ಸಿ.ಸಿದ್ದರಾಜು, ಮಾದಹಳ್ಳಿ
ಕನ್ನಡಪ್ರಭ ವಾರ್ತೆ ಮಳವಳ್ಳಿದಕ್ಷಿಣ ಭಾಗದ ಕಾವೇರಿ ಕೊಳ್ಳದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡು ಕಾವೇರಿ ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿರುವುದರಿಂದ ತಾಲೂಕಿನ ಶಿವನಸಮುದ್ರದ ಗಗನಚುಕ್ಕಿ, ಭರಚುಕ್ಕಿ ಜಲಪಾತಕ್ಕೆ ಮತ್ತೆ ನೈಸರ್ಗಿಕ ಜೀವಕಳೆ ಬರುತ್ತಿದೆ.
ಎರಡು ಜಲಪಾತಗಳಿಂದ ಗಗನದಿಂದ ನೊರೆಹಾಲಿನಂತೆ ಭೋರ್ಗೆರೆಯುತ್ತಾ ದುಮ್ಮಿಕ್ಕಿ ಹರಿಯುವ ನೀರಿನ ರಮಣೀಯ ದೃಶ್ಯ ನೋಡಲು ಕಣ್ಣೆರಡು ಸಾಲದಾಗಿದೆ. ಇದರಿಂದ ಗಗನಚುಕ್ಕಿ ಜಲಪಾತವು ತನ್ನ ಹಳೇ ವೈಭವವನ್ನು ಪಡೆಯುವತ್ತ ಹೊರಟಿದೆ. ಕಾವೇರಿ ಕೊಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೆಆರ್ಎಸ್ನ ಹೆಚ್ಚುವರಿ ನೀರು ಹಾಗೂ ಕಬಿನಿ ಜಲಾಶಯ ಭರ್ತಿಯಾಗಿದ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡುತ್ತಿರುವುದರಿಂದ ಜಲಪಾತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದ ಜಲಪಾತ ತನ್ನ ನೈಸರ್ಗಿಕ ಸೌಂದರ್ಯವನ್ನು ಪಡೆದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಜೂನ್ ತಿಂಗಳಿಂದ ಆರಂಭವಾಗುವ ಮುಂಗಾರು ಮಳೆ ಸೆಪ್ಟೆಂಬರ್ ವರೆಗೆ ಸುರಿಯುತ್ತದೆ. ಕಳೆದ ಒಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಗಿಡಮರಗಳು ಚಿಗುರೊಡೆದು ಬೆಟ್ಟಗುಡ್ಡಗಳು ಹಚ್ಚಹಸಿರಿನಿಂದ ಕಂಗೋಳಿಸುತ್ತಿರುವ ಮಧ್ಯೆ ಕಾವಲು ಹೊಡೆದು ಹರಿದು ಬರುವ ಕಾವೇರಿ ನದಿ ನೀರು ಗಗನಚುಕ್ಕಿ, ಭರಚುಕ್ಕಿ ಬಳಿ ಸುಮಾರು 90 ಅಡಿ ಎತ್ತರದಿಂದ ಭೋರ್ಗೆರೆಯುತ್ತಾ ದುಮ್ಮುಕ್ಕುತ್ತಿರುವುದು ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.
ಕಳೆದ ಒಂದೂವರೆ ವರ್ಷದಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ಬಣಗುಡುತ್ತಿದ್ದ ಗಗನಚುಕ್ಕಿ ಜಲಪಾತಕ್ಕೆ ಹೆಚ್ಚಾಗಿ ನೀರು ಹರಿದು ಬರುತ್ತಿರುವುದರಿಂದ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಜಲಪಾತವನ್ನು ನೋಡಲು ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರ ದಂಡೇ ಜಲಪಾತದತ್ತ ಬರುತ್ತಿದೆ.ಅವಳಿ ಜಲಪಾತಕ್ಕೆ ಸರಿಸಾಟಿಯೇ ಇಲ್ಲ:
ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಸೇರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಾವೇರಿ ನದಿ ನೀರಿನಿಂದ ಸೃಷ್ಟಿಸಲ್ಪಟ್ಟಿದೆ. ಕಾವೇರಿ ನದಿ ನೀರು ಕಾವಲು ಹೊಡೆದು ಗಗನದಿಂದ ದುಮ್ಮಿಕ್ಕಿ ಜಿಗಿಯುವ ನೀರಿಗೆ ಗಗನಚುಕ್ಕಿ ಜಲಪಾತ ಎಂದು ಕರೆಯಲಾಗುತ್ತಿದೆ. ಇದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿಗೆ ಸೇರಿದೆ.ನೊರೆಹಾಲಿನಂತೆ ಭರದಿಂದ ಸದ್ದು ಮಾಡುತ್ತಾ ದುಮ್ಮಿಕ್ಕಿ ಹರಿಯುವ ನದಿಗೆ ಭರಚುಕ್ಕಿ ಎಂದು ಹೆಸರು ಬಂದಿದೆ. ಇದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿಗೆ ಸೇರಿದೆ. ಈ ಎರಡು ಪ್ರವಾಸಿ ತಾಣಗಳು ಕಾವೇರಿ ಮತ್ತು ಇತರೆ ಉಪನದಿಗಳಿಂದ ನಿರ್ಮಿತವಾಗಿವೆ. ಈ ಅವಳಿ ಜಲಪಾತಗಳ ಜಲಸಿರಿಗೆ ಸರಿಸಾಟಿಯೇ ಇಲ್ಲ ಎನ್ನುವ ಮಾತಿದೆ.
ಈ ಬಾರಿ ಜಲಪಾತೋತ್ಸವಕ್ಕೆ ಅವಕಾಶ ನೀಡುವುದೇ ವರುಣ:ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತವನ್ನು ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು, ವಿಶ್ವದ್ಯಾಂತ ಪರಿಚಯಿಸಲು ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ಸಹಕಾರದಲ್ಲಿ ಜಲಪಾತೋತ್ಸವವನ್ನು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸುತ್ತಾ ಬರಲಾಗುತ್ತಿತ್ತು.
ಮೂರು ದಿನಗಳ ಕಾಲ ಅದ್ಧೂರಿಯಾಗಿ ಜಲಪಾತೋತ್ಸವ ಆಯೋಜಿಸಿ ನಾಡಿನ ಹೆಸರಂತ ಸಾಹಿತಿಗಳು, ನಟ, ನಟಿಯರು, ಜಾನಪದ ಕಲಾವಿದರರನ್ನು ಆಹ್ವಾನಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಜೊತೆಗೆ ಗಗನಚುಕ್ಕಿ ಜಲಪಾತಕ್ಕೆ ಲೇಸರ್ ಕಿರಣದ ಮೂಲಕ ಬಣ್ಣದ ಚಿತ್ತರವನ್ನು ಮೂಡಿಸಿ ನೈಸರ್ಗಿಕ ಸೌಂದರ್ಯಕ್ಕೆ ಮತ್ತಷ್ಟು ಆಲಂಕಾರ ಮಾಡಿ ಪ್ರವಾಸಿಗರ ಮನಸ್ಸನ್ನು ಪುಳಕಗೊಳ್ಳುವಂತೆ ಮಾಡಲಾಗುತ್ತಿತ್ತು.ಕೋವಿಡ್ ಎದುರಾದಾಗ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ಬರ ಪರಿಸ್ಥಿತಿಯಿಂದಾಗಿ ಕಳೆದ ಕೆಲ ವರ್ಷಗಳಿಂದ ಜಲಪಾತೋತ್ಸವನ್ನು ನಿಲ್ಲಿಸಲಾಗಿದೆ. ಈ ವರ್ಷವಾದರೂ ವರುಣ ಕಣ್ಣು ಬಿಟ್ಟು ಕಾವೇರಿ ಕೊಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಕಾವೇರಿ ನದಿಯಲ್ಲಿ ನೀರು ಹರಿದು ಗಗನಚುಕ್ಕಿ, ಭರಚುಕ್ಕಿಯು ತನ್ನ ಜೀವಕಳೆ ಪಡೆದರೆ ಮಾತ್ರ ಈ ವರ್ಷ ಜಲಪಾತೋತ್ಸವಕ್ಕೆ ಅವಕಾಶ ದೊರೆಯಲಿದೆ.
ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಸಿದ್ಧತೆ:90 ಅಡಿಗೂ ಹೆಚ್ಚು ಎತ್ತರದಿಂದ ನೊರೆಹಾಲಿನಂತೆ ದುಮ್ಮುಕ್ಕುವ ನೀರು, ಪ್ರಕೃತಿ ಸೌಂದರ್ಯದ ಸೊಬಗನ್ನು ಹತ್ತಿರದಿಂದ ನೋಡಬೇಕೆನ್ನುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ಕುಳಿತುಕೊಳ್ಳಲು ಗಗನಚುಕ್ಕಿ ಜಲಪಾತದಲ್ಲಿ ಕಾಮಗಾರಿ ನಡೆಯುತ್ತಿದೆ.
ಈ ಪ್ರವಾಸಿ ತಾಣಕ್ಕೆ ಮಳೆಗಾಲ ಸೇರಿದಂತೆ ರಜಾ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸೌಲಭ್ಯದ ಜೊತೆಗೆ ವಿಶೇಷ ಸೌಕರ್ಯ ಒದಗಿಸಲು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ ಪೂರ್ವ ಸಿದ್ದತೆ ನಡೆಸಲಾಗುತ್ತಿದೆ.ಕಾರ್ಯರೂಪಕ್ಕೆ ಬಾರದ ರೋಪ್ವೇ ನಿರ್ಮಾಣ:
ಕಾವೇರಿ ನದಿಯೂ ಸತ್ತೇಗಾಲದ ಬಳಿ ಶಿವನಸಮುದ್ರ ದ್ವೀಪವನ್ನು ರೂಪಿಸುತ್ತದೆ. ಕೆಲವು ಮೀಟರ್ಗಳವರೆಗೆ ಹರಿದ ನಂತರ ಕಾವೇರಿ ನೀರು ಎರಡು ವಿಭಜಕ ಜಲಪಾತಗಳಾಗಿ ಹರಿಯುತ್ತವೆ. ಗಗನಚುಕ್ಕಿ- ಭರಚುಕ್ಕಿಯನ್ನು ನೋಡಲು ಪ್ರವಾಸಿಗರು ಸುಮಾರು 15 ಕಿ.ಮೀ ಸುತ್ತಬೇಕಾಗುತ್ತದೆ.ಗಗನಚುಕ್ಕಿ- ಭರಚುಕ್ಕಿ ಜಲಪಾತಗಳ ಮಧ್ಯೆ ರೋಪ್ವೇ ನಿರ್ಮಿಸಿದರೇ ಕೇವಲ ಮೂರ್ನಾಲ್ಕು ಕಿ.ಮೀ ನಡುವೇ ಎರಡು ಜಲಪಾತವನ್ನು ಒಂದೇ ಭಾರಿ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಸರ್ಕಾರಗಳು ಕೂಡ ಗಮನ ಹರಿಸಿದರೂ ಇಂದಿಗೂ ರೋಪ್ವೇ ನಿರ್ಮಿಸಲು ಸಾಧ್ಯವಾಗಿಲ್ಲ. ರೋಪ್ ವೇ ನಿರ್ಮಾಣದ ಬಗ್ಗೆ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿದಾಗ ಭರವಸೆ ನೀಡುತ್ತಾರೆ ಹೊರತು ಅದನ್ನು ಕಾರ್ಯರೂಪಕ್ಕೆ ತರಲು ಇಂದಿಗೂ ಸಾಧ್ಯವಾಗಿಲ್ಲ.