ಕುಟುಂಬಸ್ಥರನ್ನು ಕಳೆದುಕೊಂಡು ಅನಾಥರಾಗಿ ಸಂಕಷ್ಟಕ್ಕೆ ಸಿಲುಕಿದ್ದ ಎಳೆ ವಯಸ್ಸಿನ ಬಡ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮಾನವೀಯತೆ ಮೆರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕುಟುಂಬಸ್ಥರನ್ನು ಕಳೆದುಕೊಂಡು ಅನಾಥರಾಗಿ ಸಂಕಷ್ಟಕ್ಕೆ ಸಿಲುಕಿದ್ದ ಎಳೆ ವಯಸ್ಸಿನ ಬಡ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಬಳ್ಳೇಕೆರೆ ಗ್ರಾಮದ ನಿವಾಸಿ ಗಿರಿಜಾ ಮಹದೇವ (34) ತೆಂಡೇಕೆರೆ ಪಂಚಾಯ್ತಿಯಲ್ಲಿ ಕಳೆದ ಒಂದು ವರ್ಷದಿಂದ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದರು. ಸರ್ಕಾರದ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಮಾನವ ಸರಪಳಿ ಮುಗಿಸಿ ಬಸ್ಸಿನಲ್ಲಿ ತಂಡೇಕೆರೆಗೆ ಬಂದು ದ್ವಿಚಕ್ರ ವಾಹನ ಮೂಲಕ ಗಿರಿಜಾ ಹಾಗೂ ಹುಣಸನಹಳ್ಳಿ ನೀರಗಂಟಿ ಪ್ರಭಾವತಿ ಅವರು ಸ್ವಗ್ರಾಮಕ್ಕೆ ತೆರಳುತ್ತಿದ್ದರು.
ಈ ವೇಳೆ ಅಪಘಾತವಾಗಿ ಪ್ರಭಾವತಿ ಗಂಭೀರವಾಗಿ ಗಾಯಗೊಂಡರೆ ಗಿರಿಜಾ ಮೃತಪಟ್ಟಿದ್ದರು. ಗಿರಿಜಾ ಪತಿ ಮಹದೇವು ಕಳೆದ ವರ್ಷ ಮೃತಪಟ್ಟಿದ್ದರು. ಕಳೆದ 4 ತಿಂಗಳ ಹಿಂದೆ ಇದೇ ಕುಟುಂಬಕ್ಕೆ ಸೇರಿದ ಅಜ್ಜಿ ಭಾಗ್ಯಮ್ಮ ಮತ್ತು ದೊಡ್ಡಪ್ಪ ಕೂಡ ಸಾವಿಗೀಡಾಗಿದ್ದರು.
ಕುಟುಂಬದವರನ್ನು ಕಳೆದುಕೊಂಡು ಅನಾಥರಾಗಿದ್ದ ಗಿರಿಜಾ ಮಕ್ಕಳಾದ ಸುಕನ್ಯಾ (12) ಮತ್ತು ಸಿದ್ದಾರ್ಥ(09) ಸಂಪೂರ್ಣ ಅನಾಥರಾಗಿದ್ದಾರೆ. ಸುಕನ್ಯಾ ಬಳ್ಳೇಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ, ಆಕೆ ಸಹೋದರ ಸಿದ್ದಾರ್ಥ 4ನೇ ತರಗತಿಯಲ್ಲಿ ಓದುತ್ತಿದ್ದರು.
ಶಾಲೆ ಮುಖ್ಯಶಿಕ್ಷಕ ನಿಂಗೇಗೌಡರ ಮೂಲಕ ಅನಾಥ ಮಕ್ಕಳ ಬಗ್ಗೆ ಮಾಹಿತಿ ಪಡೆದ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳೇಕೆರೆ ಗ್ರಾಮಕ್ಕೆ ಆಗಮಿಸಿ ಮಕ್ಕಳಿಗೆ ಆರ್ಥಿಕ ನೆರವು ನೀಡಿ ಅವರ ಮುಂದಿನ ಜೀವನ ಮತ್ತು ವಿದ್ಯಾಭ್ಯಾಸದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಮೃತ ಗಿರಿಜಾರ 11ನೇ ದಿನದ ಕಾರ್ಯ ಮುಗಿದ ನಂತರ ಹೆಣ್ಣು ಮಗುವನ್ನು ಮೊರಾರ್ಜಿ ವಸತಿ ಶಾಲೆಗೆ ದಾಖಲಿಸಲು ಕ್ರಮ ವಹಿಸುವಂತೆ ಸೂಚಿಸಿದರಲ್ಲದೇ ಗಂಡುಮಗು ಸಿದ್ದಾರ್ಥನ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು.
ಈ ವೇಳೆ ಗ್ರಾಪಂ ಸದಸ್ಯೆ ಸವಿತಾ ಇಂದ್ರೇಶ್, ಶಾಲಾ ಮುಖ್ಯ ಶಿಕ್ಷಕ ನಿಂಗೇಗೌಡ, ಸಹ ಶಿಕ್ಷಕರಾದ ಮಹೇಶ್ಕುಮಾರ್, ಅಂಗನವಾಡಿ ಕಾರ್ಯಕರ್ತೆ ರಾಧ, ಎಸ್ ಡಿಎಂಸಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ನರಸಿಂಹರಾಜು, ಸದಸ್ಯರಾದ ಶಿವಕುಮಾರ್, ಶಿವಮ್ಮ, ಮಲ್ಲೇಶ್, ಡೇರಿ ಅಧ್ಯಕ್ಷೆ ಜಯಮ್ಮ, ಗ್ರಾಮಸ್ಥರಾದ ಮಲ್ಲಪ್ಪ, ಸುಶೀಲಮ್ಮ, ವೀಣಾ, ಗಾಯಿತ್ರಮ್ಮ, ರತ್ನಮ್ಮ, ಸಣ್ಣಮ್ಮ, ದೇವಿರಮ್ಮ, ಮಣಿಯಮ್ಮ, ಕಾಂತಶೆಟ್ಟಿ, ಶಾಂತಮ್ಮ, ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಮೊಸಳೆಕೊಪ್ಪಲು ದಿನೇಶ್, ಮಾಕವಳ್ಳಿ ಮನು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.