ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ಕರ್ಗಲ್ಲು ಯಕ್ಷ ಮಾರ್ಗದ ಪ್ರಾಥಮಿಕ ಹಂತ (ತೆಂಕುತಿಟ್ಟು ಯಕ್ಷಗಾನದ ಪ್ರಾಥಮಿಕ ಹಂತದ ನಾಟ್ಯ ಪ್ರಸ್ತುತಿ) ವನ್ನು ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ದಾಖಲೀಕರಿಸಿದೆ. ಆ. 25 ರಂದು ಮಂಗಳವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಯಕ್ಷ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ದಾಖಲೀಕರಣದ ಕಿರು ಭಾಗವನ್ನು ಬಿಡುಗಡೆಗೊಳಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಆರಂಭವಾದ ದಿನದಿಂದಲೇ ಕಲೆ -ಸಂಸ್ಕೃತಿ- ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಪ್ರಯತ್ನಶೀಲವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಪ್ರತಿಷ್ಠಾನದ ಚಟುವಟಿಕೆಗಳನ್ನು ಗಮನಿಸಿದರೆ. ಹೆಚ್ಚಿನ ಕಾರ್ಯಕ್ರಮಗಳು ಅಧ್ಯಯನದೊಂದಿಗೆ ರಂಗ ಪ್ರದರ್ಶನಕ್ಕೂ ಯೋಗ್ಯವಾಗಿವೆ. ಈ ನಿಟ್ಟಿನಲ್ಲಿ ಇದರ ಮುಂದಿನ ಪ್ರಯತ್ನವಾಗಿ ಹಿಂದಿನ, ಇಂದಿನ ಯಕ್ಷಗಾನದ ನಾಟ್ಯ ಪ್ರಸ್ತುತಿಯನ್ನು ಗಮನಿಸಿ, ಅಂದಾಜು ನಾಲ್ಕು ದಶಕಗಳಿಗೂ ಹೆಚ್ಚು ವರುಷ ನಿರಂತರವಾಗಿ ಯಕ್ಷಗಾನ ಅಧ್ಯಯನ, ಅಧ್ಯಾಪನದೊಂದಿಗೆ ವಿಶೇಷವಾದ ಅನುಭವವನ್ನು ಹೊಂದಿರುವ ತೆಂಕುತಿಟ್ಟಿನ ಏಕೈಕ ಕಲಾವಿದರಾಗಿರುವಂತಹ ಕರ್ಗಲ್ಲು ವಿಶ್ವೇಶ್ವರ ಭಟ್ ರ ಅಮೂಲ್ಯ ನಾಟ್ಯ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ಮುಂದಿನ ಪೀಳಿಗೆಗೆ ಹಸ್ತಾಂತರಿಸು ಕಾಯಕದಂತೆ ಸಿರಿಬಾಗಿಲು ಪ್ರತಿಷ್ಠಾನವು ದಾಖಲಿಕರಣಗೊಳಿಸಿ ಪ್ರಸ್ತುತಪಡಿಸುತಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನವು ವಿಶ್ವರಂಗದಲ್ಲಿ ಶಾಶ್ವತವಾಗಿ ಮೆರೆಯುವಂತಾಗಲು ಇದು ಪೂರ್ಣಪ್ರಮಾಣದಲ್ಲಿ ಸಹಕಾರಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸಂಪರ್ಕಿಸಬಹುದು.
ಕಲಾವಿದ ಶಂಭಯ್ಯ ಕಂಜರ್ಪಣೆ, ಕಲಾವಿದ ಉಪನ್ಯಾಸಕ ಡಾ. ಶ್ರುತಕೀರ್ತಿರಾಜ ಉಜಿರೆ, ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ, ಸುಮಿತ್ರ ಆರ್ ಮಯ್ಯ , ಶ್ರೀಮುಖ ಎಸ್ ಆರ್ ಮಯ್ಯ , ರಾಜ ಎಸ್ ಆರ್ ಮಯ್ಯ ಉಪಸ್ಥಿತರಿದ್ದರು.