ಪುರಸಭೆ ಸಾಮಾನ್ಯ ಸಭೆ । 15ನೇ ಹಣಕಾಸು ಯೋಜನೆಯಲ್ಲಿ ಪಟ್ಟಣಕ್ಕೆ ₹1.5 ಕೋಟಿ ಮಂಜೂರು
ಕನ್ನಡಪ್ರಭ ವಾರ್ತೆ ಚನ್ನಗಿರಿ2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ 1.5 ಕೋಟಿ ರು.ಹಣ ಸರ್ಕಾರದಿಂದ ಮಂಜೂರಾಗಿದ್ದು ಈ ಹಣದಲ್ಲಿ 60 ಲಕ್ಷ ರುಪಾಯಿಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕದ ವಿವಿಧ ಕಾಮಗಾರಿ ಕೆಲಸಗಳಿಗೆ ಬಳಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ತಿಳಿಸಿದರು.
ಇಲ್ಲಿ ಪುರಸಭೆಯ ಅಧ್ಯಕ್ಷೆ ಲಕ್ಷ್ಮಿದೇವಮ್ಮ ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಅನುದಾನದಲ್ಲಿ ಇನ್ನುಳಿದ ಹಣದಲ್ಲಿ ಪಟ್ಟಣದ ವಿವಿಧ ಕಾಮಗಾರಿ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಚರ್ಚೆ ನಡೆಸಿದ ಸದಸ್ಯ ನಂಜುಂಡಪ್ಪ ಮಾತನಾಡಿ, ಈಗಾಗಲೇ ಘನತ್ಯಾಜ್ಯ ಘಟಕಕ್ಕೆ ಸಾಕಷ್ಟು ಹಣವನ್ನು ವಿನಿಯೋಗ ಮಾಡಿದ್ದು ಪಟ್ಟಣದಲ್ಲಿ ಹಲವಾರು ಅಭಿವೃದ್ದಿ ಕೆಲಸಗಳಿಗೆ ಈ ಹಣವನ್ನು ಬಳಕೆ ಮಾಡಬೇಕು ಎಂಬ ಸಲಹೆ ನೀಡಿದರೆ, ನಾಮ ನಿರ್ದೇಶನ ಸದಸ್ಯ ಶಿವಾಜಿರಾವ್ ಪಟ್ಟಣಕ್ಕೆ ಅವಶ್ಯಕವಾಗಿ ಬೇಕಾಗಿರುವ ಮುಕ್ತಿ ವಾಹನವನ್ನು ಖರೀದಿಸಬೇಕು ಎಂಬ ಸಲಹೆಯನ್ನು ನೀಡಿದಾಗ ಮುಖ್ಯಾಧಿಕಾರಿ ಮಾಹಿತಿ ನೀಡುತ್ತ, ಪ್ರಸ್ತುತ ವರ್ಷದ ಸಾಲಿನಲ್ಲಿ ಎಸ್.ಎಫ್.ಸಿ ಮುಕ್ತ ನಿಧಿಯೋಜನೆಯಲ್ಲಿ 16 ಲಕ್ಷ ರುಪಾಯಿಗಳು ಮಂಜೂರಾಗಿದ್ದು ಈ ಹಣದಲ್ಲಿ 9.27 ಲಕ್ಷ ರು. ಮುಕ್ತಿ ವಾಹಿನಿಗೆ ಕಾಯ್ದಿರಿಸಿಕೊಂಡು ಇನ್ನುಳಿದ ಹಣದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಸುರಕ್ಷಾ ಕವಚಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.ಮುಕ್ತಿ ವಾಹನ ಖರೀದಿಗೆ 35ರಿಂದ 40 ಲಕ್ಷ ರು. ಹಣ ಬೇಕಾಗಿದ್ದು ಇನ್ನುಳಿದ ಹಣವನ್ನು ಪುರಸಭೆಯ ನಿಧಿಯಿಂದ ಭರಿಸಿಕೊಂಡು ವಾಹನವನ್ನು ಖರೀದಿ ಮಾಡಲಾಗುವುದು ಎಂದು ಸಭೆಗೆ ತಿಳಿಸಿದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸೂಳೆಕೆರೆ ಮತ್ತು ಹಿರೇಮಳಲಿ ನೀರು ಶುದ್ಧೀಕರಣ ಘಟಕಕ್ಕೆ ನೀರನ್ನು ಶುದ್ಧೀಕರಿಸುವ ರಾಸಾಯನಿಕ ಸಾಮಗ್ರಿಗಳ ಖರೀದಿಗಾಗಿ ಟೆಂಡರ್ ಕರೆಯುವ ವಿಚಾರದ ಬಗ್ಗೆ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ಸಭೆಯ ಗಮನಕ್ಕೆ ತಂದಾಗ ಸದಸ್ಯ ಬಿ.ಆರ್.ಹಾಲೇಶ್ ಮಾತನಾಡಿ, ಸೂಳೆಕೆರೆಯಿಂದ ತಾಲೂಕಿನ 89 ಹಳ್ಳಿಗಳಿಗೂ ಕುಡಿಯುವ ನೀರು ಸರಬರಾಜಾಗುತ್ತಿದೆ. ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳ ಕುಡಿಯುವ ನೀರಿನ ಘಟಕಗಳನ್ನು ಸೇರಿಕೊಂಡಂತೆ ಟೆಂಡರ್ ಕರೆಯುವುದು ಬೇಡ. ಪಟ್ಟಣಕ್ಕೆ ಬೇಕಾದ ವಸ್ತುಗಳ ಖರೀದಿಗೆ ಸಂಬಂಧಪಟ್ಟಂತೆ ಟೆಂಡರ್ ಇರಲಿ ಎಂದು ಸಲಹೆ ನೀಡಿದರು.ಉಪಾಧ್ಯಕ್ಷೆ ಸರ್ವಮಂಗಳಮ್ಮ, ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಕಂದಾಯ ಅಧಿಕಾರಿ ಮಂಜುನಾಥ್, ಕಛೇರಿಯ ವ್ಯವಸ್ಥಾಪಕ ಆರಾಧ್ಯ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಲೆಕ್ಕಾಧಿಕಾರಿ ಪ್ರೇಮಲೀಲಾ,ಇತರ ಸದಸ್ಯರು ಹಾಜರಿದ್ದರು.