ಭಾರತ ಸ್ಕೌಟ್ಸ್, ಗೈಡ್ಸ್ ಆಯೋಜನೆ
ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಜೀವನ ಕೌಶಲಗಳನ್ನು ವೃದ್ಧಿಸುವುದರ ಜತೆಗೆ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ ತಿಳಿಸಿದರು.
ಆಲೂರು ತಾಲೂಕು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳನ್ನು ಪಠ್ಯೇತರ ಚಟವಟಿಕೆಗಳಲ್ಲಿ ಸಕ್ರಿಯಗೊಳಿಸುವ ಮೂಲಕ ಚಲನಶೀಲರನ್ನಾಗಿ ಮಾಡುತ್ತದೆ. ಮಕ್ಕಳಿಗೆ ಪಠ್ಯದಂತೆಯೇ ಪಠ್ಯೇತರ ಕೌಶಲಗಳು ಬಹಳ ಮಹತ್ವದ್ದಾಗಿವೆ. ಸಮಾಜದಲ್ಲಿ ಮಗು ವಿಕಸನ ಹೊಂದಲು ಸಾಮಾಜಿಕ ಮೌಲ್ಯಗಳು ಅತ್ಯಗತ್ಯ ಎಂದು ಹೇಳಿದರು.ಪ್ರೀತಿ, ವಾತ್ಸಲ್ಯ, ಕಾರುಣ್ಯ, ಸಹಾಯ, ನ್ಯಾಯ, ನೀತಿ ಮುಂತಾದ ಮೌಲ್ಯಗಳು ಪ್ರತಿ ಮಗುವಿನಲ್ಲೂ ಅಂತರ್ಗತಗೊಳ್ಳಬೇಕು. ಈ ಮಹತ್ತರ ಕಾರ್ಯವನ್ನು ಬೇಸಿಗೆ ಶಿಬಿರಗಳು, ಇಲ್ಲಿನ ವಿಶೇಷ ತರಗತಿಗಳು, ಸಂಪನ್ಮೂಲ ವ್ಯಕ್ತಿಗಳು ಮಾಡುತ್ತಾರೆ. ಇಂತಹ ಸಂದರ್ಭಗಳನ್ನು ಮಕ್ಕಳು ಹಾಗೂ ಪೋಷಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಮುಖ್ಯ ಶಿಕ್ಷಕಿ ಚಂದ್ರಮ್ಮ, ತಾಲೂಕು ಖಜಾಂಚಿ ಬಿ.ಎಸ್. ಹಿಮ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಜಿ. ಕಾಂಚನಮಾಲ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಶಿಕ್ಷಕಿ ಕೆ.ಟಿ. ಶೋಭಾ, ನಯನ, ನಿವೃತ್ತ ಶಿಕ್ಷಕ ಎಸ್.ಎನ್. ಸಿದ್ಧಯ್ಯ ಹಾಜರಿದ್ದರು.ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ಬೇಸಿಗೆ ಶಿಬಿರ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ ಮಾತನಾಡಿದರು.