ಹೊಳೆನರಸೀಪುರದ ಎಚ್‌.ಡಿ.ರೇವಣ್ಣ ಮನೆಗೆ ಪ್ರಜ್ವಲ್‌ ಕರೆತಂದು ಎಸ್‌ಐಟಿ ಮಹಜರು

KannadaprabhaNewsNetwork | Published : Jun 27, 2024 1:08 AM

ಸಾರಾಂಶ

ಹೊಳೆನರಸೀಪುರ ಪಟ್ಟಣದಲ್ಲಿ ಇರುವ ಶಾಸಕ ಎಚ್.ಡಿ.ರೇವಣ್ಣನವರ ಮನೆಗೆ ಬುಧವಾರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳ ತಂಡ ಸ್ಥಳ ಮಹಜರು ಸಲುವಾಗಿ ಕರೆತಂದರು.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೊ.ನ.ಪುರದ ಎಚ್ಡಿ ರೇವಣ್ಣ ನಿವಾಸಕ್ಕೆ ಮಾಜಿ ಸಂಸದ । ಸ್ಥಳ ಪರಿಶೀಲನೆ ನಡೆಸಿದ ತನಿಖಾ ತಂಡ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದಲ್ಲಿ ಇರುವ ಶಾಸಕ ಎಚ್.ಡಿ.ರೇವಣ್ಣನವರ ಮನೆಗೆ ಬುಧವಾರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳ ತಂಡ ಸ್ಥಳ ಮಹಜರು ಸಲುವಾಗಿ ಕರೆತಂದರು.

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ಲೋಕಸಭಾ ಚುನಾವಣೆಯ ನಂತರ ಕಾಣೆಯಾಗಿದ್ದರು. ಮೇ ೩೦ ರಂದು ಎಸ್‌ಐಟಿ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಂಸದ ಪ್ರಜ್ವಲ್ ಅವರನ್ನು ಬಂಧಿಸಿದ್ದರು. ಬಳಿಕ ತನಿಖೆ ಪ್ರಾರಂಭಿಸಿದ ಎಸ್‌ಐಟಿ ಅಧಿಕಾರಿಗಳು ಎರಡು ಪ್ರಕರಣಗಳಲ್ಲಿ ಈಗಾಗಲೇ ಸ್ಥಳ ಮಹಜರು ನಡೆಸಿದ್ದರು. ಈಗ ಮೂರನೇ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದ ಮಾಜಿ ಸಂಸದ ಪ್ರಜ್ವಲ್‌ರನ್ನು ಪುನಃ ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ಪಟ್ಟಣದಲ್ಲಿ ಇರುವ ಶಾಸಕರ ಮನೆಗೆ ಸ್ಥಳ ಮಹಜರು ಸಲುವಾಗಿ ಮಾಜಿ ಸಂಸದ ಪ್ರಜ್ವಲ್‌ರನ್ನು ಕರೆತಂದು, ಪರಿಶೀಲನೆ ನಡೆಸಿ ತೆರಳಿದರು.

ಸಂತ್ರಸ್ತ ಮಹಿಳೆಯೊಬ್ಬರು ಏ.೨೮ ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೇ ೪ ರಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಸ್ಥಳಗಳಲ್ಲಿ ಮಹಜರು ನಡೆಸಿದ್ದರು ಎಂದು ತಿಳಿದು ಬಂದಿದೆ. ಮೇ ೧೩ ಹಾಗೂ ಮೇ ೨೮ ರಂದು ಸಹ ಎಸ್‌ಐಟಿ ಅಧಿಕಾರಿಗಳ ತಂಡ ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಶಾಸಕರ ಮನೆ ಸಮೀಪ ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ಇಟ್ಟು, ಪೊಲೀಸ್ ಸಿಬ್ಬಂದಿ ಹಾಗೂ ಮೀಸಲು ತುಕುಡಿ ಸಿಬ್ಬಂದಿಯ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಎಎಸ್ಪಿ ತಮ್ಮಯ್ಯ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

Share this article