ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸಂಭವಿಸಿರುವ ಭಾರೀ ಬದಲಾವಣೆ ಮಾಡಿದ್ದಾರೆ. ಆದರೆ ಮತಪಟ್ಟಿಯಿಂದ ಹೊರಗುಳಿದವರ ಬೆಂಬಲಕ್ಕೆ ಜಿಲ್ಲೆಯ ಎಸ್ಐಆರ್ ಹೋರಾಟ ಸಮಿತಿ ಹಾಗೂ ಮತ ಕಾವಲು ಸಮಿತಿ ನಿಲ್ಲುತ್ತದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯವಾದರೂ, ಆ ಪ್ರಕ್ರಿಯೆಯಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕು ಕಳೆದುಹೋಗಬಾರದು ಎಂದರು. ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಯ ಮೊದಲ ಹಂತದಲ್ಲಿ ಒಟ್ಟು 19,82,114 ಮತದಾರರಿಗೆ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಲಾಗಿತ್ತು. ಈ ಪೈಕಿ 16,84,968 ಫಾರಂಗಳು ಡಿಜಿಟಲೀಕರಣಗೊಂಡಿದ್ದು, ಒಟ್ಟು 2,97,147 ಮತದಾರರು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ. ಇವರಲ್ಲಿ 1,52,169 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡವರು, 59,093 ಗೈರು ಮತ್ತು 30,692 ಮತದಾರರು ಡುಪ್ಲಿಕೇಟ್ ಎಂದು ಗುರುತಿಸಲಾಗಿದೆ. ಇದು ಕೇವಲ ಅಂಕಿಅಂಶವಲ್ಲ. ಇದರ ಹಿಂದೆ ವಿಜಯಪುರ ಜಿಲ್ಲೆಯ ಸಾವಿರಾರು ಕುಟುಂಬಗಳ ಮತದಾನದ ಹಕ್ಕು ಅಡಗಿದೆ ಎಂದು ತಿಳಿಸಿದರು.
ಉದ್ಯೋಗ, ಶಿಕ್ಷಣ, ವ್ಯಾಪಾರ, ಕುಟುಂಬದ ಕಾರಣಗಳು ಅಥವಾ ಉತ್ತಮ ಜೀವನೋಪಾಯಕ್ಕಾಗಿ ವಿಜಯಪುರ ಜಿಲ್ಲೆಯ ಸಾವಿರಾರು ಜನರು ಗೋವಾ, ಮಹಾರಾಷ್ಟ್ರ, ಕೇರಳ, ಬೆಂಗಳೂರು ಸೇರಿ ವಿವಿಧ ರಾಜ್ಯಗಳು ಮತ್ತು ನಗರಗಳಿಗೆ ತೆರಳುವುದು ಸಾಮಾನ್ಯವಾಗಿದ್ದು, ಇದು ಅಪರಾಧವಲ್ಲ. ಒಬ್ಬ ವ್ಯಕ್ತಿ ತನ್ನ ಊರನ್ನು ಬಿಟ್ಟು ಬೇರೆಡೆ ಉದ್ಯೋಗಕ್ಕೆ ತೆರಳಿದ್ದಾನೆ ಎಂಬ ಕಾರಣಕ್ಕೆ ಅವರ ಮತದಾನದ ಹಕ್ಕು ಕಳೆದುಹೋಗಬಾರದು. ಅವರು ಹೊಸ ಸ್ಥಳದಲ್ಲಿ ತಮ್ಮ ಮತ ವರ್ಗಾಯಿಸಿಕೊಳ್ಳಲು ಅವಕಾಶ ಪಡೆಯಬೇಕು. ಹಳೆಯ ಸ್ಥಳದಿಂದ ಹೆಸರು ತೆಗೆದುಹಾಕಿ, ಹೊಸ ಸ್ಥಳದಲ್ಲಿ ಹೆಸರು ಸೇರ್ಪಡೆಯಾಗದ ಪರಿಸ್ಥಿತಿ ನಿರ್ಮಾಣವಾದರೆ, ಆ ನಾಗರಿಕನು ಎರಡೂ ಕಡೆ ಮತದಾರರ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮತ ಕಾವಲು ಸಮಿತಿಯ ಸದಸ್ಯರಾದ ಅಕ್ರಮ ಮಾಶಾಳಕರ, ಫಯಾಜ್ ಕಲಾದಗಿ, ನೀಲಂಬಿಕಾ ಬಿರಾದಾರ, ಶ್ರೀನಾಥ ಪೂಜಾರಿ ಉಪಸ್ಥಿತರಿದ್ದರು.