ಹಾನಗಲ್ಲ: ನಿವೇಶನದ ಮಾಲೀಕತ್ವ ವಿಷಯವಾಗಿ ಮೂರು ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಮತ್ತು ದಿಗ್ಬಂದನ ಹಾಕಿರುವ ಘಟನೆ ತಾಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇದಕ್ಕೆ ಪುಷ್ಟಿ ನೀಡುವಂತೆ, ವಿವಾದಿತ ನಿವೇಶನಕ್ಕೆ ಹೊಂದಿಕೊಂಡಂತೆ ಇರುವ ರಸ್ತೆಗೆ ತಂತಿ ಬೇಲಿ ಹಾಕಿದ್ದಲ್ಲದೇ, ರಸ್ತೆ ಮೇಲೆ ತಿಪ್ಪೆಯ ಗೊಬ್ಬರವನ್ನೂ ಸುರಿದು ಓಡಾಟಕ್ಕೆ ಅಡಚಣೆ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಸ್ತೆಗೆ ಹಾಕಿದ್ದ ತಂತಿ ಬೇಲಿಯನ್ನು ಶುಕ್ರವಾರ ತೆರವುಗೊಳಿಸಲಾಗಿದೆ.
ವಸಂತ ಮುಪ್ಪಣ್ಣ ಹರಿಜನ ಮಾತನಾಡಿ, ಕಳೆದ ಬುಧವಾರದಿಂದ ಫಕ್ಕೀರೇಶ ಹಾವಳೇರ ಹಾಗೂ ಅವರ ಬೆಂಬಲಿಗರು ನಮ್ಮ ಕುಟುಂಬಕ್ಕೆ ದಿಗ್ಭಂಧನ ಹಾಕಿದ್ದಾರೆ. ಈ ಬಹಿಷ್ಕಾರದಿಂದ ನಮ್ಮ ಕುಟುಂಬಕ್ಕೆ ಮಾನಸಿಕ ಆಘಾತವಾಗಿದೆ. ಅಲ್ಲದೇ ನಮ್ಮ ಮಕ್ಕಳು ಶಾಲೆಗೆ ತೆರಳಲು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಸಿಪಿಐ ಬಿ.ಕೆ. ಹಳಬಣ್ಣನವರ, ಊರಿನ ಪ್ರಮುಖರು, ತೊಂದರೆಗೆ ಒಳಗಾದ ದಲಿತ ಕುಟುಂಬಗಳ ಜೊತೆ ಮಾತನಾಡಿ ದೈರ್ಯ ತುಂಬುವ ಜೊತೆಗೆ ದಲಿತ ಕುಟುಂಬಗಳ ಮೂಲ ಸೌಕರ್ಯಗಳಿಗೆ ಯಾವುದೇ ಅಡ್ಡಿ ಮಾಡಬಾರದು ಎಂದು ತಾಕೀತು ಮಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಯಾವುದೇ ದೂರು ದಾಖಲಾಗಿಲ್ಲ.
ಮುಪ್ಪಣ್ಣ ಹರಿಜನ ಕುಟುಂಬ ಇದು ನಮ್ಮದೇ ನಿವೇಶನ, ಕೆಲವು ವರ್ಷಗಳ ಹಿಂದೆ ಫಕ್ಕೀರೇಶ ಮಲ್ಲಪ್ಪ ಹಾವಳೇರ ಅವರ ಹಿರಿಯರ ವಿನಂತಿ ಮೇರೆಗೆ ಈ ಜಾಗೆಯನ್ನು ತಿಪ್ಪೆ ಹಾಕಿಕೊಳ್ಳಲು ಅವರಿಗೆ ಅನುಮತಿಸಲಾಗಿತ್ತು. ಆದರೆ ಈಗ ಈ ಜಾಗ ತಮ್ಮದೇ ಎಂದು ವಾದಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಜಾಗದ ಪಕ್ಕದಲ್ಲಿರುವ ರಸ್ತೆಯನ್ನು ತಂತಿ ಬೇಲಿ ಹಾಕಿ ಬಂದ್ ಮಾಡಿ ನಮಗೆ ಗ್ರಾಮದಲ್ಲಿ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರು. ಕಳೆದ ಬುಧವಾರದಿಂದ ನಾವು ಗ್ರಾಮದಲ್ಲಿ ಪ್ರವೇಶಿಸದಂತೆ ಮನೆಯಲ್ಲೇ ಗೃಹಬಂಧನಕ್ಕೆ ಒಳಗಾಗಿದ್ದೇವೆ ಎಂದು ಅಳಲು ತೋಡಿಕೊಂಡರು. ಫಕ್ಕಿರೇಶ ಮಲ್ಲಪ್ಪ ಹಾವಳೇರ ಮಾತನಾಡಿ, ಇದು ನೂರಾರು ವರ್ಷಗಳಿಂದ ನಮ್ಮ ಜಾಗವಾಗಿದೆ. ಈ ಜಾಗದ ಪಕ್ಕದಲ್ಲಿ ಮುಪ್ಪಣ್ಣ ಹರಿಜನ ಅವರ ಕುಟುಂಬದ ಮನೆಗಳಿಗೆ ತೆರಳಲು ನಮ್ಮ ಜಾಗೆಯಲ್ಲಿಯೇ ಗ್ರಾಮ ಪಂಚಾಯಿತಿಯಿಂದ ಕಾಂಕ್ರೀಟ್ ರಸ್ತೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ಈಗ ಕಾಂಕ್ರೀಟ್ ರಸ್ತೆ ಪಕ್ಕದ ಜಾಗ ತಮ್ಮದೇ ಎಂದು ಮುಪ್ಪಣ್ಣನ ಕುಟುಂಬ ವಾದಿಸುತ್ತಿದೆ. ಇದಕ್ಕೆ ವಾಸ್ತವ ವರದಿಯನ್ನು ಅನುಸರಿಸಿ ನಮ್ಮ ಜಾಗ ನಮ್ಮದಾಗೇ ಉಳಿಯಬೇಕು. ನಾವಾಗಲಿ ನಮ್ಮೂರಿನ ಜನರಾಗಲಿ ಮುಪ್ಪಣ್ಣ ಹರಿಜನ ಅವರ ಕುಟುಂಬಕ್ಕೆ ಯಾವುದೇ ದಿಗ್ಭಂಧನ ಹೇರಿಲ್ಲ ಎಂದರು.