ಮುರ್ಡೇಶ್ವರ ಲಯನ್ಸ್ ಕ್ಲಬ್‌ನಿಂದ ಸಮಾಜಮುಖಿ ಕಾರ್ಯ: ಪ್ರೊ. ಹರಿಪ್ರಸಾದ ರೈ

KannadaprabhaNewsNetwork | Published : Aug 6, 2024 12:32 AM

ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ವಿಶ್ವನಾಥ ಮಡಿವಾಳ, ಕಾರ್ಯದರ್ಶಿಯಾಗಿ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾಗಿ ಡಾ. ವಾದಿರಾಜ ಭಟ್ ಅವರಿಗೆ ಪ್ರಮಾಣವಚನ ಬೋಧಿಸಲಾಯಿತು.

ಭಟ್ಕಳ: ಮುರ್ಡೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ೩೧೭ಸಿ ಲಯನ್ ಜಿಲ್ಲೆಯ ಎಲ್‌ಸಿಐಎಫ್ ಕೋಆರ್ಡಿನೇಟರ್ ಪ್ರೊ. ಹರಿಪ್ರಸಾದ ರೈ ಅವರು, ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಸಮಾಜಮುಖಿ ಕಾರ್ಯಗಳಿಂದ ಇತರರಿಗೆ ಮಾದರಿಯಾಗಿದೆ ಎಂದರು.

೩೧೭ಸಿ ಲಯನ್ ಜಿಲ್ಲೆಯ ೨ನೇ ಉಪ ಗವರ್ನರ್ ರಾಜೀವ ಕೋಟಿಯಾನ್ ಕ್ಲಬ್‌ಗೆ ಹೊಸ ಸದಸ್ಯರನ್ನು ಪರಿಚಯಿಸಿ, ಮಾನವ ಸಂಬಂಧ ಹಾಗೂ ಸೇವೆಯ ಮಹತ್ವದ ಕುರಿತು ವಿವಿಧ ನಿದರ್ಶನಗಳ ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ಹೊನ್ನಾವರ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷ ಶಂಭು ಬೈಲಾರ ಮಾತನಾಡಿ, ಲಯನ್ಸ್ ಕ್ಲಬ್‌ನ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು.

ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ವಿಶ್ವನಾಥ ಮಡಿವಾಳ, ಕಾರ್ಯದರ್ಶಿಯಾಗಿ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾಗಿ ಡಾ. ವಾದಿರಾಜ ಭಟ್ ಅವರಿಗೆ ಪ್ರಮಾಣವಚನ ಬೋಧಿಸಲಾಯಿತು.

ಪ್ರಥಮ ಉಪಾಧ್ಯಕ್ಷರಾಗಿ ಕಿರಣ ಕಾಯ್ಕಿಣಿ, ಎರಡನೇ ಉಪಾಧ್ಯಕ್ಷರಾಗಿ ಡಾ. ಮನೋಜ ಆಚಾರ್ಯ, ಸದಸ್ಯತ್ವ ಅಭಿಯಾನದ ಅಧ್ಯಕ್ಷರಾಗಿ ಡಾ. ಸುನೀಲ್ ಜತ್ತನ್, ಕ್ಲಬ್ ಸಮನ್ವಯಾಧಿಕಾರಿಯಾಗಿ ನಾಗರಾಜ ಭಟ್, ಸೇವಾ ಚಟುವಟಿಕೆ ಅಧ್ಯಕ್ಷರಾಗಿ ಸುಬ್ರಾಯ ನಾಯ್ಕ, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಎಂ.ವಿ. ಹೆಗಡೆ, ಲಯನ್ ಟೇಮರ್ ಆಗಿ ಮಂಜುನಾಥ ನಾಯ್ಕ, ಟೇಲ್‌ಟ್ವಿಸ್ಟರ್ ಆಗಿ ಕೃಷ್ಣ ಹೆಗಡೆ, ನಿರ್ದೇಶಕರಾಗಿ ಬಾಬು ಮೊಗೇರ, ಗೌರೀಶ ಆರ್. ನಾಯ್ಕ, ಗೌರೀಶ ಟಿ. ನಾಯ್ಕ, ಜಗದೀಶ ಜೈನ್, ಶಿವಾನಂದ ದೈಮನೆ, ಕಿರಣ ಮಾನಕಾಮೆ, ಡಾ. ಹರಿಪ್ರಸಾದ ಕಿಣಿ, ಪಿಲಿಫ್ ಅಲ್ಮೇಡಾ, ದಯಾನಂದ ಮೆಣಸಿನಮನೆ ಹಾಗೂ ವಿಶ್ವನಾಥ ಕಾಮತ ಅವರನ್ನು ನಿಯುಕ್ತಿಗೊಳಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಗಜಾನನ ಭಟ್, ನೂತನ ಅಧ್ಯಕ್ಷ ವಿಶ್ವನಾಥ ಮಡಿವಾಳ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭಟ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹರ್ಷನ್ ಗೊಂಡ ಹಾಗೂ ಪಿಯುಸಿಯ ಕಲಾ ವಿಭಾಗದಲ್ಲಿ ಅಮೀನಾ, ವಿಜ್ಞಾನ ವಿಭಾಗದಲ್ಲಿ ಸುಮಿತ್ರಾ ದಿನೇಶ ನಾಯ್ಕ, ವಾಣಿಜ್ಯ ವಿಭಾಗದಲ್ಲಿ ಆಶಿತಾ ಅನಂತ ಮೊಗೇರ ಅವರನ್ನು ಸನ್ಮಾನಿಸಲಾಯಿತು.

ಬಂಗಾರಮಕ್ಕಿ ಶಾಲೆಯ ಧ್ವಜಕಟ್ಟೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯವನ್ನು ನೀಡಲಾಯಿತು. ಗಜಾನನ ಭಟ್ ಸ್ವಾಗತಿಸಿದರು. ಡಾ. ವಾದಿರಾಜ ಭಟ್ ವಂದಿಸಿದರು. ಲಯನ್ ಸದಸ್ಯರಾದ ಎಂ.ವಿ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.