ಕನ್ನಡಪ್ರಭ ವಾರ್ತೆ ಬೆಂಗಳೂರು
ವಾರದ ಹಿಂದೆ ಮಂಡ್ಯ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದ ಅವರು, ಸಮ್ಮೇಳನದ ಯಶಸ್ಸಿಗಾಗಿ ಸಂದೇಶ ಕಳಿಸಿದ್ದರು. ಇದೇ ಅವರ ಕೊನೆಯ ಪತ್ರವಾಗಿದೆ.
ಪತ್ರದಲ್ಲೇನಿದೆ?:ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ರೂಪುಗೊಂಡ ಮಂಡ್ಯದಲ್ಲಿ 3ನೇ ಬಾರಿಗೆ ನಡೆಯುತ್ತಿರುವ ಕನ್ನಡದ ಸಿರಿಹಬ್ಬ ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇನೆ.
ಮಂಡ್ಯ ಆತಿಥ್ಯಕ್ಕೆ ಹೆಸರಾದ ಜಿಲ್ಲೆ. ಈ ಹಿಂದಿನ ಸಮ್ಮೇಳನಗಳನ್ನು ತಮ್ಮ ಮನೆಯ ಹಬ್ಬವಾಗಿ ಆಚರಿಸಿದ ಕೀರ್ತಿ ಮಂಡ್ಯ ಜನರಿಗೆ ಸಲ್ಲುತ್ತದೆ. ಪ್ರಥಮ ಬಾರಿಗೆ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಜಯದೇವಿ ತಾಯಿ ಲಿಗಾಡೆಯವರು ಪ್ರಥಮ ಮಹಿಳಾ ಸಮ್ಮೇಳನಾಧ್ಯಕ್ಷರಾಗಿದ್ದು ಐತಿಹಾಸಿಕ ದಾಖಲೆ. ಅದೇ ರೀತಿ 1994ರಲ್ಲಿ ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ಜಿ. ಮಾದೇಗೌಡರ ನೇತೃತ್ವದಲ್ಲಿ ನಡೆದ ಸಮ್ಮೇಳನ ಅವಿಸ್ವರಣೀಯ.
ನಾಡಿನ ಶ್ರೀಮಂತ ಸಾಹಿತ್ಯ ಪರಂಪರೆಗೆ ಮಂಡ್ಯದ ಕೊಡುಗೆ ಅಪಾರ. ಪ್ರಾತಃಸ್ಮರಣೀಯರಾದ ಪಿಟೀಲು ಚೌಡಯ್ಯ, ಬಿ.ಎಂ. ಶ್ರೀಕಂಠಯ್ಯ, ಪು.ತಿ.ನರಸಿಂಹಾಚಾರ್, ಕೆ.ಎಸ್. ನರಸಿಂಹಸ್ವಾಮಿ, ಜಾನಪದ ತಜ್ಞ ಡಾ। ಎಚ್.ಎಲ್.ನಾಗೇಗೌಡ, ಖ್ಯಾತ ನಟ ಅಂಬರೀಶ್ ಅವರನ್ನು ಪ್ರಸ್ತುತ ಸಮ್ಮೇಳನದಲ್ಲಿ ನೆನೆಯುವುದು ಅವಶ್ಯ.
ಸರ್ವರಿಗೂ ಆದರ್ಶನೀಯರಾದ ಜಗದ ಕವಿ ಕುವೆಂಪು ಅವರ ಸರ್ವ ಶಾಂತಿಯ ತೋಟದ ಸ್ತುತಿಯನ್ನು ನೆನೆಯುತ್ತಾ ಸಾಹಿತ್ಯ ಸಮ್ಮೇಳನಕ್ಕೆ ಶುಭವಾಗಲಿ, ಈ ಸಂದರ್ಭದಲ್ಲಿ ಹೊರತರುತ್ತಿರುವ ನೆನಪಿನ ಸಂಪುಟಕ್ಕೆ ನನ್ನ ಶುಭಕಾಮನೆಗಳು.