ಕನ್ನಡಪ್ರಭ ವಾರ್ತೆ ವಿಜಯಪುರ
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಸೌಲಭ್ಯ ಒದಗಿಸುವ ಮೂಲಕ ಡಿಜಿಟಲ್ ಟಚ್ ನೀಡಲಾಗುತ್ತಿದೆ ಎಂದು ಆಶಾ ಪಾಟೀಲ ಹೇಳಿದರು.ತಿಕೋಟಾ ತಾಲೂಕಿನ ಅರಕೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಎಕಸ್ ಸಂಸ್ಥೆಯಿಂದ ಸಿಎಸ್ಆರ್ ಅನುದಾನದಡಿ ಮಂಜೂರಾಗಿರುವ ಸ್ಮಾರ್ಟ್ ಬೋರ್ಡ್ ಉದ್ಘಾಟಿಸಿ ಮತ್ತು ಧಾಸ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಿಎಸ್ಆರ್ ಅನುದಾನದಡಿ ಅರಕೇರಿ ಎಲ್.ಟಿ-3ರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾ ಸಲಕರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾನಗರಗಳ ಖಾಸಗಿ ಶಾಲೆಗಳಲ್ಲಿ ಸಿಗುವ ಅತ್ಯಾಧುನಿಕ ಸೌಲಭ್ಯಗಳನ್ನು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒದಗಿಸಲು ಸಚಿವ ಎಂ.ಬಿ.ಪಾಟೀಲ ಅವರು ಸಿ.ಎಸ್.ಆರ್ ಅನುದಾನವನ್ನು ಬಳಸಿ ಸ್ಮಾರ್ಟ್ ಬೋರ್ಡ್ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಈ ಅನುದಾನವನ್ನು ಬಳಸಿ ಬಬಲೇಶ್ವರ ಮತಕ್ಷೇತ್ರದ ಸರಕಾರಿ ಶಾಲೆಗಳಲ್ಲಿ ಕಳೆದ ವರ್ಷ 25 ಮತ್ತು ಈ ವರ್ಷ 25 ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಮಕ್ಕಳು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತಿತರ ವಿಷಯಗಳನ್ನು ದೃಶ್ಯಮಾಧ್ಯಮ (ಆಡಿಯೋ-ವಿಶುವಲ್ಸ್) ಮೂಲಕ ಸರಳವಾಗಿ ಕಲಿಯಬಹುದಾಗಿದೆ. ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಕರು ಕೂಡ ಸ್ಮಾರ್ಟ್ ಕ್ಲಾಸ್ ಬಗ್ಗೆ ಸಂಪೂರ್ಣ ಬಗ್ಗೆ ಮಾಹಿತಿ ಪಡೆದು ಮಕ್ಕಳಿಗೆ ಗುಣಮಟ್ಟದ ಬೋಧನೆ ಮಾಡಬೇಕು. ಅಲ್ಲದೇ, ಮಕ್ಕಳ ಹಾಜರಾತಿ ಬಗ್ಗೆ ಗಮನ ಹರಿಸಬೇಕು. ಅದರ ಜೊತೆಗೆ ಮೊಬೈಲ್ ಗಿಳಿನಿಂದ ಮಕ್ಕಳು ಹೊರಬರಲು ಜಾಗೃತಿ ಮೂಡಿಸಬೇಕು ಎಂದು ಸಲಹೆಗಳನ್ನು ನೀಡಿದರು.ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ, ಸಚಿವ ಎಂ.ಬಿ.ಪಾಟೀಲರು ಬಸವ ನಾಡಿನಲ್ಲಿ ಈಗಾಗಲೇ ಜಲಕ್ರಾಂತಿ ಮಾಡಿದ್ದಾರೆ. ಈಗ ಶಿಕ್ಷಣ ಕ್ರಾಂತಿ ಮಾಡುತ್ತಿದ್ದು, ನಮ್ಮ ಗ್ರಾಮೀಣ ಭಾಗದ ಬಡ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸುವ ಮೂಲಕ ನಗರ ಮತ್ತು ಗ್ರಾಮೀಣ ಭಾಗದ ಮಧ್ಯ ಇರುವ ಅಂತರವನ್ನು ನಿವಾರಿಸಿದ್ದಾರೆ. ನಮ್ಮ ಗ್ರಾಮೀಣ ಪ್ರತಿಭೆಗಳಿಗೆ ಇದು ವರದಾನವಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮಹಾ ನಗರಗಳ ಕಾರ್ಪೋರೇಟ್ ಶಾಲೆಗಳ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಾಧನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಅಖಿಲಾ ಪಾಟೀಲ, ಗ್ರಾಪಂ ಅಧ್ಯಕ್ಷ ರಂಗಾ ಬರಕಡೆ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಣ್ಣ ಶಿರಾಳಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಪೀರ ಪಟೇಲ ಪಾಟೀಲ, ಮುಖಂಡರಾದ ಶ್ರೀಶೈಲ ದಳವಾಯಿ, ಪ್ರಕಾಶ ರಾಠೋಡ, ತುಕಾರಾಮ ಮೋಹಿತೆ, ಅಶೋಕ ರಾಠೋಡ, ಮಧುಗೌಡ ಪಾಟೀಲ, ಗೋವಿಂದ ರಾಠೋಡ, ಸುಂದರಪಾಲ ರಾಠೋಡ, ತುಕಾರಾಮ ರಾಠೋಡ, ಶೈಲಜಾ ರಾಠೋಡ, ವಿಜಯಪುರ ಗ್ರಾಮೀಣ ಬಿಇಓ ಪ್ರಮೋದಿನಿ ಬಳೋಲಮಟ್ಟಿ, ಶಾಲೆಯ ಶಿಕ್ಷಕರು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.