ಬಳ್ಳಾರಿ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕು ಎಂದು ಹಿರಿಯ ಚಿತ್ರಕಲಾವಿದ ಪಿ.ಎಸ್. ಕಡೇಮನಿ ಸಲಹೆ ನೀಡಿದರು.
ನಗರದ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ.ಮೋದಿ ನ್ಯಾಷನಲ್ ಶಾಲೆಯಲ್ಲಿ ಜರುಗಿದ ಕನ್ನಡ ಕವಿಕಾವ್ಯ ಪರಿಚಯ, ಭಾಷಣ, ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಕಿರುತೆರೆ ನಟಿ, ಲೇಖಕಿ ಜಯಲಕ್ಷ್ಮಿ ಪಾಟೀಲ್ ಮಾತನಾಡಿ, ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಮ್ಮಿಕೊಳ್ಳುವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.ವೀವಿ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಹಾಂತೇಶ್, ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ವೀವಿ ಸಂಘದ ಸಹ ಕಾರ್ಯದರ್ಶಿ ಯಾಳ್ಪಿ ಪಂಪನಗೌಡ, ವೀವಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಎಲ್.ಟಿ. ಶೇಖರ್, ಕೋರಿ ವಿರುಪಾಕ್ಷಪ್ಪ, ಮುಂಡಾಸದ ಚನ್ನಬಸವರಾಜ್, ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಅಣ್ಣ ವಿರೂಪಾಕ್ಷಪ್ಪ, ವಸಂತಕುಮಾರಗೌಡ ಪಾಟೀಲ್, ಪ್ರಾಂಶುಪಾಲೆ ಸುನಂದಾ ಎಂ. ಪಾಟೀಲ್ ಇದ್ದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚೆ ರಾಜಶೇಖರಗೌಡ ಪ್ರಾಸ್ತಾವಿಕ ಮಾತನಾಡಿದರು.ಬಳಿಕ ಜರುಗಿದ ಕವಿಕಾವ್ಯ ಪರಿಚಯ, ಚಿತ್ರಕಲಾ ಸ್ಪರ್ಧೆಗಳಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ವೀವಿ ಸಂಘದ ಪದಾಧಿಕಾರಿಗಳು ಪ್ರಶಸ್ತಿ ಪತ್ರ, ನಗದು ಬಹುಮಾನ, ಸ್ಮರಣಿಕೆಯನ್ನು ವಿತರಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಮ್ಯಾರಥಾನ್ಗೆ ಎಸ್ಪಿ ಚಾಲನೆ:ಕವಿಕಾವ್ಯ ಪರಿಚಯ, ಚಿತ್ರಕಲಾ ಸ್ಪರ್ಧೆ ಮುನ್ನ ಶಾಲೆಯಿಂದ ಜರುಗಿದ ಪರಿಸರ ಜಾಗೃತಿ ಹಿನ್ನೆಲೆಯ ಮ್ಯಾರಥಾನ್ ಸ್ಪರ್ಧೆಗೆ ಎಸ್ಪಿ ಡಾ.ಶೋಭಾರಾಣಿ ಚಾಲನೆ ನೀಡಿದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚೆ ರಾಜಶೇಖರಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲೆಯಿಂದ ಶುರುಗೊಂಡ ಮ್ಯಾರಥಾನ್ ವಿದ್ಯಾನಗರ ವೃತ್ತ, ಸುಧಾವೃತ್ತ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಮಾರೋಪಗೊಂಡಿತು. ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು.