂ ಜನರಲ್ಲಿ ಮೌಢ್ಯ ಸಂಪ್ರದಾಯಗಳನ್ನು ಆಚರಿಸುವುವರಿಂದ ಇಂತಹ ಕೃತ್ಯಗಳು ಮರುಕಳಿಸುತ್ತಿವೆ. ರಾಕ್ಷಸಿ, ಪೈಶಾಚಿಕ ಮನಸ್ಥಿತಿ ಉಳ್ಳವರು ಮಾತ್ರ ಇಂತಹ ಘೋರ ಕೃತ್ಯಕ್ಕೆ ಕೈಹಾಕುವರು. ಇದನ್ನೆಲ್ಲ ನಿರ್ಮೂಲನೆ ಮಾಡಬೇಕಾದರೆ ಶಿಕ್ಷಣ, ಹೋರಾಟ, ಸಂಘಟನೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.

ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಾನಂದ ಶ್ರೀ ಮಾತನಾಡಿ, ಜಾತಿ ವ್ಯವಸ್ಥೆ ಎಂಬುದು ಈ ದೇಶಕ್ಕೆ ಅಂಟಿಕೊಂಡ ಮಹಾ ಶಾಪ. ಅಜ್ಞಾನ, ಮೌಢ್ಯತೆ, ಸ್ವಪ್ರತಿಷ್ಠೆಯಿಂದ ಮಾಡಿದ ಮರ್ಯಾದಾ ಹತ್ಯೆಯನ್ನು ನಾಗರಿಕ ಸಮಾಜ ಖಂಡಿಸುತ್ತದೆ. ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ, ಹೋರಾಟ ಮನೋಭಾವ ಬೆಳೆಸಿದಾಗ ಮಾತ್ರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಈ ಕೃತ್ಯವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿದರು.

ಕೊಪ್ಪಳದ ಮರುಳಸಿದ್ದೇಶ್ವರ ಶ್ರೀಗಳು, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ಬಳಿಕ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮುಖಂಡರಾದ ವಿಜಯ ಗುಂಟ್ರಾಳ, ಬಸಪ್ಪ ಮಾದರ, ಪರಶುರಾಮ ಪೂಜಾರ, ಮೋಹನ ಹಿರೇಮನಿ, ಸುರೇಶ ಕನಮಕ್ಕಲ, ಗಂಗಾಧರ ಪೆರೂರ, ಭೀಮು ಹಲಗಿ, ಗುರುನಾಥ ಉಪ್ಪಲದಡ್ಡಿ, ಪರಶುರಾಮ ಅರಕೇರಿ, ವೆಂಕಟೇಶ ನಿರಗಟ್ಟಿ, ಮರಿಯಪ್ಪ ರಾಮಯ್ಯನವರ, ಗುರುಶಾಂತ ಚಂದಾಪುರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ