ಕನಕಗಿರಿಯಲ್ಲಿ ಸರಳ ದೀಪಾವಳಿ

KannadaprabhaNewsNetwork | Published : Nov 14, 2023 1:15 AM

ಸಾರಾಂಶ

ಕನಕಗಿರಿ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಕಿರಾಣಿ, ದಲಾಲಿ, ಬಟ್ಟೆ ಅಂಗಡಿಗಳಲ್ಲಿ ಗಣಪತಿ, ಸರಸ್ವತಿ ಹಾಗೂ ಲಕ್ಷ್ಮೀ ಫೋಟೊಗೆ ಚಿನ್ನ, ಬೆಳ್ಳಿ ಸರಗಳನ್ನು ತೊಡಿಸಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಕನಕಗಿರಿ

ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಕಿರಾಣಿ, ದಲಾಲಿ, ಬಟ್ಟೆ ಅಂಗಡಿಗಳಲ್ಲಿ ಗಣಪತಿ, ಸರಸ್ವತಿ ಹಾಗೂ ಲಕ್ಷ್ಮೀ ಫೋಟೊಗೆ ಚಿನ್ನ, ಬೆಳ್ಳಿ ಸರಗಳನ್ನು ತೊಡಿಸಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.ಇನ್ನು ಯಂತ್ರೋಪಕರಣಗಳಿರುವ ಅಂಗಡಿಗಳಲ್ಲಿ ಮಾವಿನ-ತೋರಣ, ಚೆಂಡು, ಅಡಿಕೆ ಹಾಗೂ ರೇಷ್ಮೆ ಹೂಗಳಿಂದ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸರ್ಕಾರ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಕೆಲವೆಡೆ ಮಾತ್ರ ಪಟಾಕಿ ಸದ್ದು ಕೇಳಿ ಬಂತು.

ಪೂಜೆ ಸಂದರ್ಭದಲ್ಲಿ ಮಾತ್ರ ಪಟಾಕಿ ಸಿಡಿಸುವುದು ಕಂಡು ಬಂದಿತು.

ಇನ್ನು ಸರ್ಕಾರಿ ಕಚೇರಿಗಳಲ್ಲೂ ದೀಪಾವಳಿ ಆಚರಿಸಲಾಯಿತು.ಶನಿವಾರ ನರಕ ಚತುರ್ದಶಿ, ಭಾನುವಾರ, ಸೋಮವಾರ ಎರಡೂ ದಿನ ಅಮವಾಸ್ಯೆ ಆಚರಿಸಲಾಗಿದೆ. ಮಂಗಳವಾರ ಲಕ್ಷ್ಮೀ ವಾರ ಆಗಿದ್ದರಿಂದ ಬುಧವಾರ ಉತ್ತರ ಪೂಜೆಯೊಂದಿಗೆ ಲಕ್ಷ್ಮೀ ವಿಸರ್ಜನೆ ನಡೆಯಲಿದೆ.

ಪಟಾಕಿ ಮಾರಾಟಕ್ಕೆ ತಡೆ: ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿಯೇ ಮೆರಗು. ಆದರೆ ರಾಜ್ಯ ಸರ್ಕಾರ ಪರಿಸರ ಸ್ನೇಹಿಯಾಗಿ ಹಬ್ಬ ಆಚರಣೆಗೆ ನಿರ್ಧರಿಸಿದ್ದರಿಂದ ಪಟಾಕಿ ಆರ್ಭಟ ಇಲ್ಲವಾಗಿದೆ. ಪಟಾಕಿಯ ಬದಲಾಗಿ ಮನೆ, ಅಂಗಡಿಗಳ ಮುಂದೆ ದೀಪ ಬೆಳಗಿಸಲಾಯಿತು. ಇನ್ನು ಸ್ಥಳೀಯವಾಗಿ ತಳ್ಳುವ ಬಂಡಿಯಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಕ್ಕೆ ಪಟಾಕಿ ಮಾರಾಟ ನಿಷೇಧಗೊಂಡಿತ್ತು.

Share this article