ರೇವಣ್ಣ ಮನೆಯಲ್ಲಿ ಮುಂದುವರೆದ ಎಸ್‌ಐಟಿ ತನಿಖೆ

KannadaprabhaNewsNetwork | Updated : May 05 2024, 08:40 AM IST

ಸಾರಾಂಶ

ಹರದನಹಳ್ಳಿ ದೇವೇಶ್ವರ ದೇವಾಲಯದ ಅರ್ಚಕರು ಭವಾನಿ ರೇವಣ್ಣ ಅವರಿಗೆ ಪ್ರಸಾದ ನೀಡಲು ಆಗಮಿಸಿದ್ದರು, ಆಗ ಅರ್ಚಕರನ್ನು ತಡೆದ ಪೊಲೀಸರು, ಬ್ಯಾಗ್ ಪರಿಶೀಲನೆ ನಡೆಸಿದ ನಂತರ ಬಿಟ್ಟರು.

  ಹೊಳೆನರಸೀಪುರ :  ಪಟ್ಟಣದಲ್ಲಿ ಶಾಸಕ ಎಚ್.ಡಿ.ರೇವಣ್ಣನವರ ಮನೆಗೆ ಎಸ್‌ಐಟಿ ಅಧಿಕಾರಿಗಳು ಇಬ್ಬರು ಸಂತ್ರಸ್ತ ಮಹಿಳೆಯರನ್ನು ಕರೆತಂದು ಭವಾನಿ ರೇವಣ್ಣನವರ ಉಪಸ್ಥಿತಿಯಲ್ಲಿ ಸ್ಥಳ ಮಹಜರು ನಡೆಸಿದರು.

ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ಏಪ್ರಿಲ್ ೨೮ ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶನಿವಾರ ಮಧ್ಯಾಹ್ನ ಪ್ರಕರಣದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯ ದೂರಿನಲ್ಲಿ ತಿಳಿಸಿರುವ ಹೇಳಿಕೆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಜತೆಗೆ ಸ್ಥಳ ಮಹಜರು ನಡೆಸುವ ಸಲುವಾಗಿ ಪಟ್ಟಣದಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ಅವರ ಮನೆ ಆಗಮಿಸಿ, ಮನೆಯ ಪ್ರವೇಶ ದ್ವಾರದಲ್ಲಿ ಸಂತ್ರಸ್ತ ಮಹಿಳೆಯರಿಂದ ಹೇಳಿಕೆ ಪಡೆದ ನಂತರ ಮನೆಯ ಒಳಗೆ ಪರಿಶೀಲನೆ ನಡೆಸಿದರು, ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ಎಸ್‌ಐಟಿ ಅಧಿಕಾರಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದರು. ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಸ್ಥಳಗಳಲ್ಲಿ ಮಹಜರು ನಡೆಸಿದರು ಎಂದು ತಿಳಿದು ಬಂದಿದೆ.

ಡಿವೈಎಸ್‌ಪಿ ಸತ್ಯ ನಾರಾಯಣ್ ಸಿಂಗ್, ಸುಮಾರಾಣಿ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ಇಬ್ಬರು ಮಹಿಳಾ ಪೊಲೀಸರು ಇದ್ದರು ಹಾಗೂ ಮೂರು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು. ಪಟ್ಟಣದ ಪೊಲೀಸರು ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳಲು ಸಿಪಿಯು, ಮಾನಿಟರ್, ಪ್ರಿಂಟರ್ ಕೊಂಡೊಯ್ದು, ಅಗತ್ಯ ವ್ಯವಸ್ಥೆ ಮಾಡಿದ್ದರು.

ಹರದನಹಳ್ಳಿ ದೇವೇಶ್ವರ ದೇವಾಲಯದ ಅರ್ಚಕರು ಭವಾನಿ ರೇವಣ್ಣ ಅವರಿಗೆ ಪ್ರಸಾದ ನೀಡಲು ಆಗಮಿಸಿದ್ದರು, ಆಗ ಅರ್ಚಕರನ್ನು ತಡೆದ ಪೊಲೀಸರು, ಬ್ಯಾಗ್ ಪರಿಶೀಲನೆ ನಡೆಸಿದ ನಂತರ ಬಿಟ್ಟರು.

ಡಿವೈಎಸ್ಪಿ ಅಶೋಕ್, ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ನಗರ ಪೊಲೀಸ್ ಠಾಣೆ ಪಿಎಸ್ಸೈ ಅಜಯ್ ಕುಮಾರ್ ಹಾಗೂ ಹಳ್ಳಿಮೈಸೂರು ಪಿಎಸ್ಸೈ ಸಲ್ಮಾನ್‌ಖಾನ್ ತಂಬುಳಿ, ಪೊಲೀಸರು ಇದ್ದರು ಹಾಗೂ ಮೀಸಲು ಪೊಲೀಸ್ ತುಕುಡಿಯವರು ಬ್ಯಾರಿಗೇಡ್ ಹಾಕಿ ಬಂದೋಬಸ್ತ್ ಮಾಡಿದ್ದರು.

Share this article