ಶಿವಗಂಗಾ ವಿವಾಹ ಮಹೋತ್ಸವ ಸಂಪನ್ನ

KannadaprabhaNewsNetwork | Published : Nov 13, 2023 1:15 AM

ಸಾರಾಂಶ

ಗೋಕರ್ಣ -ಗಂಗಾವಳಿ ನಡುವಣ ಸಮುದ್ರ ತೀರದಲ್ಲಿ ಸೂರ್ಯ ಪಶ್ಚಿಮಮುಖವಾಗಿ ತೆರಳುವ ಗೋಧೂಳಿ ಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ಮಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು.

ಗೋಕರ್ಣ:

ಇಲ್ಲಿನ ಮುಖ್ಯ ಕಡಲತೀರದಿಂದ 5 ಕಿಲೋ ಮೀಟರ್‌ ಗಂಗಾವಳಿ ಕಡಲತೀರದವರೆಗೆ ಸಂಭ್ರಮವೋ ಸಂಭ್ರಮ. ತಳಿರು ತೋರಣ ವಿಶೇಷ ಮಂಟಪದ ಜತೆಗೆ ಹಾಲಕ್ಕಿ ಒಕ್ಕಲಿಗ ಸಮುದಾಯದ ಜಾನಪದ ಹಾಡು ಗುಮಟೆ ಪಾಂಗ್ ನೊಂದಿಗೆ ಮಹಾಬಲೇಶ್ವರ ದೇವಾಲಯದ ಶಿವಗಂಗಾ ವಿವಾಹ ಮಹೋತ್ಸವ ಭಾನುವಾರ ಸಂಜೆ ವೈಭವದಿಂದ ನಡೆಯಿತು.ಗಂಗಾಷ್ಟಮಿಯ ಮುಂಜಾವಿನಲ್ಲಿ ವಿವಾಹ ನಿಶ್ಚಯವಾದಂತೆ ಇಲ್ಲಿನ ಗೋಕರ್ಣ -ಗಂಗಾವಳಿ ನಡುವಣ ಸಮುದ್ರ ತೀರದಲ್ಲಿ ಸೂರ್ಯ ಪಶ್ಚಿಮಮುಖವಾಗಿ ತೆರಳುವ ಗೋಧೂಳಿ ಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ಮಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು.ಕಡಲಿನ ಅಬ್ಬರ, ವೇದಘೋಷ ವಿಶಿಷ್ಟ ತೋರಣ, ಜಾನಪದ ಹಾಡು ಉತ್ಸವದ ಮೆರಗನ್ನು ನೀಡಿದವು. ವಿವಾಹದ ನಂತರ ಉತ್ಸವವು ಭಕ್ತರು ಆರತಿ ನೀಡಿ ದೇವ ದಂಪತಿಗಳನ್ನು ಬರಮಾಡಿಕೊಂಡರು. ಇಲ್ಲಿನ ಅಮೃತಾನ್ನ ಭೋಜನ ಶಾಲೆಗೆ ಚಿತ್ತೈಸಿದ ಉತ್ಸವ ಸುಂದರವಾಗಿ ಶೃಂಗಾರಗೊಂಡ ಮಂಟಪದಲ್ಲಿ ರಾಜೋಪಚಾರ ಪೂಜೆ ಸ್ವೀಕರಿಸಿ ದೇವಾಲಯಕ್ಕೆ ಆಗಮಿಸಿತು. ಅಮೃತಾನ್ನ ವಿಭಾಗದಲ್ಲಿ ಪ್ರಸಾದ ವಿತರಣೆ ನಡೆಯಿತು. ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ರೂಢಿಗತ ಪರಂಪರೆಯಂತೆ ನಡೆದ ದೈವಿಕ ಕಾರ್ಯದಲ್ಲಿ ಊರಿನ ಎಲ್ಲ ಸಮಾಜದ ಭಕ್ತಸಮೂಹದವರು ಉಪಸ್ಥಿತರಿದ್ದರು.

ಮಾವಿನ ತೋರಣ ಪಡೆಯಲು ಪೈಪೋಟಿ:ವಿವಾಹ ನಡೆಯುವ ಕಡಲ ತೀರದ ಸ್ಥಳದಲ್ಲಿ ಹಾಕಿದ ಮಾವಿನ ತೋರಣದ ಎಲೆ ಯನ್ನು ಪಡೆದುಕೊಂಡು ಇಡುವುದರಿಂದ ಇಷ್ಟಾರ್ಥ ಸಿದ್ದಿ, ಸಂಪತ್ತು ವೃದ್ದಿಯಾಗಿತ್ತದೆ ಎಂಬ ನಂಬಿಕೆ ಇದ್ದು, ಇದನ್ನು ತೆಗೆಯಲು ಪೈಪೋಟಿ ಪ್ರತಿ ವರ್ಷ ನಡೆಯುತ್ತದೆ. ಆದರೆ ಈ ವರ್ಷ ದೇವರ ವಿವಾಹವಾಗಿ ಉತ್ಸವ ತೆರಳುವುದರೊಂದಿಗೆ ತೋರಣದ ಪಡೆಯಲು ನೂಕುನೂಗ್ಗಲು ಉಂಟಾಗಿತ್ತು. ಈ ಹಿಂದೆ ಈ ಉತ್ಸವದ ವೇಳೆ ಜಿಲ್ಲಾ ಮೀಸಲು ಪೊಲೀಸ್ ಪಡೆ ನೀಯೋಜಿಸಲಾಗುತ್ತಿತ್ತು, ಅಲ್ಲದೇ ಹಗ್ಗ ಕಟ್ಟಿ ಸುತ್ತಲು ಜನರು ಬರದಂತೆ ತಡೆದು ಉತ್ಸವ ತೆರಳಿದ ಮೇಲೆ ಬಿಡಲಾಗುತ್ತಿತ್ತು, ಆದರೆ ಕಳೆದ ಹಲವು ವರ್ಷದಿಂದ ಇಲ್ಲಿನ ಪೊಲೀಸ್ ಠಾಣೆ ಅಧಿಕಾರಿಗಳು ಸಿಬ್ಬಂದಿಯೇ ಜನರನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿದ್ದು, ಅದರಂತೆ ಈ ವರ್ಷವು ಪ್ರಯಾಸ ಪಟ್ಟಿದ್ದು, ಮುಂದಾದರೂ ಹೆಚ್ಚಿನ ಸಿಬ್ಬಂದಿ ನಿಯೋಜಿಸ ಬೇಕು ಎಂಬ ಮಾತು ಕೇಳಿಬಂದಿದೆ.

Share this article