- ಸರ್ಕಾರಿ ಕಾಲೇಜಿನಲ್ಲಿ ಸಾಂಸ್ಕೃತಿಕ-ಕ್ರೀಡಾ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ಪಠ್ಯೇತರ ಚಟುವಟಿಕೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳ ಸಾಮರ್ಥ್ಯ ಕೇವಲ ಅಂಕಗಳ ಆಧಾರದಲ್ಲಿ ಅಳೆಯುವ ಕಾಲ ಹೋಗಿದೆ. ಈ ಆಧುನಿಕ ಕಾಲದಲ್ಲಿ ಕೌಶಲ, ಸಾಮಾನ್ಯ ಜ್ಞಾನಗಳಿಂದ ವಿದ್ಯಾರ್ಥಿಗಳ ಶಿಕ್ಷಣಮಟ್ಟ ನಿರ್ಧರಿಸಲಾಗುತ್ತಿದೆ ಎಂದು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೆ.ವಿ. ಭೀಮಕುಮಾರ್ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಅಗತ್ಯವಾಗಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉನ್ನತ ದರ್ಜೆಯಲ್ಲಿ ತೇರ್ಗಡೆ ಆಗಬೇಕೆಂದು ವಿದ್ಯಾರ್ಥಿಗಳ ಪೋಷಕರು ಯೋಚಿಸುತ್ತಾರೆ. ಆದರೆ ವಾಸ್ತವತೆ ಬದಲಾಗಿದೆ. ಅಂಕಗಳ ಜೊತೆಗೆ ಬೇಕಾದ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಆಗ ಸುಲಭವಾಗಿ ಉದ್ಯೋಗ ರಂಗ ತಲುಪಬಹುದು ಎಂದರು.ಗ್ರಾಮೀಣ ಹೆಣ್ಣುಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಈ ಭಾಗದಲ್ಲಿ ಏಕೈಕ ಬಾಲಕಿಯರ ಕಾಲೇಜು ಇದಾಗಿದೆ. ವಿದ್ಯಾರ್ಥಿನಿಯರು ಶೈಕ್ಷಣಿಕ ಅಭಿವೃದ್ಧಿ ಹೊಂದುವ ಮೂಲಕ ತಮ್ಮೂರು, ಪೋಷಕರಿಗೆ ಹೆಸರು ತರುವಂತೆ ಹೇಳಿದರು.
ಉಪನ್ಯಾಸಕ ಕೆ.ಪಿ.ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಬೇಕು. ಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯ ಆಲೋಚನೆಗಳ ಕಡೆಗೆ ಗಮನಹರಿಸಬೇಕು. ಯಾವುದೇ ದುಶ್ಚಟಗಳಿಗೆ ಬಲಯಾಗದೇ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.ಈ ಸಂದರ್ಭ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ತಂದೆ- ತಾಯಿ ಸ್ಮರಣಾರ್ಥ ನೀಡಿರುವ ದತ್ತಿದಾನದ ಹಣದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹೂರುಗಿ ಮಲ್ಲಪ್ಪ ಅವರು ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಾದ ಪ್ರಿಯಾಂಕ, ಸಂಜನಾ, ಶೈಲಾ, ಚಂದನಬಾಯಿ, ಮಾಧುರಿ, ಲಾವಣ್ಯ ಅವರಿಗೆ ಪ್ರೋತ್ಸಾಹಧನ ನೀಡಿ, ಸನ್ಮಾನಿಸಿದರು.
ಸಾಂಸ್ಕೃತಿಕ ಕಾರ್ಯದರ್ಶಿ ಉಪನ್ಯಾಸಕ ಬಿ.ಜಗದೀಶ್ ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೋಡಿಕೊಪ್ಪ ಚನ್ನಪ್ಪ ಉದ್ಘಾಟಿಸಿದರು. ಸದಸ್ಯರಾದ ಚಂದ್ರಕಲಾ, ಹರೀಶ, ಮಲ್ಲೇಶಪ್ಪ, ಉಪನ್ಯಾಸಕ ಶಾಂತನಗೌಡ ಜಿ.ಪಿ, ರವಿಶಂಕರ್ ಎಂ.ಎಸ್., ಸುಬ್ಬರಾಯಡು, ನಾಗರಾಜ್ ನರಸಾಪುರ, ವಾಣಿ ವಿ., ಹಲಿಮಾಬೀ, ದೀಪಾ, ಸನಾವುಲ್ಲಾ ಮತ್ತಿತರರಿದ್ದರು.- - -
-ಚಿತ್ರ.ಜೆಪಿಜಿ:ಸರ್ಕಾರಿ ಕಾಲೇಜಿನ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಪ್ರಾಚಾರ್ಯ ಜೆ.ವಿ. ಭೀಮಕುಮಾರ್ ಮಾತನಾಡಿದರು.